ಮೂಲ: ಖಲೀಲ್ ಗಿಬ್ರಾನ್, ‘ದ ಪ್ರಾಫೆಟ್’
ಅನುವಾದ : ಪುನೀತ್ ಅಪ್ಪು.
ಛತ್ರ ಕಾಯುತ್ತಿದ್ದ ವೃದ್ಧನೊಬ್ಬ ಕೇಳುತ್ತಿದ್ದ
‘ಆಹಾರ’ದ ಬಗ್ಗೆ ಹೇಳು.
ಅಲ್ ಮುಸ್ತಾಫ ನಗುತ್ತಿದ್ದ;
ನೀವೇನು ಸಸ್ಯಗಳಂತೆ
ಭೂಮಿಯ ಸುಗಂಧದಿಂದ,
ಸೂರ್ಯನ ಬೆಳಕಿನಿಂದ ಬದುಕಬಲ್ಲಿರೆ?
ಆಹಾರಕ್ಕಾಗಿ ಕೊಲ್ಲಲೇ ಬೇಕಾದರೆ,
ಆಗ ತಾನೆ ಜನಿಸಿದ ಕರುವಿನಿಂದ
ಅದರ ತಾಯಿಯ ಹಾಲನ್ನು
ಕಸಿಯುವುದರಿಂದಲೇ,
ನಿಮ್ಮ ದಾಹ ತಣಿಯುವುದಾದರೆ,
ನಿಮ್ಮ ಹಸಿವೊಂದು ತಪಸ್ಸಾಗಿರಲಿ!
ನಿಮ್ಮ ಒಲೆಗಳನು ಹೊಕ್ಕು
ಭಸ್ಮವಾಗುವ ಆ ಪರಿಶುದ್ಧ,
ಮುಗ್ಧ ಕಾಡಿನ ಕಟ್ಟಿಗೆಗಳಿಗಿಂತಲೂ
ನಿಮ್ಮ ಮನಸ್ಸು ಮುಗ್ಧವಾಗಿರಲಿ!
ಆ ಮೃಗವನ್ನು ನಿಪಾತಿಸುವಾಗ
ನಿಮ್ಮ ಹೃದಯವು ಹೀಗೆ ಹೇಳಲಿ,
ಯಾವ ಶಕ್ತಿಯಿಂದ ನಿನ್ನನ್ನು
ನಾಶ ಪಡಿಸುತ್ತಿರುವೆನೋ
ನಾನೂ ಅದೇ ರೀತಿ ನಶಿಸಲ್ಪಡುವೆ,
ನಾನೂ ಜೀರ್ಣಿಸಲ್ಪಡುವೆ !
ನಿನ್ನನ್ನು ನನ್ನ ಕೈ ಸೇರಿಸಿದ ಆ ಪ್ರಕೃತಿಯೇ
ನನ್ನನ್ನು ಇನ್ನೊಂದು ಸಶಕ್ತ ಹಸ್ತದಲ್ಲಿರಿಸಲಿದೆ !
ಆ ಪ್ರಕೃತಿಯ ಮಹಾವೃಕ್ಷಕ್ಕೆ
ನೀರುಣಿಸುವ ಬೇರುಗಳಲ್ಲಿ
ನಮ್ಮಿಬ್ಬರ ರಕ್ತಗಳು ಒಂದಾಗಲಿವೆ !
ಸೇಬು ಹಣ್ಣನ್ನು ನಿನ್ನ ಹಲ್ಲುಗಳಿಂದ
ಕಚ್ಚುವಾಗೊಮ್ಮೆ
ನಿನ್ನ ಹೃದಯಕ್ಕೆ ಹೇಳಿ ಬಿಡು,
ನಿನ್ನ ಬೀಜಗಳು ನನ್ನಲ್ಲಿ ಮೊಳಕೆಯೊಡೆಯಲಿ,
ಭವಿಷ್ಯದ ಚಿಗುರುಗಳು ಎನ್ನೆದೆಯಲ್ಲಿ ಅರಳಲಿ,
ನಿನ್ನ ಸುಗಂಧವೇ ಉಸಿರಾಗಲೆನ್ನ,
ಆನಂದದಿಂದ ಈ ಋತುಕಾಲಗಳಲ್ಲಿ
ಜೊತೆಯಾಗೋಣ !
ಸುಗ್ಗಿಯಲ್ಲಿ ಆ ದ್ರಾಕ್ಷಿ ಹಣ್ಣುಗಳನ್ನು
ನಿನ್ನ ದ್ರಾಕ್ಷಿ ತೋಟಗಳಿಂದ ಆರಿಸಿಕೊಂಡು
ತುಳಿತಾಗಾರಕ್ಕೆ ಸಾಗಿಸುವಾಗ
ಹೃದಯವು ನೆನಪಿಸಲಿ,
ನಾನೇ ದ್ರಾಕ್ಷಿತೋಟವಾಗಿರುವೆ,
ನನ್ನಾತ್ಮವು ದ್ರಾಕ್ಷಿ ಹಣ್ಣುಗಳಂತೆ ಒಟ್ಟಾಗಿ
ಕಾಲಕೋಶದೊಳಗೆ ತುಳಿಯಲ್ಪಡಲಿದೆ !
ಚಿರ ಮದ್ಯದಂತೆ ಕಾಲದ
ಅನಂತತೆಯ ಪಾತ್ರೆಗಳಲ್ಲಿ
ಎನ್ನಾತ್ಮವು ತುಂಬಿಕೊಳ್ಳಲಿದೆ.
ಚಳಿಗಾಲದಲ್ಲಿ ಆ ಮಧ್ಯವನು ಸುರಿಯೆ,
ಒಂದೊಂದು ಪಾತ್ರೆಗೂ
ಹೃದಯದೊಳಗೊಂದು ಸಂಗೀತವಿರಲಿ !
ಆ ಸುಗ್ಗಿಯ ನೆನಪಿಗಾಗಿ
ಆ ಸಂಗೀತವಿರಲಿ,
ಆ ದ್ರಾಕ್ಷಿ ತೋಟಗಳಿಗಾಗಿ
ಅಲ್ಲಿ ತುಳಿಯಲ್ಪಟ್ಟ
ದ್ರಾಕ್ಷಿಹಣ್ಣುಗಳಿಗಾಗಿ,
ಮತ್ತು; ತುಳಿದವರಿಗಾಗಿ !!
ತುಂಬು ಅನುಭೂತಿ ಕೊಡುವ ಬರಹಗಳು
Nice