ಭಗವದ್ಗೀತೆ: ಕೃಷ್ಣ ಕೊಟ್ಟ ಭರವಸೆ

ಹೀಗೆ ಯಾವುದಾದರೂ ಒಂದು ಧರ್ಮ ಎಂಬುದಿದ್ದರೆ, ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಕೈಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ಗೀತೆಯ ಉಪದೇಶದಲ್ಲಿ ಕೃಷ್ಣ ನಮಗೆ ಕೊಟ್ಟ ಕೊನೆಯ ಭರವಸೆ…

ಭಗವಂತನಲ್ಲಿ ಶರಣಾಗುವ ಮೂಲಕ ನಾವು ಮನಶ್ಶಾಂತಿಯನ್ನು ಹೊಂದುವುದು ಖಚಿತ. ನಾವು ಒಪ್ಪಿದರೂ ಬಿಟ್ಟರೂ ಸೃಷ್ಟಿಯ ಸಮಸ್ತವನ್ನೂ ಪರಿಪಾಲಿಸುವ ಜಗನ್ನಿಯಾಮಕ ಶಕ್ತಿಯೊಂದು ಇದ್ದೇ ಇದೆ. ಆ ಶಕ್ತಿಯನ್ನೆ ನಾವು ಭಗವಂತನೆಂದು ಕರೆಯುತ್ತೇವೆ. ಅಂಥಾ ಶಕ್ತಿಯೊಂದಿದೆ ಎಂಬ ಆಲೋಚನೆಯೇ ಶರಣಾಗತಿಯ ಮೊದಲ ಹೆಜ್ಜೆ. ಅನಂತರದಲ್ಲಿ ನಾವು ಮಾಡುತ್ತಿರುವುದು ಏನೂ ಇಲ್ಲ ಎಂಬ ಅರಿವು ಹಿಂಬಾಲಿಸುತ್ತದೆ. ಈ ಅರಿವಿನ ನಂತರ ಹೊಮ್ಮುವುದೇ ಶರಣಾಗತಿ. ಮನಸ್ಸನ್ನು ಭಗವಂತನತ್ತ ಹರಿಸಿ, ಬುದ್ಧಿಯನ್ನು ಭಗವಂತನಲ್ಲಿ ನೆಟ್ಟು, ಚಿತ್ತದಲ್ಲಿ ಭಗವಂತನನ್ನು ಸ್ಥಿರಗೊಳಿಸಿ, ಸುಪ್ತ ಪ್ರಜ್ಞೆಯಲ್ಲಿ ಕೂಡ ಭಗವಂತನ ಸ್ಮರಣೆಯನ್ನು ಶಾಶ್ವತಗೊಳಿಸಿಕೊಂಡಾಗ ನಮ್ಮ ಎಲ್ಲ ಕ್ರಿಯೆಗಳೂ ಭಗವಂತನ ಪೂಜೆಯಾಗುತ್ತವೆ. ಇದರಿಂದ ನಮ್ಮ ಎಲ್ಲ ವ್ಯವಹಾರದಲ್ಲೂ ಪೂರ್ಣ ಪ್ರಾಮಾಣಿಕತೆ ವ್ಯಕ್ತವಾಗುತ್ತದೆ. ಹಾಗೂ ಜೀವನದಲ್ಲಿ ಬರುವ ದುರ್ಗಮ ಸ್ಥಿತಿ, ಕಷ್ಟ ಕಾರ್ಪಣ್ಯಗಳನ್ನು ಎದುರಿಸುವ ಕ್ಷಮತೆ ಬರುತ್ತದೆ.

