ಅನಿಷ್ಟಗಳಿಂದ ಪಾರು ಮಾಡುವ ದಶರಥ ಕೃತ ಶನಿಸ್ತೋತ್ರ

ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಿ ರಚಿಸಿದ ಶನಿಸ್ತೋತ್ರ ಮತ್ತು ಕನ್ನಡ ಸರಳ ಭಾವಾರ್ಥ ಇಲ್ಲಿದೆ. ಪಿಪ್ಪಲಾದ ಮುನಿ  ಶನಿದೇವನನ್ನು ಹತ್ತು ಹೆಸರುಗಳಿಂದ ಸ್ತುತಿಸಿದ್ದು, ಆ ಹತ್ತು ಹೆಸರುಗಳ ನಿತ್ಯಪಠಣ ನಮ್ಮನ್ನು ಶನಿಪೀಡೆಯಿಂದ ಪಾರುಮಾಡುತ್ತದೆ ಎನ್ನುತ್ತಾನೆ ದಶರಥ.

ಅಸ್ಯ ಶ್ರೀ ಶನೈಶ್ಚರ ಸ್ತೋತ್ರಸ್ಯ | ದಶರಥ ಋಷಿಃ |
ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ |
ಶನೈಶ್ಚರ ಪ್ರೀತ್ಯರ್ಥಂ ಜಪೇ ವಿನಿಯೋಗಃ ||

ಭಾವಾರ್ಥಃ ಈ ಶನೈಶ್ಚರ ಸ್ತೋತ್ರದ ದ್ರಷ್ಟಾರ ಅಥವಾ ಕರ್ತೃ ದಶರಥನೂ, ಸ್ತೋತ್ರ ದೇವತೆ ಶನಿಯೂ ಆಗಿದ್ದಾರೆ. ಇದು ತ್ರಿಷ್ಟುಪ್ ಛಂದಸ್ಸಿನಲ್ಲಿ ರಚನೆಗೊಂಡಿದೆ. ಶನೈಶ್ಚರನನ್ನು ಸಂಪ್ರೀತಗೊಳಿಸುವ ಸಲುವಾಗಿ ಈ ಸ್ತೋತ್ರವನ್ನು ಪಠಿಸಲಾಗುತ್ತದೆ.

ದಶರಥ ಉವಾಚ :

ಕೋಣೋ ಅಂತಕೋ ರೌದ್ರಯಮೋSಥ ಬಭ್ರುಃ |
ಕೃಷ್ಣಃ ಶನಿಃ ಪಿಂಗಲ ಮಂದ ಸೌರಿ ||
ನಿತ್ಯಂ ಸ್ಮೃತೋಯೋ ಹರತೇ ಚ ಪೀಡಾಂ |
ತಸ್ಮೈನಮಃ ಶ್ರೀ ರವಿನಂದನಾಯ || 1 ||

ಭಾವಾರ್ಥ : ಕೋಣ, ಅಂತಕ, ರೌದ್ರ, ಯಮ, ಬಭ್ರು, ಕೃಷ್ಣ, ಶನಿ, ಪಿಂಗಲ, ಮಂದ, ಸೌರಿ ಎಂಬುದಾಗಿ (ಇವು ಶನಿದೇವನ ಹತ್ತು ಹೆಸರುಗಳು) ಅನುದಿನವೂ ಸ್ಮರಿಸುವುದರಿಂದ ಯಾರು ಸಂಪ್ರೀತನಾಗಿ ಪೀಡೆಗಳನ್ನು ಪರಿಹರಿಸುವನೋ ಅಂತಹಾ ರವಿತನಯನಿಗೆ ನನ್ನ ನಮಸ್ಕಾರಗಳು.

ಸುರಾಸುರಾಃ ಕಿಂ ಪುರುಷೋರಗೇಂದ್ರಾ|
ಗಂಧರ್ವ ವಿದ್ಯಾಧರ ಪನ್ನಗಾಶ್ಚ ||
ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
ತಸ್ಮೈ ನಮಃ ಶ್ರೀರವಿನಂದನಾಯ || 2 ||

ಭಾವಾರ್ಥ : ದೇವತೆಗಳು, ಅಸುರರು, ಕಿಂಪುರುಷರು, ಸರ್ಪ ಕುಲ, ಗಂಧರ್ವ – ವಿದ್ಯಾಧರರು, ಪನ್ನಗರೇ ಆದಿಯಾಗಿ ಯಾರು ಕೂಡಾ ವಿಷಮಸ್ಥಾನ ಸ್ಥಿತನಾಗಿರುವ ಇವನ ಪೀಡೆಯಿಂದ ತಪ್ಪಿಸಿಕೊಳ್ಳಳು ಸಾಧ್ಯವಿಲ್ಲ. ಅಂಥಹಾ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು.

