ಸಹಜ ಸನಾತನಿಗಳ ಮೇಲೆ ನಾಲ್ದೆಸೆಯ ಪ್ರಹಾರ ~ ಧರ್ಮೋ ರಕ್ಷತಿ ರಕ್ಷಿತಃ #2

ತಾರತಮ್ಯ ವ್ಯವಸ್ಥೆ ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧ.ಇದಕ್ಕೆ ಶಾಸ್ತ್ರದ ಆಧಾರವಿಲ್ಲ ಎನ್ನುವುದನ್ನು ಹಿಂದಿನ ಲೇಖನದಲ್ಲಿ  ( https://aralimara.com/2018/11/09/dharma/ )  ನೋಡಿದ್ದೇವೆ. ಈ ಲೇಖನದಲ್ಲಿ ಇನ್ನಷ್ಟು… ~ ಅಪ್ರಮೇಯ

ಜಾತಿ ವ್ಯವಸ್ಥೆಯೊಂದು ಮಹಾ ಪ್ರಮಾದವಾಗಿಬಿಟ್ಟಿದೆ. ಜಾತಿವ್ಯವಸ್ಥೆಯ ಪರಸ್ಪರ ವಿರೋಧ ಮನೋಭಾವದಿಂದಾಗಿ ಸನಾತನ ಧರ್ಮ ಒಡೆದು ನುಚ್ಚುನೂರಾದಂತಹ ಮನೆಯಂತಾಗಿದೆ. ಈ ಮನೆಯನ್ನು ಯಾರು ಬೇಕಾದರೂ ಸುಲಭವಾಗಿ ದೋಚಿಬಿಡಬಹುದು. ಮೊಘಲರು, ಬ್ರಿಟಿಷರು ಮುಸ್ಲಿಮರೆಲ್ಲರೂ ಈ ಜಾತಿ ವ್ಯವಸ್ಥೆಯ ಪ್ರಯೋಜನ ಪಡೆದುಕೊಂಡವರೆ ಆಗಿದ್ದಾರೆ.

ಇತಿಹಾಸವನ್ನೂಮ್ಮೆ ಸೂಕ್ಷ್ಮವಾಗಿ ಅವಲೋಕಿಸಿ ನೋಡಿರಿ ಮುಸ್ಲಿಮರು ಭಾರತದ ಮೇಲೆ ಆಕ್ರಮಣ ಮಾಡಿ ಸುಭದ್ರವಾಗಿ ನೆಲೆಯೂರಲು ಜಾತಿವ್ಯವಸ್ಥೆಯೇ ಪ್ರಮುಖ ಕಾರಣವಾಗಿದೆ. ಕ್ಷತ್ರಿಯರಷ್ಟೇ ಯುದ್ಧಗಳನ್ನು ಮಾಡಬೇಕು ಎನ್ನುವ ತಾರತಮ್ಯದ ಅವಿವೇಕದ ನೀತಿಯಿಂದಾಗಿ ಮೊಘಲರು ಇಲ್ಲಿ ರಾಜರನ್ನು ಸುಲಭವಾಗಿ ಸೋಲಿಸುವುದಕ್ಕೆ ವರದಾನವಾಯಿತು. ಈ ತಾರತಮ್ಯ ವ್ಯವಸ್ಥೆ ಬಹುಜನರ ಹೋರಾಟದ ಹಕ್ಕನ್ನೇ ಕಸಿದುಕೊಂಡು ಬಿಟ್ಟಿತು. ಇದರಿಂದ ಸಣ್ಣ ಪುಟ್ಟ ಪ್ರದೇಶಗಳು ಮೊಘಲರಿಗೆ ಸುಲಭದ ತುತ್ತಾದವು.

