ಮೂಲ : ಫರೀದುದ್ದೀನ್ ಅತ್ತಾರ್ (ಅತ್ತಾರ್ ನಿಶಾಪುರಿ) | ಕನ್ನಡಕ್ಕೆ ಚೇತನಾ ತೀರ್ಥಹಳ್ಳಿ
ನೀರವ ರಾತ್ರಿಯಲಿ ಸೂಫಿ ಬಿಕ್ಕಿದ;
“ಜಗತ್ತು ಶವಪೆಟ್ಟಿಗೆ,
ಜನರು ಬಂಧಿ;
ಮೂರ್ಖತನವೇ ಬದುಕಾಗಿ
ವಿನಾಶದ ಹಾದಿ ತುಳಿಯುತ್ತಿದ್ದಾರೆ!
ಮತ್ಯು ಬಂದು ಶವಪೆಟ್ಟಿಗೆ ತೆರೆದಾಗ
ರೆಕ್ಕೆ ಮೂಡಿದವರೆಲ್ಲ ನಿತ್ಯತೆಗೆ ಹಾರಿ ಹೋಗುವರು;
ಇಲ್ಲದವರು, ಹುದುಗಿ ಹೋಗುವರು ಇಲ್ಲೇ
ಶಾಶ್ವತವಾಗಿ.
ಕಾಲಹರಣ ಮಾಡಬೇಡಿ,
ಓ ನನ್ನ ಗೆಳೆಯರೇ!
ಶವಪೆಟ್ಟಿಗೆಯ ಮುಚ್ಚಲ ತೆಗೆಯುವವರೆಗೆ,
ದೇವಲೋಕಕೆ ಹಾರಲು ತಯಾರಿ ಮಾಡಿಕೊಳ್ಳಿ;
ನಿಮ್ಮ ನಿಮ್ಮ ಪಕ್ಕೆಗಳಲ್ಲಿ
ಅರಿವಿನ ರೆಕ್ಕೆ ಬೆಳೆಸಿಕೊಳ್ಳಿ