ಗುರುತೆಂಬುದು ಕಡಲ ತಡಿಯ ಗೂಡು

ಶಾಶ್ವತತೆಯ ವ್ಯಸನವು ನಮ್ಮಲ್ಲಿ ಸ್ವಾರ್ಥ ಬುದ್ಧಿಯನ್ನೂ ಮಾತ್ಸರ್ಯವನ್ನೂ ಬೆಳೆಸುತ್ತದೆ. ನಮ್ಮ ಅಪೇಕ್ಷೆ ಕೈಗೂಡದೆ ಹೋಗಬಹುದು ಎನ್ನುವ ಅಸ್ಥಿರತೆ ನಮ್ಮನ್ನು ಕ್ರೋಧಕ್ಕೆಡೆ ಮಾಡುತ್ತದೆ. ಎಷ್ಟೆಂದರೂ ಅಸಹಾಯಕತೆಯೇ ಕೋಪಕ್ಕೆ ಮೂಲವಲ್ಲವೆ? ಈ ಎಲ್ಲದರ ಮೊತ್ತವಾಗಿ ಖಿನ್ನತೆ, ಸಂಕುಚಿತತೆಗಳು ನಮ್ಮಲ್ಲಿ ಮೊಳೆಯುತ್ತವೆ ~ ಆನಂದಪೂರ್ಣ

hejje

ಚಿಕ್ಕ ಮಕ್ಕಳು ಕಡಲ ತಡಿಯಲ್ಲಿ ಕಪ್ಪೆ ಗೂಡು ಕಟ್ಟಿ ನಲಿಯುತ್ತವೆ. ಎಷ್ಟು ಬಾರಿ ಸಾಗರದಲೆಗಳು ಬಂದು ಮರಳಿನ ಗೂಡು ಕೆಡವಿ ಸೆಳೆದೊಯ್ದರೂ ಅವಕ್ಕೆ ಬೇಸರವಿಲ್ಲ. ಅದೇ ಹಿಂದಿನ ಉತ್ಸಾಹದಲ್ಲಿ ಚಪ್ಪಾಳೆ ತಟ್ಟುತ್ತ ಪುನಃ ಗೂಡು ಕಟ್ಟುವ ಕೆಲಸದಲ್ಲಿ ಮಗ್ನವಾಗುತ್ತವೆ. ಸಂಸಾರದಲ್ಲಿ ನಮ್ಮ ಕೆಲಸಗಳೂ ಹೀಗೇ ಇರಬೇಕು. ನಾವು ಮಾಡುವ ಯಾವುದೇ ಕೆಲಸವಾದರೂ ಆ ಹೊತ್ತಿನ ಸಂತೋಷ ದಕ್ಕಿಸಿಕೊಡುವಂತೆ ಇರಬೇಕು. ದರ ಬದಲು ಕೆಲಸ ಮಾಡುವ ಅವಯುದ್ದಕ್ಕೂ ಅದು ನಮ್ಮನ್ನು ಒತ್ತಡದಲ್ಲಿ ಇಡುವಂತೆ, ಅನಂತರದ ಸುಸ್ತಿನ ಖಿನ್ನತೆಗೆ ದೂಡುವಂತೆ ಇರಬಾರದು.

ನಾವು ಬಹಳ ಬಾರಿ ಒಂದು ತಪ್ಪು ಮಾಡುತ್ತೇವೆ. ಮುಂದೆಂದೋ ಖುಷಿ ತರಬಹುದು, ನಮ್ಮದಾಗಿ ಉಳಿಯಬಹುದು ಎಂದು ನೆಚ್ಚಿಕೊಂಡು ಈ ಕ್ಷಣದ ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ. ಇಷ್ಟಕ್ಕೂ ನಾವು ಬದುಕುತ್ತಿರುವುದೇ ಪ್ರತಿ ಕ್ಷಣದ ಅವಕಾಶದಲ್ಲಿ. ಹಿಂದಿರುಗಲಾಗದ ಹೆಜ್ಜೆ, ಮುಂದಿನ ಅನಿಶ್ಚಿತತೆಗಳ ನಡುವಿನ ಬದುಕು ಭೂಮಿಯ ಪ್ರತಿಯೊಂದು ಜೀವಿಯದ್ದೂ ಆಗಿದೆ. ಹೀಗಿರುವಾಗ `ಮುಂದಾಲೋಚನೆ’ಯ ಹೆಸರಲ್ಲಿ, ಶಾಶ್ವತವಾಗಿ ಉಳಿದುಕೊಳ್ಳಬೇಕೆಂಬ ಹಂಬಲದಲ್ಲಿ ಎಡವುತ್ತಲೇ ಇರುತ್ತೇವೆ. ಇದು ದೈನಂದಿನ ಕೆಲಸ, ವೃತ್ತಿ, ಕಲಾ ವಲಯ – ಪ್ರತಿಯೊಂದಕ್ಕೂ ಅನ್ವಯಿಸುತ್ತದೆ.