ನಂತರ ಬಂದ ಬ್ರಿಟಿಷರಿಗೆ ಇಲ್ಲಿನ ತಾರತಮ್ಯ ವ್ಯವಸ್ಥೆ ಅತ್ಯಂತ ಪ್ರಯೋಜನಕಾರಿಯಾಯಿತು. ಭಾರತದ ಆತ್ಮವೇ ಅಧ್ಯಾತ್ಮ ಎನ್ನುವುದನ್ನು ಮನಗಂಡ ಬ್ರಿಟಿಷರು ಮ್ಯಾಕ್ಸ್ ಮುಲ್ಲರ್, ವಿಲಿಯಮ್ ಜೋನ್ಸ್ ನಂಥ ಅರೆಬರೆ ತಿಳಿವಳಿಕೆಯುಳ್ಳವರನ್ನು ಮುಂದಿಟ್ಟುಕೊಂಡು ಸನಾತನ ಧರ್ಮ ಗ್ರಂಥಗಳ ಅಪವ್ಯಾಖ್ಯಾನಕ್ಕೆ ಕೈ ಹಾಕಿದರು. ಇಂಥಾ ಅಪವ್ಯಾಖ್ಯಾನ ಈಗಲೂ ಮುಂದುವರೆದಿದೆ. ಆದರೆ ಈಗ ಆ ಕೆಲಸವನ್ನು ಭಾರತೀಯರೇ ಮಾಡುತ್ತಿದ್ದಾರೆ ಅನ್ನುವುದು ದುರಂತ.
ನಮಗೆ ರಾಜಕೀಯವಾಗಿ ಸ್ವಾತಂತ್ರ್ಯ ಸಿಕ್ಕಿರಬಹುದು ಆದರೆ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಸ್ವಾತಂತ್ರ್ಯ ಸಿಕ್ಕಿಯೇ ಇಲ್ಲ.
ಅದುವರೆಗೂ ವೃತ್ತಿಯ ಆಧಾರದ ಮೇಲಿದ್ದ ವರ್ಣವ್ಯವಸ್ಥೆಯನ್ನು ಬ್ರಿಟಿಷರು ಜಾತಿ(cast)ಗೆ ರೂಪಾಂತರಿಸುತ್ತಾರೆ. ಬ್ರಿಟಿಷ್ ಸರಕಾರವು ಇಲ್ಲಿನ ತಾರತಮ್ಯ ವ್ಯವಸ್ಥೆಯನ್ನು/ಭೇದಭಾವ ನೀತಿಯನ್ನು ಪ್ರೋತ್ಸಾಹಿಸಿ ಬೆಳೆಸುತ್ತದೆ.
Divided and conquer ( ವಿಭಜಿಸಿ-ಜಯಿಸು ) ಎನ್ನುವ ಬ್ರಿಟಿಷರ ಈ ಭೇದದ ನೀತಿಯಿಂದಾಗಿ ಸನಾತನ ಜಾತಿ-ಮತ-ಪಂಥ ಗಳಲ್ಲಿರುವ ವೈಷಮ್ಯವನ್ನು ಹೆಚ್ಚಿಸುತ್ತದೆ ಇದರಿಂದ ಬ್ರಿಟಿಷರ ಸಾಮ್ರಾಜ್ಯ ವಿಸ್ತರಣೆಗೆ ಸಹಾಯಕವಾಗುತ್ತದೆ.

ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಹೋಗುವುದರ ಜೊತೆಗೆ divide and conquer ಎನ್ನುವ ನೀತಿಯನ್ನು ರಾಜಕಾರಣಿಗಳ ಕೈಗಿತ್ತು ಹೋಗಿದ್ದಾರೆ. ರಾಜಕಾರಣಿಗಳು ಬ್ರಿಟಿಷರ ಸ್ಥಾನವನ್ನಾಕ್ರಮಿಸಿಕೊಂಡು ತಮ್ಮ ಸ್ವಾರ್ಥ ಸಾಧನೆಗಾಗಿ ಒಡೆದಾಳುವ ನೀತಿಯನ್ನು ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಬಿಳಿ ಚರ್ಮದವರ ಸ್ಥಾನಕ್ಕೆ ಬಿಳಿ ಬಟ್ಟೆಯವರು ಬಂದು ಕೂತಿದ್ದಾರೆ.
ಇವರೆಂದೂ ನಮ್ಮನ್ನು ಒಂದಾಗಲು ಬಿಡುವುದಿಲ್ಲ, ಏಕೆಂದರೆ ನಾವು ಒಂದಾದರೆ ಅವರಿಗೆ ಉಳಿಗಾಲವಿಲ್ಲವೆನ್ನುವುದು ಅವರಿಗೂ ಚೆನ್ನಾಗಿ ಗೊತ್ತು.

