ಪ್ರತಿಯೊಂದೂ ನಿಗದಿತ ಸಮಯದಲ್ಲೇ ಘಟಿಸುವುದು. ಒಂದು ನಿಮಿಷ ಮೊದಲೂ ಇಲ್ಲ, ಒಂದು ನಿಮಿಷ ತಡವಾಗಿಯೂ ಅಲ್ಲ ~ ಷಮ್ಸ್ ತಬ್ರೀಜಿ
ಧಾವಂತವೇಕೆ? ಷಮ್ಸ್ ಹೇಳುತ್ತಿದ್ದಾನೆ, “ಎಲ್ಲವೂ ನಿಗದಿತ ಸಮಯದಲ್ಲೇ ಘಟಿಸುವುದು”. ಯಾರೆಲ್ಲರೂ ಎಷ್ಟು ಬಗೆಯಲ್ಲಿ ಹೇಳಿದ್ದರೂ ನಮಗಿದು ಅರ್ಥವಾಗುವುದೇ ಇಲ್ಲ. ಖುದ್ದು ನಾವೇ ಇದನ್ನು ಅನುಭವಿಸಿರುತ್ತೇವಾದರೂ ನಮಗೆ ಬುದ್ಧಿ ಬರುವುದಿಲ್ಲ.
ಬೇಕಿದ್ದರೆ ನೋಡಿ, ಟ್ರಾಫಿಕ್ಕಿನಲ್ಲಿ ಅದೆಷ್ಟು ಹಾರ್ನ್’ಗಳು ಕೀಗುಟ್ಟುತ್ತಿರುತ್ತವೆ! ಫುಟ್ ಪಾತಿನ ಮೇಲಾದರೂ ಸರಿ, ಬೈಕ್ ಓಡಿಸಿಕೊಂಡು ಹೋಗಲೇಬೇಕು. ಎರಡು ನಿಮಿಷ ಕಾಯಲಿಕ್ಕೂ ಪುರುಸೊತ್ತಿಲ್ಲ!!
ಎಲ್ಲದರಲ್ಲೂ ಹೀಗೇ. ಏನೇನೋ ಸಾಹಸ ಮಾಡಿ ಧಾವಿಸುವ ನಾವು, ಆಮೇಲೆ ಮಾಡುವಂಥದು ಏನೂ ಇಲ್ಲ. ಸಾಧನೆ ಶೂನ್ಯ. ದಾರಿಯನ್ನು ಗಡಿಬಿಡಿಯಲ್ಲಿ ನಡೆದು. ಫಲಿತಾಂಶಕ್ಕೆ ಕಾಯುತ್ತ ಕೂರುವ ಜಾಯಮಾನ ನಮ್ಮದು.
ಅದರ ಬದಲು, ದಾರಿಯನ್ನೇ ಸಾವಧಾನವಾಗಿ, ಅರ್ಥಪೂರ್ಣವಾಗಿ ಕ್ರಮಿಸಿ, ಅದರ ಆನಂದ ಪಡೆಯಬಹುದಿತ್ತು. ಪ್ರಯಾಣವನ್ನು ಆನಂದಿಸಬಹುದಿತ್ತು. ಆದರೆ ನಾವು ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಡಿಮೆ.
ಅಲ್ಲವೆ?