ಜ್ಞಾನಿಯಾದವನು ಇದನ್ನು ಅರ್ಥ ಮಾಡಿಕೊಂಡು ತನ್ನ ಜೀವನ ಪಯಣದಲ್ಲಿ ಅನಿವಾರ್ಯವಾಗಿ ಬರುವ ಎಲ್ಲ ಆಪತ್ತುಗಳನ್ನು ನಿರಾಯಾಸವಾಗಿ ದಾಟಿ ಮುನ್ನಡೆಯುತ್ತಾನೆ. ಈ ರೀತಿ ಬದುಕಿದಾಗ ಭಗವಂತ ನಮ್ಮ ಜೀವನದಲ್ಲಿಬರುವ ಸರ್ವ ಅನಿಷ್ಟಗಳಿಂದಲೂ ನಮ್ಮನ್ನು ರಕ್ಷಿಸುತ್ತಾನೆ. ಆತನ ರಕ್ಷಾಕವಚ ಸದಾ ನಮ್ಮನ್ನು ಸುತ್ತುವರಿದಿರುತ್ತದೆ. ಇದರಿಂದ ಜೀವನದಲ್ಲಿ ಬರುವ ಎಲ್ಲ ಆಪತ್ತುಗಳಿಂದ ನಾವು ಪಾರಾಗುತ್ತೇವೆ. ಇದನ್ನು ಬಿಟ್ಟು ನನ್ನಿಂದಲೇ ಎಲ್ಲ ಎಂದು, ಮಾನವನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಅಹಂಕಾರ ಪಟ್ಟರೆ, ನಮ್ಮ ಕೈಯಾರೆ ನಾವು ನಮ್ಮ ಬದುಕನ್ನು ಹಾಳು ಮಾಡಿಕೊಂಡು ವಿನಾಶ ಹೊಂದುತ್ತೇವೆ.

ನಕಾರಾತ್ಮಕತೆಯೂ ಅಹಂಕಾರವೇ

‘ನಾನು ಯುದ್ಧಮಾಡುವುದಿಲ್ಲ’ ಎಂದು ಅರ್ಜುನ ರಥದಲ್ಲಿ ಕುಸಿದು ಕೂರುವುದನ್ನು ಭಗವದ್ಗೀತೆಯ ಮೊದಲ ಅಧ್ಯಾಯದಲ್ಲಿನಾವು ನೋಡುತ್ತೇವೆ. ಇಲ್ಲಿ ಕೃಷ್ಣ ಹೇಳುತ್ತಾನೆ, “ನಾನು ಯುದ್ಧ ಮಾಡುವುದಿಲ್ಲ ಅನ್ನುವುದು ಕೂಡ ನಿನ್ನ ಅಹಂಕಾರಭರಿತ ಭ್ರಮೆಯೇ ಆಗಿದೆ’ ಎಂದು. “ನೀನು ಏನನ್ನು ಮಾಡುವುದಿಲ್ಲ ಎಂದು ಹೇಳಿರುವೆಯೋ ಅದನ್ನೇ ಮಾಡುತ್ತೀಯ’ ಎಂದು. ಏಕೆಂದರೆ ನಮ್ಮನ್ನು ನಿಯಂತ್ರಣ ಮಾಡುವ ಶಕ್ತಿ ಪ್ರಕೃತಿ. ಇಲ್ಲಿನಮ್ಮ ಭೌತಿಕ ತೀರ್ಮಾನ ವ್ಯರ್ಥ. ನಮ್ಮ ಜೀವ ಸ್ವಭಾವ, ಅದಕ್ಕನುಗುಣವಾಗಿ ಅನುವಂಶೀಯ ಪ್ರಭಾವ, ಪರಿಸರದ ಪ್ರಭಾವ ಮತ್ತು ಈ ಎಲ್ಲವನ್ನು ನಿಯಂತ್ರಿಸುವ ಭಗವಂತನ ಇಚ್ಛೆಯಂತೆ ಕ್ರಿಯೆ ನಡೆದೇ ನಡೆಯುತ್ತದೆ. ನಾವು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಅಹಂಕಾರದಿಂದ ಯೋಚಿಸುವುದು ನಮ್ಮ ಅಜ್ಞಾನದಿಂದ. ಈ ರೀತಿ ಯಾವ ಯೋಚನೆ ಮಾಡಿದರೂ ಕೊನೆಗೆ ಮಾಡುವುದು ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿಯೇ. ಇದರ ನಿಯಂತ್ರಣ ನಮ್ಮಲ್ಲಿಲ್ಲ ಅದು ನಮಗರಿವಿಲ್ಲದಂತೆ, ಭಗವಂತನ ಇಚ್ಛೆಯಂತೆ ನಡೆಯುತ್ತದೆ. ಆದ್ದರಿಂದ ಮಾಡುತ್ತೇನೆ ಅನ್ನುವುದು ಹೇಗೆ ಅಹಂಕಾರವಾಗುತ್ತದೆಯೋ ಮಾಡುವುದಿಲ್ಲ ಅನ್ನುವುದು ಕೂಡ ಅಹಂಕಾರವೇ ಆಗುತ್ತದೆ.