samvada

ಇಷ್ಟಾದರೂ ನಾವು ಪಾಠಕಲಿತಿಲ್ಲ …ಪಾಠ ಕಲಿಯುವದೂ ಇಲ್ಲ
ಒಂದು ಕಡೆಯಿಂದ ಮತಾಂತರ, ಇನ್ನೊಂದು ಕಡೆಯಿಂದ ಜಾತಿ ವ್ಯವಸ್ಥೆ, ಒಳಜಗಳ , ಅಪಪ್ರಚಾರ, ಮತ್ತೊಂದೆಡೆ ಅಂಧಾನುಸರಣೆ ಹೀಗೆ ನಾಲ್ದೆಸೆಯಿಂದಲೂ ಸನಾತನ ಧರ್ಮದ ಮೇಲಾಗುತ್ತಿರುವ ಗಧಾ ಪ್ರಹಾರಕ್ಕೆ ಧರ್ಮದ ಮೂಲ ಆಶಯವೇ ತತ್ತರಿಸಿ ಹೋಗಿದೆ.

ಇದನ್ನೆಲ್ಲಾ ಸೂಕ್ಶ್ಮವಾಗಿ ಗಮನಿಸುತ್ತಿರುವ ಸಹಜ (ಮೂಲ) ಸನಾತನಿಗಳು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಇವರಿಗೆ ಧರ್ಮವನ್ನು ರಕ್ಷಿಸುವ ಮಾರ್ಗ ತಿಳಿಯದಾಗಿದೆ. ಇದರಿಂದ ಪ್ರಚೋದನಾಕಾರಿ ಭಾಷಣದ ಪ್ರಭಾವಕ್ಕೊಳಗಾಗುತ್ತಾರೆ. ಅವರ ರೋಷಾವೇಶವು ದಮನಕಾರಿ ಪ್ರವೃತ್ತಿಯಲ್ಲಿ ಪ್ರಕಟಗೊಳ್ಳುತ್ತವೆ. ಇದರಿಂದ ಅವರ ಮನಸ್ಸು ಸಂಕುಚಿತಗೊಳ್ಳುತ್ತದೆ.
ಇಂತಹ ಸಂಕುಚಿತ ಮನಸ್ಸುಗಳನ್ನು ಬಂಡವಾಳವಾಗಿಟ್ಟುಕೊಂಡು ಒಂದು ನಾಸ್ತಿಕ ಅಥವಾ ಸನಾತನ ವಿರೋಧೀ ವರ್ಗ ಲಾಭ ಪಡೆಯುತ್ತಿದೆ. ಕೆಲವು ಸಂಕುಚಿತ ಮನಸ್ಥಿತಿಯ ಉದಾಹರಣೆ ಕೊಟ್ಟು “ಇಡೀ ಸನಾತನ ಧರ್ಮವೇ ಸರಿಯಿಲ್ಲ ಅದು ಬರೀ ಅಸಹನೆ, ಅಸಮಾನತೆ, ಹಿ೦ಸೆ, ಕ್ರೌರ್ಯದಿ೦ದ ತು೦ಬಿರುವ ಒ೦ದು ಧರ್ಮ” ಎಂಬಂತೆ ಬಿಂಬಿಸುತ್ತಿದೆ.

