ಮನುಷ್ಯ ತನ್ನ ಆತ್ಮ ಸುಖವ ಮರೆತು ಇಂದ್ರಿಯ ಸುಖಕ್ಕೆ ಬಲಿಯಾಗಿ, ಜೀವನವೆಂಬ ಪಯಣದಲ್ಲಿ ಬಂಡಿಯಂತಿರುವ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಈ ವಚನದ ಸಾರಾಂಶ.
ಕಾಲುಗಳೆರಡು ಗಾಲಿ ಕಂಡಯ್ಯಾ
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ
ಬಂಡಿಯ ಹೊಡೆವವರ್ಯೆವರು ಮಾನಿಸರು
ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ
ಅದರಿಚ್ಚೆಯನರಿದು ಹೊಡೆಯದಿರ್ದಡೆ
ಅದರಚ್ಚು ಮುರಿದಿತ್ತು ಗುಹೇಶ್ವರಾ || ಅಲ್ಲಮಪ್ರಭು ||
ಈ ವಚನದಲ್ಲಿ ಅಲ್ಲಮಪ್ರಭು ದೇಹವನ್ನು ಬಂಡಿಗೆ ಹೋಲಿಸುತ್ತಾ ಕಾಲುಗಳನ್ನು ಬಂಡಿಯ ಗಾಲಿ ಎಂದು ಬಣ್ಣಿಸಿದ್ದಾರೆ. ಮನುಷ್ಯನ ದೇಹ ಆತ್ಮ ಮತ್ತು ಮನಸ್ಸಿನ ಸಂಬಂಧಗಳು ಎಷ್ಟು ಚಂಚಲ ಮತ್ತು ಹೊಂದಾಣಿಕೆ ಇಲ್ಲದಂತಾಗಿದೆ ಎಂದು ಈ ವಚನದಲ್ಲಿ ಹೇಳಲಾಗಿದೆ. ಮನುಷ್ಯ ತನ್ನ ಆತ್ಮ ಸುಖವ ಮರೆತು ಇಂದ್ರಿಯ ಸುಖಕ್ಕೆ ಬಲಿಯಾಗಿ, ಜೀವನವೆಂಬ ಪಯಣದಲ್ಲಿ ಬಂಡಿಯಂತಿರುವ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಈ ವಚನದ ಸಾರಾಂಶ.
ದೇಹವೆಂಬ ಬಂಡಿಗೆ ಆತ್ಮ ಯಜಮಾನನಾದರೆ ಅದನ್ನು ಹೊಡೆಯುವವರು ಐದು ಜನ ಮಾನಿಸರು, ಅಂದರೆ ಪಂಚೇಂದ್ರಿಯಗಳು..ಈ ಐದು ಇಂದ್ರಿಯಗಳಲ್ಲಿ ಒಂದಕ್ಕೆ ಒಂದು ಹೊಂದಾಣಿಕೆ ಇಲ್ಲ, ಎಲ್ಲವೂ ತಮ್ಮ ತಮ್ಮ ಪಥದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತವೆ, ತಮ್ಮ ಇಷ್ಟದ ಸುಖಗಳನ್ನು ಅನುಭವಿಸಲು ಪ್ರಯತ್ನಿಸುತ್ತವೆ. ಆತ್ಮದ ಇಚ್ಛೆಯನ್ನು ಅರಿಯದೆ (ಅದರಿಚ್ಚೆಯನರಿದು ಹೊಡೆಯದಿರ್ದಡೆ) ಈ ಇಂದ್ರಿಯಗಳು ಮುನ್ನಡೆಯುತ್ತಿವೆ, ಈ ಜಗ್ಗಾಟದಲ್ಲಿ ಬಂಡಿಯ ಆಧಾರವಾದ ಆಚ್ಚು ಕಳಚಿ ಬೀಳುತ್ತದೆ ಎಂದು ಅಲ್ಲಮಪ್ರಭು ಹೇಳುತ್ತಿದ್ದಾರೆ.