ಮಹಾ ಚೈತನ್ಯ

ಎಲ್ಲ ಜೀವಗಳ ಹೃತ್ಕಮಲ ಮಧ್ಯದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ. ಈ ಪಿಂಡಾಂಡ ಮತ್ತು ಬ್ರಹ್ಮಾಂಡ ಎನ್ನುವ ಅದ್ಭುತ ಯಂತ್ರ ನಿರಂತರ ಚಲಿಸುವಂತೆ ಮಾಡುವವ ಆ ಭಗವಂತ. ಆತನೇ ಬ್ರಹ್ಮಾಂಡ ಮತ್ತು ಪಿಂಡಾಂಡದ ಒಡೆಯ. ಎಲ್ಲರೊಳಗಿದ್ದು, ಅವರಿಗೆ ಅನುಭವವನ್ನು ಕೊಟ್ಟು ನಿಯಂತ್ರಿಸುವ ಮಹಾ ಚೈತನ್ಯ ಆ ಭಗವಂತ. ಸರ್ವ ಕರ್ಮವೂ ಭಗವಂತನ ಮಹಿಮೆಯಿಂದ ಅವನ ಇಚ್ಛೆಯಂತೆ ನಡೆಯುತ್ತದೆ. ಸರ್ವಸಮರ್ಥನಾದ ಭಗವಂತನಿಗೆ ನಾವು ನಮ್ಮನ್ನು ಅರ್ಪಿಸಿಕೊಳ್ಳಬೇಕು. ನಮ್ಮ ಜೀವನದ ಎಲ್ಲ ಹಂತಗಳಲ್ಲೂ ಭಗವಂತನಲ್ಲಿ ಶರಣಾಗತಿ ಇರಬೇಕು. ಕೇವಲ ಕಷ್ಟಕಾಲದಲ್ಲಿ ಮಾತ್ರವಲ್ಲ, ಸದಾ ಕಾಲವೂ ಇರಬೇಕು. ನಮ್ಮಲ್ಲಿ ಸತ್ವಗುಣವನ್ನು ಬೆಳಸಿಕೊಂಡು, ಕತ್ತಲೆಯನ್ನು ದೂರಮಾಡಿ, ಭಗವಂತನಲ್ಲಿ ನಮ್ಮನ್ನು ನಾವು ಅರ್ಪಿಸಿಕೊಂಡಾಗ ನಮಗೆ ನಿಜವಾದ ಪೂರ್ಣ ಸತ್ವದ ದರ್ಶನವಾಗುತ್ತದೆ. ಆ ಭಗವಂತ ಕಣ್ಣುತೆರೆದು ಅನುಗ್ರಹ ಮಾಡಿದನೆಂದರೆ ನಂತರ ತಿಳಿವು ಬರಲು ಇತರ ಯಾವ ಸಾಧನವೂ ಬೇಡ. ಸತ್ಯ ತನ್ನಷ್ಟಕ್ಕೆ ತಾನು ತೆರೆದುಕೊಳ್ಳುತ್ತದೆ ಮತ್ತು ಸರ್ವೋತ್ಕೃಷ್ಟಆನಂದ ನಮ್ಮದಾಗುತ್ತದೆ. ಇದರಿಂದ ಜ್ಞಾನಾನಂದದ ತುತ್ತ ತುದಿಯಾದ ಮೋಕ್ಷವನ್ನು ಸೇರಬಹುದು.