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಸನಾತನ ಧರ್ಮೋದ್ಧಾರ ಸಾಧ್ಯವಿಲ್ಲ. ಬರೀ ಛೇದಗಳಿರುವ ಪಾತ್ರೆಯಿಂದ ನೀರು ತುಂಬಲು ಹೇಗೆ ಸಾಧ್ಯ ?
ಮೊದಲು ಈ ಛೇದಗಳನ್ನು ಮುಚ್ಚಬೇಕು, ಮೊದಲು ನಮ್ಮ ಅಂತಃ ಶತ್ರುಗಳನ್ನು ಕೊಲ್ಲವೇಕು, ಗೃಹವೈರಿಗಳ ನಾಶವಾಗಬೇಕು. ಇದಲ್ಲದೆ ಹೋರಾಟಗಳಿಂದ & ಪ್ರಚೋದನಾಕಾರಿ ಭಾಷಣಗಳಿಂದ ಯಾವ ಪ್ರಯೋಜನವೂ ಆಗುವುದಿಲ್ಲ, ಪ್ರಚೋದನಾಕಾರಿ ಭಾಷಣಗಳ ಹಿಂದಿರುವುದು ಸ್ವಾರ್ಥ ಸಾಧನೆ.

ನಮ್ಮಲ್ಲಿ ಸಿಗುವಷ್ಟು ಭಾಷಣಕಾರರು ಬಹುಶಃ ಬೇರೆಲ್ಲೂ ಸಿಗುವುದಿಲ್ಲ. ನಮ್ಮ ಜನಕ್ಕೆ ಭಾಷಣ ಬಿಗಿಯುವ ಬುದ್ಧಿಯುಂಟು, ಪಾಲನೆ ಮಾಡುವ ಬುದ್ಧಿ ಕಡಿಮೆ. ಜಾತಿ ವ್ಯವಸ್ಥೆಯೇ ಸನಾತನಿಗಳ ಅಂತಃಶತ್ರು, ಅಜ್ಞಾನವೇ ಸನಾತನಿಗಳ ಗೃಹವೈರಿ.

ಈ ತಾರತಮ್ಯ/ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವುದು ಅಷ್ಟು ಸುಲಭದ ಮಾತಲ್ಲ. ಯಾರು ಈ ಜಾತಿ ವ್ಯವಸ್ಥೆಗೆ ಎದುರಾಗಿ ಬರುವರೊ ಅವರನ್ನೇ ತಾರತಮ್ಯ ವ್ಯವಸ್ಥೆ ಅಪೋಷನ ತೆಗೆದುಕೊಂಡು ಬಿಡುತ್ತದೆ. ಮಹಾವೀರ, ಬುದ್ಧ, ಬಸವ, ವಿವೇಕಾನಂದ, ಅಂಬೇಡ್ಕರ್, ಇವರೆಲ್ಲರೂ ತಾರತಮ್ಯ ವ್ಯವಸ್ಥೆಯ ಮುಂದೆ ಆಯಾ ಕಾಲ ಘಟ್ಟದಲ್ಲಿ ಗೆದ್ದರೂ ಕಾಲಕ್ರಮದಲ್ಲಿ ತಮ್ಮ ಪ್ರಭಾವ ಉಳಿಸಿಕೊಳ್ಳಲು ಸೋತಿದ್ದಾರೆ. ಅಸಮಾನತೆಯನ್ನು ಹೋಗಲಾಡಿಸುವುದಕ್ಕಾಗಿ ಇವರು ಮಾಡಿದ ಎಲ್ಲಾ ಪ್ರಯತ್ನಗಳೂ ಪ್ರಸ್ತುತದಲ್ಲಿ ವಿಫಲವಾಗಿವೆ.

