ನವರಾತ್ರಿ : ಸ್ತ್ರೀಶಕ್ತಿಯ ಸಂಭ್ರಮಾಚರಣೆ

ಎಲ್ಲಿ ಹೆಣ್ಣು ಮಕ್ಕಳು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನಲಿಯುತ್ತಾರೆ ಎಂಬ ಮಾತಿದೆ. ಪೂಜೆಗೊಳ್ಳುವ ದೇವತೆಯೇ ಸ್ವತಃ ಹೆಣ್ಣಾದರೆ ಇಡಿಯ ಸೃಷ್ಟಿಗೇ ನಲಿವಲ್ಲವೆ!? ~ ಸಾ.ಹಿರಣ್ಮಯಿ

ಶಕ್ತಿ ಇಲ್ಲದೆ ಚಲನೆ ಇಲ್ಲ. ಜಗತ್ತು ನಡೆಯುತ್ತಿರುವುದೇ ಅಗೋಚರ ಶಕ್ತಿಯ ಆಧಾರದ ಮೇಲೆ. ಸೃಷ್ಟಿ ಮೂಲವಾದ ಈ ಶಕ್ತಿಯು ಅದನ್ನು ಪೋಷಿಸುವ, ಸುಸ್ಥಿಯಲ್ಲಿಡುವ ಹೊಣೆಗಳನ್ನು ಮಾತ್ರವಲ್ಲ, ಕಾಲಕಾಲಕ್ಕೆ ಲಯಗೊಳಿಸಿ ಪುನರ್‍ಸೃಷ್ಟಿಯನ್ನೂ ಮಾಡುತ್ತದೆ. ಈ ಸೃಷ್ಟಿ ಕ್ರಿಯೆ ನಡೆಯುವ ಬ್ರಹ್ಮಾಂಡವನ್ನು (ಕಾಸ್ಮಿಕ್ ವೂಂಬ್) ಆದಿ ಶಕ್ತಿಯ ಗರ್ಭವೆಂದು ಹೇಳಲಾಗುತ್ತದೆ. ಗರ್ಭ ಧಾರಣೆ ಸ್ತ್ರೀವಿಶಿಷ್ಟ ಸಾಧ್ಯತೆಯಲ್ಲವೆ? ಆದ್ದರಿಂದಲೇ ಆದಿಶಕ್ತಿಗೆ ಹೆಣ್ಣೆಂಬ ಮನ್ನಣೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ದೇವತೆಗಳ ಆರಾಧನೆ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ನಮ್ಮ ಜನಪದಗಳು ಗ್ರಾಮದೇವತೆಯ ರೂಪದಲ್ಲಿ ಮಾತೃಶಕ್ತಿಯನ್ನು ಪೂಜಿಸುತ್ತವೆ. ನವರಾತ್ರಿಯ ಸಂದರ್ಭದಲ್ಲಿ ಶಕ್ತಿ ಆರಾಧನೆಯ ವೈಭವದ ಉತ್ತುಂಗವನ್ನು ನಾವು ಕಾಣಬಹುದು.

ನಮ್ಮ ಪ್ರಾಚೀನ ಸ್ಮೃತಿಗಳು `ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾಃ’ ಎಂದು ಹೇಳಿವೆ. ಇದರರ್ಥ, ಎಲ್ಲಿ ಹೆಣ್ಣು ಮಕ್ಕಳು ಪೂಜಿಸಲ್ಪಡುತ್ತಾರೋ (ಪೂಜ್ಯ ಭಾವನೆಯಿಂದ ಕಾಣಲ್ಪಡುತ್ತಾರೋ) ಅಲ್ಲಿ ದೇವತೆಗಳು ನಲಿಯುತ್ತಾರೆ ಎಂದು. ಇಂತಹ ಚಿಂತನೆ ಇರುವಲ್ಲಿ ಪೂಜೆಗೊಳ್ಳುವ ದೇವತೆಯೇ ಸ್ವತಃ ಹೆಣ್ಣಾದರೆ ಅದರ ಪರಿಣಾಮ ಇನ್ನೆಂಥದಿದ್ದೀತು!? ಇದರಿಂದ ಇಡಿಯ ಸೃಷ್ಟಿಗೆ ಸೃಷ್ಟಿಯೇ ನಲಿಯುವುದಲ್ಲವೆ?