ನರಾನರೇಂದ್ರಾಃ ಪಶವೋಮೃಗೇಂದ್ರಾ |
ವನ್ಯಾಶ್ಚಯೇ ಕೀಟ ಪತಂಗ ಭೃಂಗಾಃ ||
ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
ತಸ್ಮೈ ನಮಃ ಶ್ರೀರವಿನಂದನಾಯ || 3 ||

ಭಾವಾರ್ಥ : ಮನುಷ್ಯರು, ರಾಜರು, ಪಶುಗಳು, ಮೃಗರಾಜ ಸಿಂಹನಾದಿಯಾಗಿ ಎಲ್ಲ ಪ್ರಾಣಿಗಳು, ಕೀಟಗಳು, ಪತಂಗಗಳು, ಭ್ರಮರಗಳು ಕೂಡಾ  ವಿಷಮಸ್ಥಾನ ಸ್ಥಿತನಾಗಿರುವ ಇವನಿಂದ ಪೀಡಿಸಲ್ಪಡುವರು. ಅಂತಹಾ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು. 

ದೇಶಾಶ್ಚ ದುರ್ಗಾಣಿ ವನಾನಿಯತ್ರ |
ಸೇನಾನಿವೇಶಾಃ ಪುರಪತ್ತನಾನಿ ||
ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
ತಸ್ಮೈ ನಮಃ ಶ್ರೀರವಿನಂದನಾಯ || 4 ||

ಭಾವಾರ್ಥ: ದೇಶಗಳು, ಕೋಟೆ ಕೊತ್ತಲಗಳು, ವನಗಳು, ಸೈನಿಕರ ನೆಲೆಗಳು, ನಗರ – ಪಟ್ಟಣಗಳು ಇವೆಲ್ಲವೂ ವಿಷಮಸ್ಥಾನ ಸ್ಥಿತನಾಗಿರುವ ಇವನ ಬಾಧೆಗೆ ಒಳಗಾಗುವರು. ಅಂತಹಾ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು. 

ತಿಲೈರ್ಯವೈರ್ಮಾಷ ಗುಡಾನ್ನ ದಾನೈ |
ರ್ಲೋಹೇನ ನೀಲಾಂಬರದಾನತೋ ವಾ ||
ಪ್ರೀಣಾತಿ ಮಂತ್ರೈರ್ನಿಜವಾಸರೇ ಚ |
ತಸ್ಮೈ ನಮಃ ಶ್ರೀರವಿನಂದನಾಯ || 5 ||

ಭಾವಾರ್ಥ: ಶನೈಶ್ಚರನ ವಾರವಾಗಿರುವ ಶನಿವಾರದಂದು ಎಳ್ಳು, ಗೋಧಿ, ಉದ್ದು, ಬೆಲ್ಲ, ಅನ್ನದಾನಗಳನ್ನು ಮಾಡುವುದರಿಂದ; ಶನೈಶ್ಚರನ ಮಂತ್ರಗಳನ್ನು ಪಠಿಸುತ್ತಾ ಕಬ್ಬಿಣ, ನೀಲವರ್ಣದ ವಸ್ತ್ರಗಳನ್ನು ದಾನ ಮಾಡುವುದರಿಂದ ಅವನು ಸುಪ್ರೀತನಾಗುವನು. ಅಂತಹಾ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು. 

ಪ್ರಯಾಗ ಕೂಲೇ ಯಮುನಾತಟೇ ಚ |
ಸರಸ್ವತಿ ಪುಣ್ಯ ಜಲೇ ಗುಹಾಯಾಮ್ ||
ಯೋ ಯೋಗೀನಾಂ ಧ್ಯಾನಗತೋSಪಿ ಸೂಕ್ಷ್ಮಃ |
ತಸ್ಮೈ ನಮಃ ಶ್ರೀರವಿನಂದನಾಯ || 6 ||

ಭಾವಾರ್ಥ : ಪ್ರಯಾಗದ ದಂಡೆಯಯ ಮೇಲೆ, ಯಮುನಾ ನದಿಯ ದಡದಲ್ಲಿ, ಸರಸ್ವತಿ ನದಿಯ ಪುಣ್ಯ ತೀರ್ಥದಲ್ಲಿ, ಮತ್ತು ಗುಹೆಗಳಲ್ಲಿ ನೆಲೆಸಿರುವ ಮಹಾಯೋಗಿಗಳ ಧ್ಯಾನದ ಸೂಕ್ಷ್ಮರೂಪಿಯಾಗಿ ಯಾರು ಅಂತರ್ಗತರಾಗಿರುವರೋ ಅಂತಹಾ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು. 