ಇಂತಹ ಲಕ್ಷಾಂತರ ಸಮಾಜ ಸುಧಾರಕರು ಬಂದರೂ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಅವರೆಲ್ಲರೂ ಸೋಲುತ್ತಾರೆ. ಅವರೆಲ್ಲರ ಸೋಲಿಗೆ ಕಾರಣ ನಾವು ಯಾವುದನ್ನು ಕೇಂದ್ರವನ್ನಾಗಿಟ್ಟುಕೊಳ್ಳಬೇಕಾಗಿತ್ತೋ ಅದನ್ನು ಕೈಬಿಟ್ಟು ಜಾತಿಯನ್ನೋ, ವ್ಯಕ್ತಿಯನ್ನೋ, ಸಂಘಟನೆಯನ್ನೋ ಕೇಂದ್ರವನ್ನಾಗಿಟ್ಟುಕೊಂಡಿರುವುದು.
ನಾವು ಕೇಂದ್ರವಾಗಿಟ್ಟುಕೊಳ್ಳಬೇಕಾದದ್ದು ಆಧ್ಯಾತ್ಮವನ್ನು ಎಲ್ಲಿ ಅಧ್ಯಾತ್ಮ ಕೇಂದ್ರವಾಗಿರುವುದೋ ಅಲ್ಲಿ ಜಾತಿ,ಮತ,ಪಂಥ,ಗೋತ್ರ, ತಾರತಮ್ಯ ವ್ಯವಸ್ಥೆಗಳಿಗೆ ಎಡೆಯಿರುವುದಿಲ್ಲ ಯಾರು ಅಧ್ಯಾತ್ಮವನ್ನು ಕೇಂದ್ರವಾಗಿತ್ತುಕೊಳ್ಳುವನೋ ಅವನೇ ನಿಜವಾದ ಧರ್ಮ ರಕ್ಷಕ.

ಆಧ್ಯಾತ್ಮಿಕ ವ್ಯಕ್ತಿಗೆ ಜಾತಿ, ಮತ, ಪಂಥ, ಕುಲ, ಗೋತ್ರಗಳು ಅತ್ಯಂತ ಬಾಲಿಶವಾದ ಸಂಗತಿಯಾಗಿಬಿಡುತ್ತದೆ.
ಮಹಾವೀರ, ಬುದ್ಧ, ಬಸವ, ಸ್ವಾಮಿ ವಿವೇಕಾನಂದ ಇವರೆಲ್ಲರೂ ಅಧ್ಯಾತ್ಮವನ್ನು ಕೇಂದ್ರವನ್ನಾಗಿಟ್ಟುಕೊಂಡವರು ಇವರೆಲ್ಲರ ಮೂಲ ಆಶಯ ಹೊಸ ಧರ್ಮಗಳನ್ನು ಸೃಷ್ಟಿಸುವುದಾಗಿರಲಿಲ್ಲ; ಭೇದ ಭಾವನೆಯನ್ನು ಬೆಳೆಸುವುದಾಗಿರಲಿಲ್ಲ; ಇವರೆಲ್ಲರ ಮೂಲ ಆಶಯ ಹೊಸ ಮಾನವನ ಸೃಷ್ಟಿ ಆಧ್ಯಾತ್ಮಿಕ ಮಾನವ ಸಮಾಜವನ್ನು ನಿರ್ಮಾಣಮಾಡುವುದಾಗಿತ್ತು. ಇವರೆಲ್ಲರೂ ಇದನ್ನು ಸನಾತನ ಧರ್ಮದ ಸುಧಾರಣೆಯೆಂದೇ ತಿಳಿದಿದ್ದರು.
ವಿಪರ್ಯಾಸವೇನೆಂದರೆ ಈ ಮಹಾನುಭಾವರೆಲ್ಲರ ಶಿಷ್ಯಂದಿರು, ಹಿಂಬಾಲಕರು ಅವರನ್ನೇ ಕೇಂದ್ರವಾಗಿಟ್ಟುಕೊಂಡರು ಅಧ್ಯಾತ್ಮವನ್ನು ಕೈಬಿಟ್ಟರು. ಇದರಿಂದ ಸನಾತನ ಧರ್ಮದಲ್ಲಿ ಛೇದಗಳು ಸೃಷ್ಟಿಯಾದವು, ಭೇದಗಳು ಸೃಷ್ಟಿಯಾದವು, ಜಾತಿಗಳು ಸೃಷ್ಟಿಯಾದವು.