ಪ್ರತಿಯೊಂದು ಕಾರ್ಯದಲ್ಲೂ ಇಂತಹ ಚಿಂತನೆ ಇದ್ದರೆ ಬಹುಶಃ ಶಾಶ್ವತತೆಯ ವ್ಯಸನ ತಗ್ಗಬಹುದು. ಯಾವಾಗ ನಾವು ಚಿರಂಜೀವಿಗಳಾಗಬೇಕು, ನಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕು ಎಂದು ಬಯಸತೊಡಗುತ್ತೇವೆಯೋ ಆಗ ಸ್ವಾರ್ಥ ಬುದ್ಧಿಯನ್ನೂ ಮಾತ್ಸರ್ಯವನ್ನೂ ಬೆಳೆಸಿಕೊಳ್ಳುತ್ತೇವೆ. ನಮ್ಮ ಅಪೇಕ್ಷೆ ಕೈಗೂಡದೆ ಹೋಗಬಹುದು ಎನ್ನುವ ಅಸ್ಥಿರತೆ ನಮ್ಮನ್ನು ಕ್ರೋಧಕ್ಕೆಡೆ ಮಾಡುತ್ತದೆ. ಎಷ್ಟೆಂದರೂ ಅಸಹಾಯಕತೆಯೇ ಕೋಪಕ್ಕೆ ಮೂಲವಲ್ಲವೆ? ಈ ಎಲ್ಲದರ ಮೊತ್ತವಾಗಿ ಖಿನ್ನತೆ, ಸಂಕುಚಿತತೆಗಳು ನಮ್ಮಲ್ಲಿ ಮೊಳೆಯುತ್ತವೆ.

ಇಲ್ಲಿ ಮತ್ತೊಂದು ವಿಷಯ ಗಮನದಲ್ಲಿಡಬೇಕು. ಯಾರು `ನನ್ನ ಹೆಸರು ಶಾಶ್ವತ ನೆನೆಯಲ್ಪಡುವಂಥ ಕೆಲಸ ಮಾಡುತ್ತೇನೆ’ ಎಂದುಕೊಳ್ಳುತ್ತಾರೋ ಅವರು ಮರೆಯಾಗಿಹೋಗುತ್ತಾರೆ ಅಥವಾ ತಪ್ಪು ಕಾರಣಗಳಿಗಾಗಿ ನೆನೆಯಲ್ಪಡುತ್ತಾರೆ. ಯಾರು ತಮ್ಮ ಪಾಡಿಗೆ ತಾವು ಲೋಕೋಪಯೋಗಿ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೋ ಅಂಥವರ ಹೆಸರು ತಾನಾಗಿಯೇ ಆಚಂದ್ರಾರ್ಕ ಉಳಿದುಕೊಳ್ಳುತ್ತದೆ. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣೆದುರಿವೆ. ಇಷ್ಟಕ್ಕೂ ನಾವು ಮಾಡುವ ಕೆಲಸಗಳು, ನಮ್ಮ ನಡವಳಿಕೆ ಹಾಗೂ ನಮ್ಮ ಅಸ್ತಿತ್ವ ಗಟ್ಟಿಯಾಗಿರಬೇಕೇ ಹೊರತು ನಮಗೆ ಸಂಬಂಸಿದ ಭೌತಿಕ – ಲವಕಿಕ ಸಂಗತಿಗಳಲ್ಲ.
ಇಷ್ಟಾದರೂ ನೀವು ಭೌತಿಕ ಸಾಧನೆಗೇ ಕೀರ್ತಿಗೇ ಮಹತ್ವ ಕೊಡುವಿರಿ ಎಂದುಕೊಳ್ಳಿ – ಕೋಟೆಯನ್ನೆ ಕಟ್ಟಿದಿರೆಂದು ಇಟ್ಟುಕೊಳ್ಳಿ. ಅದಕ್ಕೆ ಹೆಚ್ಚುವರಿಯಾಗಿ ಕಾಯುವ ಕೆಲಸವೂ ಹಿಂಬಾಲಿಸುತ್ತದೆ. ಬದುಕಿಡೀ ನಿದ್ದೆಗೆಟ್ಟು ಕೋಟೆಯ ರಕ್ಷಣೆಗೆ ಮೀಸಲಾಗಬೇಕು. ಅಷ್ಟಾಗಿಯೂ ಮೃತ್ಯು ಭೇದಿಸಲಾಗದ ಕೋಟೆಯನ್ನು ಕಟ್ಟುವುದು ಯಾರಿಂದಲೂ ಸಾಧ್ಯವಿಲ್ಲ.
ಅದರ ಬದಲಿಗೆ ಮರಳಿನ, ಮನ ಬಂದಾಗ ಕಟ್ಟಿ – ಕೆಡವಿ ಮಾಡಬಹುದಾದ ಹಾಗೂ ಜಾಗವನ್ನ ತನ್ನೊಬ್ಬರ ಸೊತ್ತಾಗಿಸಿಕೊಂಡು ಮತ್ಸರಕ್ಕೆ ನೀರೆರೆಯದ ಮರಳಿನ ಕೋಟೆ ಬದುಕನ್ನು ಸಹ್ಯವೂ ಸರಳವೂ ಆಗಿಸುತ್ತದೆ. ನಮ್ಮ ನಿಜ ನೆಲೆ ಇರುವುದು ಈ ಭೂಮಿಯ ಮೇಲಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಂಡಾಗ ಮಾತ್ರ ಶಾಶ್ವತತೆಯ ವ್ಯಸನದಿಂದ ಮುಕ್ತರಾಗಲು ಸಾಧ್ಯ.

Leave a Reply