ಅನ್ಯ ಪ್ರದೇಶಾತ್ ಸ್ವಗ್ರಹಂ ಪ್ರವಿಷ್ಟಃ |
ತದೀಯ ವಾಸರೇ ನರಃ ಸುಖೀಸ್ಯಾತ್ ||
ಗ್ರಹಾದ್ಗತೋಯೋನ ಪುನಃ ಪ್ರಯಾತಿ |
ತಸ್ಮೈ ನಮಃ ಶ್ರೀರವಿನಂದನಾಯ || 7 ||

ಭಾವಾರ್ಥ : ಶನಿವಾರದಂದು ಬೇರೆ ಊರಿನಿಂದ ತನ್ನ ಸ್ವಗೃಹಕ್ಕೆ ಬರುವ ಮನುಜನು ಸುಖಿಯಾಗುವನು. ಆ ದಿನ ಮನೆಯಿಂದ ಹೊರಗೆ ಹೋದವನು ಮತ್ತೆ ಬರಲಾರನು. ಇಂಥ ಫಲವನ್ನು ಉಂಟುಮಾಡುವ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು.

ಸೃಷ್ಟಾ ಸ್ವಯಂ ಭೂರ್ಬುವನತ್ರಯಸ್ಯ |
ತ್ರಾತಾ ಹರೀಶೋ ಹರಿತೇ ಪಿನಾಕಿ ||
ಏಕಸ್ತ್ರಿಧಾ ಋಗ್ಯಜುಃ ಸಾಮಮೂರ್ತಿಃ |
ತಸ್ಮೈ ನಮಃ ಶ್ರೀರವಿನಂದನಾಯ || 8 ||

ಭಾವಾರ್ಥ : ಸ್ವರ್ಗ, ಮರ್ತ್ಯ, ಪಾತಾಳಗಳೆಂಬ ಮೂರು ಲೋಕಗಳನ್ನು ಸೃಷ್ಟಿಸಿದ ಬ್ರಹ್ಮ, ಪಾಲಕನಾದ ಶ್ರೀಹರಿ, ಲಯಕರ್ತನಾಗಿರುವ ಮಹಾದೇವ ಸ್ವರೂಪಿಯೂ; ಋಗ್ ಯಜು ಸಾಮಗಳೆಂಬ ವೇದತ್ರಯಗಳ ಮೂರ್ತರೂಪವೂ ಆಗಿರುವಂಥ ಪ್ರಭಾವಶಾಲಿ ರವಿಪುತ್ರನಿಗೆ ನನ್ನ ನಮಸ್ಕಾರಗಳು. 

ಶನ್ಯಷ್ಟಕಂ ಯಃ ಪ್ರಯತಃ ಪ್ರಭಾತೇ |
ನಿತ್ಯಂ ಸುಪುತ್ರೈಃ ಪಶು ಬಾಂಧವೈಶ್ಚ ||
ಪಠೇತ್ತು ಸೌಖ್ಯಂ ಭುವಿಭೋಗಯುಕ್ತಃ |                                     
ಪ್ರಾಪ್ನೋತಿ ನಿರ್ವಾಣ ಪದಂ ತದಂತೇ || 9 ||

ಭಾವಾರ್ಥ : ಶನೈಷ್ಚರನ ಈ ಅಷ್ಟಕ ಸ್ತೋತ್ರಗಳನ್ನು ಯಾರು ಪ್ರತಿದಿನವೂ ಉಷಃಕಾಲದಲ್ಲಿ ಪಠಿಸುವರೋ ಅವರು ಸದ್ಗುಣಿಗಳಾದ ಪುತ್ರರು, ಪಶುಗಳು, ಬಾಂಧವರುಗಳಿಂದ ಕೂಡಿ ಭೂಮಿಯಲ್ಲಿ ಸಮಸ್ತ ಭೋಗಗಳನ್ನು ಹೊಂದಿ, ಸುಖಸೌಖ್ಯಾದಿಗಳನ್ನು ಅನುಭವಿಸುವರು. ಅಷ್ಟು ಮಾತ್ರವಲ್ಲದೆ ಮರಣಾನಂತರ ಮೋಕ್ಷವನ್ನೂ ಹೊಂದುವರು.