ಇಷ್ಟಕ್ಕೆ ನಿಲ್ಲಲಿಲ್ಲ.. ಇದು ಉಚ್ಚ-ನೀಚ ಭಾವನೆಗಳಿಗೆ ಕಾರಣವಾಯಿತು. ಜಾತಿಗಳ-ಜಾತಿಗಳ ನಡುವೆ, ಮತ-ಪಂಥಗಳ ನಡುವೆ ಶ್ರೇಷ್ಠ-ಕನಿಷ್ಠ ವಿಚಾರವಾಗಿ ಪರಸ್ಪರ ಸ್ಫರ್ಧೆ ಏರ್ಪಟ್ಟಿತು. ಈ ಅನಾರೋಗ್ಯಕರವಾದ ಸ್ಪರ್ಧೆಯು ಪರಸ್ಪರ ಹೊಡೆದಾಡುವ ಮಟ್ಟಿಗೆ ಬೆಳೆಯಿತು, ಹಿಂಸೆ, ಕ್ರೌರ್ಯಗಳಿಗೆ ಕಾರಣವಾಯಿತು. ಬಸವ, ಬುದ್ಧ, ಅಂಬೇಡ್ಕರ್ ಮುಂತಾದ ಅನೇಕ ಸಮಾನತೆಯ ಪ್ರತಿಪಾದಕರೆಲ್ಲರನ್ನೂ ಈ ತಾರತಮ್ಯ ವ್ಯವಸ್ಥೆಯು ಭೇದದ ಪ್ರತಿಪಾದಕರನ್ನಾಗಿ ಪರಿವರ್ತಿಸಿಕೊಂಡುಬಿಟ್ಟಿತು.

ಸನಾತನ ಧರ್ಮವನ್ನು ವಿಪತ್ತಿನಿಂದ ಪಾರು ಮಾಡಬೇಕಾರದೆ ಅಧ್ಯಾತ್ಮವನ್ನು ಕೇಂದ್ರವನ್ನಾಗಿಸಿಕೊಳ್ಳಬೇಕು, ಅಧ್ಯಾತ್ಮದ ಕ್ರಾಂತಿಯಾಗಬೇಕು, ಉಪನಿಷತ್ ವಾಕ್ಯಗಳ ಪರಿಪಾಲನೆಯಾಗಬೇಕು. ಭೇದ, ವಿರೋಧ ಭಾವನೆಗಳು ಅಳಿಸಿಹಾಕಬೇಕು, ಧರ್ಮವನ್ನು ಪಾಲನೆ ಮಾಡುವುದರಿಂದ ಮಾತ್ರ ಉಳಿಯಬಲ್ಲದು ಆಚರಣೆಯಲ್ಲಿಲ್ಲದ ಧರ್ಮ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ.

ಕೃತಂ ಮೇ ದಕ್ಷಿಣೆ ಹಸ್ತೇ ಜಯೋ ಸವಯ್ ಆಹಿತಃ [ಅಥರ್ವವೇದ ೭.೫೦.೮] ಎಂದು ಹೇಳುತ್ತದೆ ವೇದ ಅಂದರೆ ಒಂದು ಕೈಯಲ್ಲಿ ಕ್ರಿಯಾಶೀಲತೆ ಇದ್ದರೆ ಅಥವಾ ಒಂದು ಕೈಯಲ್ಲಿ ಆಚರಣೆಯಿದ್ದರೆ ಮತ್ತೊಂದು ಕೈಯಲ್ಲಿ ಜಯವಿರುತ್ತದೆ.

