ಸಂಯಮ: ತಾವೋ ಧ್ಯಾನ ~ 9

ಅದೃಷ್ಟವನ್ನೂ, ದುರಾದೃಷ್ಟವನ್ನೂ ಸಂಯಮದಿಂದ ಒಳಗಿನ ಸ್ವಭಾವಕ್ಕೆ ಧಕ್ಕೆಯಾಗದಂತೆ ನಿಭಾಯಿಸುವುದೇ ತಾವೋ ಗುಣ  ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao9

ಉತ್ತರ ಧ್ರುವದ ಉಸಿರು
ಪರ್ವತಗಳನ್ನು ಹೆಡಮುರಿಗೆ ಕಟ್ಟಿದೆ
ಮಳೆ ಹನಿಗಳು
ರೆಂಬೆ ಕೊಂಬೆಗಳಿಗೆ ಜೋತು ಬಿದ್ದಿವೆ
ರತ್ನ ಖಚಿತ ಚಾದರ
ಭೂಮಿಯನ್ನಾವರಿಸಿಕೊಂಡಿದೆ.

ಚಳಿಗಾಲದಲ್ಲಿ ಎಲೆಗಳು ಉದುರುತ್ತವೆ, ಕೆಲವೊಮ್ಮೆ ಇಡೀ ಮರಗಳೇ ಉರುಳಿ ಬೀಳುತ್ತವೆ ಆದರೆ ಬಹುತೇಕ ಎಲೆಗಳು, ಮರಗಳು ಗಟ್ಟಿಯಾಗಿ ನಿಂತು ತಮ್ಮ ವಿಧಿಯನ್ನು ಸಂಯಮದಿಂದ ಎದುರಿಸುತ್ತವೆ.

ಅವು ಮಳೆ, ಹಿಮ, ಬಿರುಗಾಳಿ ಮತ್ತು ಚಳಿಗಳ ಅಟ್ಟಹಾಸವನ್ನು ನಿರ್ವಿಕಾರವಾಗಿ ಸಹಿಸುತ್ತವೆ. ಜಿಗುಟು ಮಳೆಹನಿಗಳ, ತಣ್ಣಗೆ ಮಿನುಗುತ್ತಿರುವ ಮಂಜಿನ ಹನಿಗಳ ಮತ್ತು ಹಿಮದ ಕ್ರೂರ ಕಿರೀಟದ ಆಭರಣಗಳ ನಿರ್ವಾಹವಿಲ್ಲದೆ ಧರಿಸುತ್ತವೆ. ಇಂಥ ಉಜ್ವಲ ವೈಭವ ಭೂಮಿಗೆ ಅಪ್ಪಳಿಸಿದರ ಪರಿವೆಯೂ ಇಲ್ಲದಂತೆ ತಾವೇ ತಾವಾಗಿ ಎಲ್ಲವನ್ನೂ ಧರಿಸುತ್ತ, ಭರಿಸುತ್ತ ಋತುಮಾನಗಳಿಗೆ ಸಾಕ್ಷಿಯಾಗುತ್ತವೆ. ಆದರೆ ಅವುಗಳ ಒಳಗೆ ಮಾತ್ರ ಬದುಕಿನ ತುಡಿತ ಅಗೋಚರವಾಗಿ ಗೂಡು ಕಟ್ಟುತ್ತಿರುತ್ತದೆ.

ಅವುಗಳದು ಒಳಗಿನ ಸ್ವಭಾವಕ್ಕೆ ನಿಷ್ಠವಾಗಿರುವ ಅಪೂರ್ವ ಸಂಯಮ. ಈ ಶಕ್ತಿಯ ಸಹಾಯದಿಂದಲೇ ಅವು ಬದುಕಿನ ವಿಷಮ ಘಳಿಗೆಗಳನ್ನೂ, ರಸ ನಿಮಿಷಗಳನ್ನೂ ಸಮಚಿತ್ತದಿಂದ ಭರಿಸುತ್ತವೆ. ಹಾಗೆ ಅದೃಷ್ಟವನ್ನೂ, ದುರಾದೃಷ್ಟವನ್ನೂ ಸಂಯಮದಿಂದ ಒಳಗಿನ ಸ್ವಭಾವಕ್ಕೆ ಧಕ್ಕೆಯಾಗದಂತೆ ನಿಭಾಯಿಸುವುದೇ ತಾವೋ ಗುಣ.

ಇಂಥ ಸಂಯಮಿಗಳ ಗುಣಲಕ್ಷಣಗಳನ್ನು ಲಾವೋತ್ಸೇ ಹೀಗೆ ವರ್ಣಿಸುತ್ತಾನೆ.

ದೇಶವನ್ನು ಮುನ್ನಡೆಸಲು
ತಕ್ಕಡಿ ಎಷ್ಟು ಮುಖ್ಯವೋ
ತಕ್ಕಡಿ ಹಿಡಿಯುವವನ ಸಂಯಮವೂ
ಅಷ್ಟೇ ಮುಖ್ಯ.

ಯಾರು ಈ ಸಂಯಮಿಗಳು?
ರುಚಿಯ ಬಗ್ಗೆ ತಕರಾರು ಮಾಡದವರು
ಆಕಾಶವನ್ನು ಮೈತುಂಬ ಹೊದ್ದವರು
ಬೆಳಕಿನಂತೆ ಹಬ್ಬಿಕೊಳ್ಳುವವರು
ಪರ್ವತಗಳಂತೆ ನೆಲಕ್ಕೆ ಕಾಲೂರಿ ನಿಂತವರು
ಬದುಕು ಕಟ್ಟಿಕೊಟ್ಟ ಬುತ್ತಿಯನ್ನೆಲ್ಲ
ಕಣ್ಣಿಗೊತ್ತಿಕೊಂಡು ಉಣ್ಣುವವರು.
ಕಣ್ಣಳತೆಯಲ್ಲಿ ಯಾವ ಮೈಲಿಗಲ್ಲೂ ಇಲ್ಲದವರು.

ಅವರು ಯಾವುದನ್ನೂ ಕಟ್ಚಿಹಾಕುವುದಿಲ್ಲ
ಅಂತೆಯೇ ಅವರಿಗೆ
ಯಾವುದೂ ಅಸಾಧ್ಯವಲ್ಲ.
ತಾಯಿ ಮಗುವನ್ನು ಕಾಡುವಂತೆ
ಅವರು ಜನರನ್ನು ಕಾಡುತ್ತಾರೆ.

Leave a Reply