ಕೃಷ್ಣ ಗೀತೆಯ ಹದಿನೈದನೇ ಅಧ್ಯಾಯದಲ್ಲಿ ಜ್ಞಾನದ ಉಪಸಂಹಾರ ಮಾಡಿದ್ದಾನೆ. ಇಲ್ಲಿ ಉಪಾಸನೆಯ ಎಲ್ಲ ಅರಿವನ್ನು ಕೊಟ್ಟ ನಂತರ, ಅದರ ಉಪಸಂಹಾರ ಮಾಡುತ್ತ ಹೇಳುತ್ತಾನೆ, “ಇದು ಪ್ರಪಂಚದಲ್ಲಿನ ರಹಸ್ಯಗಳಲ್ಲಿ ಅತಿ ರಹಸ್ಯವಾದದ್ವು ಅಧ್ಯಾತ್ಮದ ಅಂತರಂಗದ ರಹಸ್ಯವನ್ನು ನಿನಗೆ ಹೇಳಿದ್ದೇನೆ. ನಾನು ಹೇಳಿರುವ ವಿಚಾರವನ್ನು ಸಮಗ್ರವಾಗಿ ಪರಾಂಬರಿಸಿ ನಿನಗೆ ಏನು ತೋಚುತ್ತದೆಯೋ ಅದನ್ನು ಮಾಡು’ ಎಂದು.

ಇಲ್ಲಿ “ನಿನ್ನ ಜೀವಸ್ವರೂಪ, ಆತ್ಮಸಾಕ್ಷಿ ಏನು ಹೇಳುತ್ತದೊ ಹಾಗೆ ಮಾಡು’ ಎಂದು ಅರ್ಜುನನಿಗೆ ಹೇಳುವ ಮೂಲಕ ನಾವು ಇನ್ನೊಬ್ಬರ ಮೇಲೆ ನಮ್ಮ ಅಭಿಪ್ರಾಯ ಹೇರಬಾರದು ಎನ್ನುವ ಸಾಮಾಜಿಕ ನೀತಿಯನ್ನು ಕೃಷ್ಣ ಎತ್ತಿ ತೋರಿಸಿದ್ದಾನೆ. ಹಿಂದೆ ಹೇಳಿದ ಸಾಧನೆಯ ಸಾರವನ್ನು ನಾವು ತಿಳಿದುಕೊಳ್ಳಬೇಕಾದ ವಿಷಯಗಳಲ್ಲಿ ಅತ್ಯಂತ ರಹಸ್ಯವಾದ ಸಾಧನೆಯ ಗುಟ್ಟನ್ನು ಸಾತ್ವಿಕನಾದ ನಿನಗೆ ಇನ್ನೊಮ್ಮೆ ಹೇಳುತ್ತಿದ್ದೇನೆ; ನನ್ನ ಭಕ್ತನಾದ ನೀನು ಜ್ಞಾನಿ. ಜ್ಞಾನಿಗಳು ನನಗೆ ಅಚ್ಚುಮೆಚ್ಚು ಅದಕ್ಕಾಗಿ ಅದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ, ಕೇಳು – ಅನ್ನುತ್ತಾನೆ ಶ್ರೀ ಕೃಷ್ಣ.

ಸಾಧನೆಯ ಸಾರವನ್ನು ವಿವರಿಸುತ್ತ ಕೃಷ್ಣ, ಇಲ್ಲಿ ಹಿಂದೆ ವಿವರಿಸಿದ ವಿಷಯವನ್ನು ಸಾಧನೆಯ ಸಾರಸಂಗ್ರಹವನ್ನು ಮತ್ತೆ ಉಪಸಂಹಾರ ರೂಪದಲ್ಲಿ ಹೇಳುತ್ತಾನೆ, ‘ಮನ್ಮನಾ ಭವ – ನನ್ನಲ್ಲೇ ಮನಸ್ಸನ್ನಿಡು’ ಎಂದು. ಸಾಧನೆಯಲ್ಲಿ ನಮ್ಮ ಅನನ್ಯಚಿಂತನೆ ಕೇವಲ ಭಗವಂತನ ಕುರಿತಾದ ಏಕಭಕ್ತಿಯಾಗಿರಬೇಕು. ಜ್ಞಾನಪೂರ್ವಕವಾಗಿ ಭಗವಂತ ಸರ್ವೋತ್ತಮ ಎಂದು ಭಗವಂತನನ್ನು ನೆನೆಯಬೇಕು. ನಾವು ಮಾಡುವ ಎಲ್ಲ ಕರ್ಮಗಳೂ ಪ್ರೀತಿಪೂರ್ವಕ ಭಗವದರ್ಪಣೆಯಾಗಿರಬೇಕು. ಈರೀತಿ ಎಲ್ಲಬಗೆಯ ಉಪಾಸನೆಯಲ್ಲೂ ಭಗವಂತನನ್ನುಕಾಣಲು ಸಾಧ್ಯವಾಯಿತೆಂದರೆ, ಅಂತಿಮವಾಗಿ ನೀನು ನನ್ನನ್ನೇ ಬಂದು ಸೇರುತ್ತೀಯ. ಇದು ನಿನ್ನಾಣೆಗೂ ಸತ್ಯ – ಅನ್ನುತ್ತಾನೆ ಕೃಷ್ಣ