ಹೆಣ್ಣಿನ ಸೌಂದರ್ಯ ಇರುವುದು ಆಕೆ ತಳೆಯುವ ಪಾತ್ರ ವೈವಿಧ್ಯದಲ್ಲಿ. ಸಂಬಂಧದ ಯಾವುದೇ ಅಂಕಿತದಲ್ಲಿಯಾದರೂ ಆಕೆ ಪ್ರತಿಯೊಬ್ಬರಿಗೂ ಸಂಪೂರ್ಣ ನ್ಯಾಯ ಸಲ್ಲಿಸುತ್ತಾಳೆ. ಇದು ಮೂಲ ಸ್ತ್ರೈಣ ಗುಣ. ಇದು ಸಾಧ್ಯವಾಗದವರಲ್ಲಿ ಸ್ತ್ರೈಣತೆಯ ಕೊರತೆ ಇದೆ ಎಂದರ್ಥ. ಹೆಣ್ಣಿನ ಈ ಸಾಧ್ಯತೆ ಹುಟ್ಟಿಸುವ ಬೆರಗೇ ಆಕೆಯನ್ನು ಆರಾಧಿಸುವಂತೆ ಪ್ರೇರೇಪಿಸುತ್ತದೆ. ಕೌಟುಂಬಿಕ ಸ್ತರದಲ್ಲಿ ಎಲ್ಲವನ್ನು ಸರಿದೂಗಿಸುವ ಆಕೆಯ ಶಕ್ತಿ, ಜಗಜ್ಜನನಿಯ ಜಗತ್‍ನಿರ್ವಹಣಾ ಶಕ್ತಿಯ ಅಂಶಭಾಗವೇ ಆಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ನಡುವಿನ ಹೆಣ್ಣುಗಳು ಆದಿ ಶಕ್ತಿಯ ವ್ಯಕ್ತ ರೂಪಗಳು. ಆದ್ದರಿಂದಲೇ ಹೆಣ್ಣು ಏಕಕಾಲಕ್ಕೆ ಅಷ್ಟೊಂದು ನಿಗೂಢವೂ ಸೂಕ್ಷ್ಮವೂ ರೂಕ್ಷವೂ ಆಗಿ ತೋರುವುದು. (ಲಲಿತಾ ಸಹಸ್ರನಾಮದಲ್ಲಿ ಸ್ಥೂಲ ಸೂಕ್ಷ್ಮ ಮಹಾರೌದ್ರೀ ಎಂದು ಹೇಳಿರುವುದು ಇದನ್ನೇ).

ವಿಶ್ವಸೃಷ್ಟಿಯ ರಹಸ್ಯ ಆದಿಶಕ್ತಿಯ ಗರ್ಭದಲ್ಲಿ ಅಡಗಿರುವಂತೆ, ಜೀವಸೃಷ್ಟಿಯ ರಹಸ್ಯ ಎಲ್ಲ ಜಾತಿಯ ಜಂತುಗಳ ಸ್ತ್ರೀಗರ್ಭದಲ್ಲಿ ಅಡಗಿದೆ. ವಿಜ್ಞಾನ ಅದೆಷ್ಟೇ ಹಂತಗಳಲ್ಲಿ ಭ್ರೂಣದ ಬೆಳವಣಿಗೆಯನ್ನು ತೋರಿಸಿದರೂ ಸೃಷ್ಟಿ ನಿರಂತರತೆಗೆ ಜೀವವೂಡುವ ವಿದ್ಯೆ ಗರ್ಭಕ್ಕಷ್ಟೆ ಗೊತ್ತು. ಪ್ರನಾಳದಲ್ಲಿ ಭ್ರೂಣ ಮೊಳೆಸಿದರೂ ಅದು ಬೆಳೆದು ಜನ್ಮ ತಳೆಯಲು ಹೆಣ್ಣಿನೊಡಲೇ ಬೇಕು.
ಮನುಷ್ಯ ಜೀವಿಗಳಲ್ಲಿ ಹೆಣ್ಣಿನೊಂದಿಗಿನ ಭಾವನಾತ್ಮಕ ಬೆಸುಗೆ ಅತ್ಯಂತ ಹೆಚ್ಚಿನದು. ಉಳಿದ ಪ್ರಾಣಿಗಳಲ್ಲೂ ಇದನ್ನು ನೋಡಬಹುದಾದರೂ ಅಭಿವ್ಯಕ್ತಿಯ ಅವಕಾಶ ಇರುವುದರಿಂದ ಇದು ಎದ್ದು ತೋರುತ್ತದೆ. ಹುಟ್ಟಿನಿಂದ ಸಾವಿನತನಕ ಪುರುಷ ಭಾವನಾತ್ಮಕವಾಗಿ ಹೆಣ್ಣನ್ನು ವಿಪರೀತ ಅವಲಂಬಿಸಿರುತ್ತಾನೆ.