ಸನಾತನ ಧರ್ಮದ ಎಲ್ಲಾ ಸಮಸ್ಯೆಗಳನ್ನು ಅಧ್ಯಾತ್ಮದಿಂದ ಪರಿಹರಿಸಬಹುದು ಭಾರತವು ವಿಶ್ವಗುರುವನ್ನಾಗಿ ಮಾಡುವಂತಹ ಶಕ್ತಿ ಆಧ್ಯಾತ್ಮಕ್ಕಿದೆ. ನಾವು ಧರ್ಮ ರಕ್ಷಣೆಗಾಗಿ, ಶಂಕರಾಚಾರ್ಯ, ರಾಮಾನುಜಾಚಾರ್ಯ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಾಮಹಂಸರಂತಹ ಮತ್ತಿನ್ನ್ಯಾರೋ ಮಹಾನುಭಾವರು ಬರುತ್ತಾರೆಂದು ಕಾಯುತ್ತಾ ಕುಳಿತುಕೊಳ್ಳಬೇಕಾಗಿಲ್ಲ ನಮ್ಮಲ್ಲಿ ಅಧ್ಯಾತ್ಮವು ಅಂಕುರಿಸಿದರೆ ನಾವೇ ಶಂಕರಾಚಾರ್ಯ, ನಾವೇ ಸ್ವಾಮಿ ವಿವೇಕಾನಂದ, ನಾವೇ ರಾಮಕೃಷ್ಣ ಪರಮಹಂಸ.
ಧರ್ಮ ರಕ್ಷಣೆಗಾಗಿ ಮತ್ತಿನ್ಯಾರೋ ಭೌತಿಕವಾಗಿ ಹುಟ್ಟಿ ಬರಬೇಕಾಗಿಲ್ಲ ಪ್ರತಿಯೊಬ್ಬ ಆಧ್ಯಾತ್ಮಿಕ ವ್ಯಕ್ತಿಯೂ ಸನಾತನ ಧರ್ಮ ರಕ್ಷಕನೆ ಆಗುತ್ತಾನೆ. ಅಧ್ಯಾತ್ಮದಿಂದಲೇ ಸನಾತನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿಹೊಂದಲು ಸಾಧ್ಯ.

ತತ್ತ್ವಮಸಿ; ಅಹಂ ಬ್ರಹ್ಮಾಸ್ಮಿ; ಬ್ರಹ್ಮವೇದ ಬ್ರಹ್ಮೈವ ಭವತಿ ಯಂತಹ ಸನಾತನ ಧರ್ಮದ ಅತ್ಯಂತ ಶ್ರೇಷ್ಠ & ಬಲಿಷ್ಠ ತತ್ವಗಳನ್ನು ಅನುಸಂಧಾನ ಮಾಡುವವನಿಗೆ ಧರ್ಮಭ್ರಷ್ಟತೆಯ ಸೋಂಕು ತಗಲುವುದಿಲ್ಲ. ಮತ್ತು ಜ್ಞಾನರಹಿತ ಆಚರಣೆ ಅಥವಾ ಅಂಧಾನುಸರಣೆಗೆ ಒಳಗಾಗುವುದಿಲ್ಲ..

(ಮುಂದುವರೆಯುವುದು……)

ಅಪ್ರಮೇಯ ಅವರು ಆರಂಭಿಸಿರುವ  ಈ ಚರ್ಚಾ ಸರಣಿ ಮುಗಿದ ನಂತರ ಆಸಕ್ತರು ತಮ್ಮ ವಾದ ಮುಂದಿಟ್ಟು ಸಂವಾದ ಮುಂದುವರೆಸಬಹುದು. 

ಈ ಅಂಕಣದಲ್ಲಿ ಪ್ರಕಟವಾಗುವ ಲೇಖನಗಳು ಸಂಪೂರ್ಣವಾಗಿ ಲೇಖಕರ ಅಭಿಪ್ರಾಯ ಮಾತ್ರವಾಗಿರುತ್ತದೆ. 

Leave a Reply