ಧರ್ಮ ನೀಡುವ ಧೈರ್ಯ

ಇಲ್ಲಿ ಕೃಷ್ಣ ಅರ್ಜುನನಿಗೆ ‘ಸರ್ವಧರ್ಮಾನ್‌ ಪರಿತ್ಯಜ್ಯ’ ಅನ್ನುತ್ತಾನೆ. ಅಂದರೆ ನಮ್ಮ ಲೌಕಿಕದ ಅರ್ಥದಲ್ಲಿ ಧರ್ಮಗಳನ್ನು ಬಿಡು ಎಂದು ಕೃಷ್ಣ ಹೇಳುತ್ತಿರುವುದಲ್ಲ. ಕೃಷ್ಣನ ಹೇಳಿಕೆಯ ಅರ್ಥ – ಎಲ್ಲ ಪುಣ್ಯಕರ್ಮಗಳನ್ನು ಮಾಡುವುದು, ಮತ್ತು ಅದರಿಂದ ಯಾವುದೇ ಫಲಾಪೇಕ್ಷೆಯನ್ನು ನಿರೀಕ್ಷಿಸದೇ ಇರುವುದು ಎಂದು.   

ನಾವು ಮಾಡುವ ಧರ್ಮಕಾರ್ಯ ವ್ಯಾಪಾರವಾಗಬಾರದು. ಇದಕ್ಕೆ ಒಂದು ಉತ್ತಮ ದೃಷ್ಟಾಂತ ಧರ್ಮರಾಯ ಮತ್ತು ದ್ರೌಪದಿ ನಡುವಿನ ಸಂಭಾಷಣೆ. ದ್ರೌಪದಿ ಧರ್ಮರಾಯನನ್ನು ಕೇಳುತ್ತಾಳೆ, “ಧರ್ಮೋ ರಕ್ಷತಿ ರಕ್ಷಿತಃ – ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎನ್ನುವುದನ್ನು ಕೇಳಿದ್ದೇನೆ. ಆದರೆ ಅದು ನಮ್ಮನ್ನು ಯಾಕೆ ರಕ್ಷಿಸಲಿಲ್ಲ? ನಾವೇಕೆ ರಾಜ್ಯ ಕಳೆದುಕೊಂಡು ಕಾಡು ಸೇರಬೇಕಾಯ್ತು?’ ಎಂದು. ಅದಕ್ಕೆ ಪ್ರತಿಯಾಗಿ ಧರ್ಮರಾಯ ಹೇಳುತ್ತಾನೆ, “ನಾನು ಧರ್ಮದ ವ್ಯಾಪಾರಿ ಅಲ್ಲ; ನಾನು ಧರ್ಮ ಆಚರಣೆ ಮಾಡುವುದು ನನ್ನ ಆತ್ಮಸಂತೋಷಕ್ಕಾಗಿ ಹೊರತು ಯಾವುದೇ ಫಲಾಪೇಕ್ಷೆಯಿಂದಲ್ಲ!”

ಹೀಗೆ ಯಾವುದಾದರೂ ಒಂದು ಧರ್ಮ ಎಂಬುದಿದ್ದರೆ, ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಕೈಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ಗೀತೆಯ ಉಪದೇಶದಲ್ಲಿ ಕೃಷ್ಣ ನಮಗೆ ಕೊಟ್ಟ ಕೊನೆಯ ಭರವಸೆ.

1 Comment

  1. ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಅದ್ಭುತ ಸಂದೇಶ

Leave a Reply