ಮೂಲ : ಹಫೀಜ್, ಸೂಫಿ ಸಂತಕವಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ಯಾರೋ ಬಂದು
ನನ್ನ ಹತ್ತಿರ ಕುಳಿತರು.
ಭಗವಂತನ ಬಗ್ಗೆ
ಅದು ಇದು ಮಾತನಾಡಿ
ಉದ್ವೇಗಗೊಂಡರು.
ಅವರ ಮನಸ್ಸಿನ ತಳಮಳಕ್ಕೆ
ನಾನು ಸಮಾಧಾನ ಹೇಳದೇ ಹೋದರೆ,
ಈ ಜಗತ್ತಿನ ಬಗ್ಗೆ
ಮತ್ತು
ಸ್ವತಃ ಅವರ ಬಗ್ಗೆಯೇ
ಭರವಸೆ ಮೂಡಿಸದೇ ಹೋದರೆ ?
ಹಫಿಜ್, ಬೇಗ ಓಡು
ಮಸೀದಿಗೆ ಹೋಗು
ದೇವರ ಮುಂದೆ ಪ್ರಾರ್ಥನೆ ಮಾಡು
ನೀನು ಇದೀಗ ನನಗೆ ಗೊತ್ತಿರುವ
ಒಂದೇ ಒಂದು ಪಾಪ ಮಾಡಿದ್ದೀಯ.