ಮನುಸ್ಮೃತಿಯಲ್ಲೇನೋ `ಹೆಣ್ಣು ಮಕ್ಕಳು ಬಾಲ್ಯದಲ್ಲಿ ತಂದೆಯ, ಯೌವನ ಕಾಲದಲ್ಲಿ ಪತಿಯ, ವೃದ್ಧಾಪ್ಯದಲ್ಲಿ ಮಕ್ಕಳ ಆಶ್ರಯದಲ್ಲಿರಬೇಕು’ ಎಂದು ಹೇಳಿದೆ. ಇದೇ ರೀತಿಯಲ್ಲಿ ಗಂಡು ಮಕ್ಕಳೂ ಬಾಲ್ಯದಲ್ಲಿ ತಾಯಿಯನ್ನು, ಯೌವನದಲ್ಲಿ ಪತ್ನಿಯನ್ನು, ವೃದ್ಧಾಪ್ಯದಲ್ಲಿ ಮಕ್ಕಳನ್ನು (ಮಾನಸಿಕವಾಗಿ ಹೆಣ್ಣುಮಕ್ಕಳನ್ನು) ಅವಲಂಬಿಸಿರುತ್ತಾರೆ. ಈ ಅವಲಂಬನೆ ಆರ್ಥಿಕ ಅಥವಾ ರಕ್ಷಣಾ ಸಂಗತಿಗಳಿಗಾಗಿ ಅಲ್ಲ. ಶುದ್ಧ ಭಾವನಾತ್ಮಕವಾದದ್ದು.
ತನ್ನ ಜೀವನದಲ್ಲಿ ಒಬ್ಬ ಹೆಣ್ಣನ್ನು, ಹೆಣ್ಣಿನ ಪ್ರೇಮವನ್ನು ಹೊಂದಿರದ ಗಂಡು ಅತ್ಯಂತ ನೀರಸ ಬದುಕನ್ನು ನಡೆಸುತ್ತಾನೆ. ಅದು ಪತ್ನಿ ಅಥವಾ ಪ್ರೇಯಸಿಯೇ ಆಗಿರಬೇಕೆಂದಿಲ್ಲ. ಯಾವ ಪಾತ್ರದಲ್ಲಾದರೂ ಸರಿ, ಹೆಣ್ಣಿನ ಸಾಂಗತ್ಯ, ಗಂಡಿನ ಆಂತರ್ಯದಲ್ಲಿ ಮಾರ್ದವವನ್ನು, ಕೋಮಲತೆಯನ್ನು ತುಂಬುತ್ತದೆ. ಪ್ರೇಮಿಕೆಯ ರೂಪದಲ್ಲಂತೂ ಹೆಣ್ಣಿನ ಸಾಂಗತ್ಯ ಒಂದು ಅನುಭಾವ ರಸ.

ಪರಿಪೂರ್ಣತೆ
ಸ್ತೀಶಕ್ತಿ ಸ್ತುತಿಯ ಉತ್ತುಂಗವನ್ನು ಕೇಳಬೇಕೆಂದರೆ ಲಲಿತಾ ಸಹಸ್ರನಾಮ ಹಾಗೂ ಸೌಂದರ್ಯ ಲಹರಿಗಳನ್ನು ಓದಬೇಕು. ಹಿಂದೂ ಧರ್ಮದ ಮುಖ್ಯ ಮುರು ದೇವತೆಗಳು ಪ್ರತ್ಯೇಕವಾಗಿ ಮೂರು ಜವಾಬ್ದಾರಿಗಳಿಗೆ ಭಾಜನರಾಗಿದ್ದಾರೆ. ಆದರೆ ಜಗಜ್ಜನನಿಯೆಂದು ಕರೆಯಲ್ಪಡುವ ಆದಿಶಕ್ತಿಯು ಸೃಷ್ಟಿ – ಸ್ಥಿತಿ – ಲಯಕಾರ್ಯಗಳನ್ನು ತಾನೊಬ್ಬಳೆ ನಡೆಸುತ್ತಾಳೆ. ಈಕೆಯ ನಗೆ ಮಾತ್ರದಿಂದ ಸೃಷ್ಟಿಯೂ ಕೋಪದ ಹೂಂಕಾರದಿಂದ ಪ್ರಳಯವೂ ಉಂಟಾಗುತ್ತದೆ ಎಂದು ಭಕ್ತ ಕವಿಗಳು ಬಣ್ಣಿಸುತ್ತಾರೆ. ಇಂತಹ ಬಣ್ಣನೆಗಳಿಗೇನಿದ್ದರೂ ಸ್ತ್ರೀದೇವತೆಯಷ್ಟೆ ಭಾಜನಳಾಗಬಲ್ಲಳು! (ಲೌಕಿಕ ನೆಲೆಯಲ್ಲೂ ಹೆಣ್ಣಿನ ನಗುವಿಂದ ಜೀವನೋತ್ಸಾಹ, ಕೋಪದಿಂದ ಮರಣ ತಾಪ ಎಂದು ಹಾಡಿದ್ದಾರೆ ಕವಿಗಳು).

ಆದರೆ ಈ ಭಾವನೆಗಳು ಕೇವಲ ಪೂಜಾರಾಧನೆಗೆ, ಅವಲಂಬನೆಗಳಿಗೆ ಸೀಮಿತವಾಗದೆ, ಶಕ್ತಿ ಸ್ವರೂಪವಾದ ಸ್ತ್ರೀ ಸಂಕುಲವನ್ನು ಗೌರವದಿಂದ ನಡೆಸಿಕೊಳ್ಳುವ ಮೂಲಕ ಅಭಿವ್ಯಕ್ತವಾಗಬೇಕು. ಆಗಷ್ಟೆ ನವರಾತ್ರಿಯಂತಹ ಉತ್ಸವಗಳು ಸಾರ್ಥಕಗೊಳ್ಳುವವು.

Leave a Reply