ಖಲೀಲ್ ಗಿಬ್ರಾನ್ | ಅನುವಾದ – ಚಿದಂಬರ ನರೇಂದ್ರ
ಒಮ್ಮೆ ಒಂದು ಹೊಲದೊಳಗಿಂದ ಹಾಯ್ದು ಹೋಗುವಾಗ ಒಂಟಿಯಾಗಿ ನಿಂತಿದ್ದ ಬೆದರುಬೊಂಬೆಯನ್ನು ಮಾತಾಡಿಸಿದೆ.
“ ಒಬ್ಬನೇ ಹೊಲದೊಳಗೆ ನಿಂತು ನಿಂತು, ನಿನಗೆ ಆಯಾಸ ಆಗಿರಬಹುದಲ್ಲವೆ? “
“ ಇನ್ನೊಬ್ಬರನ್ನು ಹೆದರಿಸುವ ಆನಂದ, ಬಹಳ ಆಳ, ಬಹು ಅನನ್ಯ, ಈ ಸಂತೋಷದಿಂದ ಯಾರಿಗೆ ತಾನೆ ಆಯಾಸ ಆಗಬಲ್ಲದು? “ ಬೆದರುಬೊಂಬೆ ಉತ್ತರಿಸಿತು.
ಒಂದು ಘಳಿಗೆ ಯೋಚಿಸಿ, ಉತ್ತರಿಸಿದೆ
“ ನಿಜ, ಈ ಆನಂದದ ಸುಖವನ್ನು ನಾನೂ ಬಲ್ಲೆ “
“ ಮೈಯೆಲ್ಲ ಹುಲ್ಲು ತುಂಬಿಕೊಂಡವರು ಮಾತ್ರ ಈ ಅದ್ಭುತವನ್ನು ಅರಿಯಬಲ್ಲರು “
ಬೆದರುಬೊಂಬೆ ಸಮಜಾಯಿಷಿ ಕೊಟ್ಟಿತು.
ಬೊಂಬೆ ನನ್ನ ಹೊಗಳುತ್ತಿದೆಯೋ, ಅಪಮಾನ ಮಾಡುತ್ತಿದೆಯೋ ಗೊತ್ತಾಗಲಿಲ್ಲ. ಅಲ್ಲಿಂದ ಹೊರಟು ಬಿಟ್ಟೆ. ಹೀಗೇ ಒಂದು ವರ್ಷ ಕಳೆದುಹೋಯಿತು. ಈ ನಡುವೆ ಬೆದರುಬೊಂಬೆ ತತ್ವಜ್ಞಾನಿಯಾಗಿತ್ತು.
ಮುಂದೊಮ್ಮೆ ಆ ಹೊಲದೊಳಗಿಂದ ಹಾಯ್ದು ಹೋಗುವಾಗ, ಆ ಬೆದರುಬೊಂಬೆಯ ಎದೆಯೊಳಗೆ ಎರಡು ಹಕ್ಕಿಗಳು ಗೂಡು ಕಟ್ಟಿಕೊಳ್ಳುತ್ತಿರುವುದನ್ನು ಕಂಡೆ.