ಕೋಣಸ್ಥೈಃ ಪಿಂಗಲೋ ಬಭ್ರುಃ |
ಕೃಷ್ಣೋರೌದ್ರೋ ಅಂತಕೋ ಯಮಃ ||
ಸೌರಿಃ ಶನೈಶ್ಚರೋ ಮಂದಃ |
ಪಿಪ್ಪಲಾದೇನ ಸಂಸ್ತುತಃ || 10 ||

ಭಾವಾರ್ಥ: ಶನಿದೇವನನ್ನು ಪಿಪ್ಪಲಾದ ಮುನಿಯು ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಸೌರಿ, ಶನೈಶ್ಚರ, ಮಂದ ಎಂಬ ಹೆಸರುಗಳಿಂದ ಸ್ತುತಿಸಿದ್ದಾರೆ.

ಏತಾನಿ ದಶನಾಮಾನಿ |
ಪ್ರಾತರುತ್ಥಾಯ ಯಃ ಪಠೇತ್ ||
ಶನೈಶ್ಚರ ಕೃತಾಪೀಡಾ |
ನ ಕದಾಚಿತ್ ಭವಿಷ್ಯತಿ || 11 ||

ಭಾವಾರ್ಥ: ಉಷಃಕಾಲದಲ್ಲಿ ಎದ್ದು ಶನೈಶ್ಚರನ ಈ ಹತ್ತು ಹೆಸರುಗಳನ್ನು ಪಠಿಸುವವರಿಗೆ ಶನೈಶ್ಚರನಿಂದ ಯಾವುದೇ ಬಗೆಯ ಅನಿಷ್ಟವೂ ಉಂಟಾಗಲಾರದು.

(ವಿ.ಸೂ : ಇಲ್ಲಿ ಪ್ರತಿನಿತ್ಯ ಹಾಕುವ ಸ್ತೋತ್ರ, ಮಂತ್ರಗಳು ನಮ್ಮಲ್ಲಿ ಪರಮ ಅಸ್ತಿತ್ವದೆಡೆ ಶ್ರದ್ಧೆಯನ್ನು ಮೂಡಿಸುವಂತಿರಲಿ. ನಮಗೇನು ದೊರಕಿದೆಯೋ ಅದು ಅಸ್ತಿತ್ವದ ?ಭಗವಂತನ ದೇಣಿಗೆ ಎನ್ನುವುದರ ನೆನಪು ಮಾಡಿಕೊಡಲಿ. ಕೇವಲ ಮಂತ್ರ / ಸ್ತೋತ್ರ ಪಠಣದಿಂದ ಏನೂ ಸಾಧನೆಯಾಗುವುದಿಲ್ಲ. ಕಲಿಗಾಲದ ಹುಲುಮಾನವರಾದ ನಮ್ಮಲ್ಲಿ ಯುಗಾಂತರಗಳಲ್ಲಿದ್ದ ಸಾಧಕರ ಶ್ರದ್ಧೆ – ಬದ್ಧತೆಯ ಒಂದಂಶವೂ ಇಲ್ಲದೆ ಇರುವುದೇ ಇದಕ್ಕೆ ಕಾರಣ. ಆದ್ದರಿಂದ ನಮ್ಮ ನಿತ್ಯದ ಕೆಲಸಗಳನ್ನೂ, ಜವಾಬ್ದಾರಿಗಳನ್ನೂ, ಕರ್ತವ್ಯಗಳನ್ನೂ ನಿಭಾಯಿಸುತ್ತಲೇ ಶ್ರದ್ಧೆಯಿಂದ ಭಗವಂತನ ಸಹಾಯ ಕೋರಿದರೆ, ಆಗ ಮಾತ್ರ ನಮ್ಮ ಪ್ರಾರ್ಥನೆ ಫಲಿಸುತ್ತದೆ. “ಸೋಮಾರಿಗಳಿಗೆ ಯಶಸ್ಸು ದೊರೆಯದು ಎಂದು ನಮ್ಮ ವೇದಗಳು ಹೇಳಿವೆ. ಆದ್ದರಿಂದ, ಪ್ರಯತ್ನ ನಿರಂತರವಾಗಿರಲಿ. ಅದರ ಜೊತೆ ಶ್ರದ್ಧಾಭಕ್ತಿಯ ಆಚರಣೆಗಳು ಬೆರೆಯಲಿ. 

ಧನ್ಯವಾದ. )

1 Comment

Leave a Reply