ಕನ್ನಡ ಮರು ರೂಪ: ಅಂಬಿಕಾತನಯ ದತ್ತ
ಲಯದ ಬಸಿರ ಬಯಲಲ್ಲಿ ದೇವ-ಭವ ಬೀಜ ಬಿತ್ತಿದಾಕೆ
ಮೂಕು ಮೊಗ್ಗೆ ಮುನ್ನೂಕಿ ಬಂಡಿನಲಿ ತಲೆಯನೆತ್ತಿದಾಕೆ
ರಸವ ಮೀರಿ ತಾನಾರಿದಾತನಿಗೆ ಹೇಗೊ ರುಚಿಸಿದಾಕೆ
ಸಾಕ್ಷಿಪುರುಷನಾ ಅಕ್ಷಿಯಲ್ಲೆ ಪ್ರತ್ಯಕ್ಷ ರಚಿಸಿದಾಕೆ
೨
ಜಡದ ಪ್ರಾಣಗತಿ ಜಡಿದು ಮಿಡಿದು ಸ್ವರಮೇಳ ಕೋದಿದಾಕೆ
ಕೋಟಿ ಚಿಕ್ಕೆ ಪುಟಕಿರುವ ಬಯಲ ಹೊತ್ತಿಗೆಯನೋದಿದಾಕೆ
ಪಿಂಡಗಳನು ಬ್ರಹ್ಮಾಂಡಗಳನು ಮಣಿಮಾಲೆ ಮಾಡಿದಾಕೆ
ನಿನ್ನ ತಾಳಗತಿಯಲ್ಲಿ ವಿಶ್ವಗಳ ಗೀತೆ ಹಾಡಿದಾಕೆ
೩
ಕೀಟಕೀಟದಲಿ ಮಾಟ ಮಾಡಿ ಹಲಚೆಲುವು ತೂರಿದಾಕೆ
ಪಶುವಿನಿದಿರು ಮರಿದೂಡಿ ಮೋಡಿಯಲಿ ಒಲವ ಹೀರಿದಾಕೆ
ಹಾವಭಾವದಲಿ ಭೋಗ ಯೋಗದಲಿ ನಲಿವ ತೋರಿದಾಕೆ
ಸಕಲ ವಿಕಲಗಳ ಕಲೆಯ ಜಾಲದಲಿ ಬಲವ ಮೀರಿದಾಕೆ
೪
ಚತುರ್ಮುಖನ ನಾಲಗೆಯ ಹಾಸಿ ತುಟಿದಿಂಬು ಮಾಡಿದಾಕೆ
ವತ್ಸಲಾಂಛನದ ಹೃದಯಕಮಲದಲಿ ಮನೆಯ ಹೂಡಿದಾಕೆ
ಹರನ ಮೈಯನರೆದುಂಬಿ ಲೀಲೆಯಲಿ ತಲೆಯನೇರಿದಾಕೆ
ಹೀಗೆ ಕುಣಿಯೆ ಆನಂದಲಹರಿ ಈ ಜೀವ ಸೇರಿದಾಕೆ
೫
ಹಾಡಿದವನ ಕಾಪಾಡಲೆಂದು ಕೈ ಹತ್ತು ಎತ್ತಿದಾಕೆ
ಎತ್ತ ಕಿವಿಯದಿರುವಿದರು ಅತ್ತ ಐಮೊಗದಿ ಮುತ್ತಿದಾಕೆ
ತಮವು ಹಬ್ಬಿದತ್ತತ್ತ ನಿನ್ನ ಸುಳಿಬೆಳಕು ಸುತ್ತಿದಾಕೆ
ಇರುಳ ಕೋಟಿ ಹೆಡೆ ಮೆಟ್ಟಿ ಮಣಿಗಳೊಲು ಚಿಕ್ಕೆಯೊತ್ತಿದಾಕೆ
೬
ಮುತ್ತು ಹವಳ ಬಂಗಾರ ನೀಲಮಣಿ ಸ್ಫಟಿಕ ಛಾಯೆಯಾಕೆ
ಕಣ್ಣ ನಡುವೆ ಒಳಗಣ್ಣ ತೆರೆಯುವಾ ದಿವ್ಯಮಾಯೆಯಾಕೆ
ಬೆಳೆವ ಚಂದ್ರಕಳೆ ಮುಕುಟದವಳೆ ತಂತನದ ಬಣ್ಣದಾಕೆ
ವರದ ಅಭಯ ಕರವಿರಲು ತಾಯಿ ಬಾ ಬೇರೆ ಕರೆಯಬೇಕೆ?
.
(ಇಂದು ಬೇಂದ್ರೆ ಜನ್ಮದಿನ)
ಇದ ಕೇಳಿ ಆಕಾಶದತ್ತ ಜಿಗಿಯುವಾದೆ,ಮನದಲಿ ಮಾತೆಯ ಪೂಜಿಸುವಾಸೆಮರತೆಯಾದರೆ ಜೀವನ
ವ್ಯರ್ಥೆಂಬನೋವು.ನೀನುತೋರಿಸಿದ ಹಾ್ಒಯಲಿ
ಮುನ್ನುಗ್ಗಿ ಹೋಗುವಾಸೆ.