ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವಿಜೃಂಭಣೆಯ ಆಚರಣೆಯಲ್ಲ, ಲಕ್ಷ್ಯಪೂರ್ಣ ಧ್ಯಾನ ಮತ್ತು ಪ್ರಯತ್ನ ಮುಖ್ಯ ಎಂಬುದು ಆಕೆಯ ಹೆಸರಲ್ಲೇ ಇದೆ. ಇಂದಿನ ಪೂಜೆ ಆ ನಿಟ್ಟಿನಲ್ಲಿ ನಡೆದರೆ, ನಮ್ಮ ನಮ್ಮ ಪಾಲಿನ ಸಂಪತ್ತು ನಮಗೆ ಅಗತ್ಯವಾಗಿ ದೊರೆಯುವುದು.
|| ಭದ್ರೈಷಾಮ್ ಲಕ್ಷ್ಮೀರ್ನಿಹಿತಾಧಿ ವಾಚೀ || ಋಗ್ವೇದ 10:71:2
“ಲಕ್ಷ್ಮಿಯ ವಾಕ್ಕಿನಲ್ಲೇ ಒಳಿತು ಬೆಸೆದುಕೊಂಡಿದೆ”
ಲಕ್ಷ್ಮಿ ಸ್ವಯಂ ಅದೃಷ್ಟ. ವೇದಗಳಲ್ಲಿ ಲಕ್ಷ್ಮಿಯನ್ನು ‘ಭದ್ರೆ’ – ಅಂದರೆ ಮಂಗಳಕರಳು, ಒಳಿತನ್ನೇ ತರುವವಳು ಎಂದು ಬಣ್ಣಿಸಲಾಗಿದೆ.
ವೇದಗಳು ಸಂಪತ್ತು ಅಥವಾ ವೈಭವದೊಂದಿಗೆ ಲಕ್ಷ್ಮಿಯನ್ನು ಗುರುತಿಸುವುದಿಲ್ಲ.
ಲಕ್ಷ್ಮಿ ಎಂಬ ಪದಮೂಲವೂ ಲಕ್ಷ್ಮಿಯನ್ನು ಧನ ಸಂಪತ್ತಿನೊಡನೆ ಗುರುತಿಸುವುದಿಲ್ಲ. ಲಕ್ಷ್ಮಿ ಪದವು ‘ಲಕ್ಷ್’ ಅಥವಾ ‘ಲಕ್ಷ್ಯ್’ ಮೂಲದಿಂದ ಬಂದಿದೆ. ಯಾರು ಲಕ್ಷ್ಯವಿಟ್ಟು ಧ್ಯಾನಿಸುತ್ತಾರೋ, ಪ್ರಯತ್ನ ಮಾಡುತ್ತಾರೋ ಅವರಿಗೆ ಮಂಗಳವನ್ನು ಉಂಟು ಮಾಡುವ ದೇವತೆಯೇ ‘ಲಕ್ಷ್ಮೀ’.
ಆದ್ದರಿಂದ ಲಕ್ಷ್ಮಿಯನ್ನು ಈ ಬಗೆಯಲ್ಲೂ ಅರ್ಥ ಮಾಡಿಕೊಳ್ಳಬಹುದು :
ಮಾಂಗಲ್ಯ ಅಥವಾ ಕಲ್ಯಾಣವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಕೆಲವರಿಗೆ ಸಂಪತ್ತು ಕಲ್ಯಾಣಕರವೆನಿಸಿದರೆ, ಕೆಲವರಿಗೆ ವಿದ್ಯೆ ಕಲ್ಯಾಣಕಾರಿ. ಮತ್ತೆ ಕೆಲವರಿಗೆ ರಾಜಕಾರಣ ಮಂಗಳವನ್ನುಂಟುಮಾಡಿದರೆ, ಮತ್ತೆ ಕೆಲವರಿಗೆ ಕಲೆಗಳನ್ನು ಕರಗತ ಮಾಡಿಕೊಳ್ಳುವುದು ಮಂಗಳ ತರುತ್ತದೆ. ಆದ್ದರಿಂದ, ‘ಲಕ್ಷ್ಯವಿಟ್ಟು’ ಕಮಲ ಸಂಜಾತೆಯನ್ನು ಧ್ಯಾನಿಸಿದರೆ, ಆಕೆ ನಾವು ಬಯಸಿದ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಇದೆ.
ಶ್ರಾವಣ ಮಾಸದ ಶುಕ್ರವಾರ ಲಕ್ಷ್ಮಿ ವರದ ಹಸ್ತಳಾಗಿ ಶ್ರದ್ಧಾವಂತರನ್ನು ಹರಸುತ್ತಾಳೆ ಎಂಬುದು ಪ್ರತೀತಿ. ಆದ್ದರಿಂದಲೇ ಇಂದು ವರಮಹಾ ಲಕ್ಷ್ಮಿ ಪೂಜೆಯನ್ನು ಆಚರಿಸಲಾಗುತ್ತದೆ.
ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವಿಜೃಂಭಣೆಯ ಆಚರಣೆಯಲ್ಲ, ಲಕ್ಷ್ಯಪೂರ್ಣ ಧ್ಯಾನ ಮತ್ತು ಪ್ರಯತ್ನ ಮುಖ್ಯ ಎಂಬುದು ಆಕೆಯ ಹೆಸರಲ್ಲೇ ಇದೆ.
ಇಂದಿನ ಪೂಜೆ ಆ ನಿಟ್ಟಿನಲ್ಲಿ ನಡೆದರೆ, ನಮ್ಮ ನಮ್ಮ ಪಾಲಿನ ಸಂಪತ್ತು ನಮಗೆ ಅಗತ್ಯವಾಗಿ ದೊರೆಯುವುದು.
ಸಂಪತ್ತಿನ ಈ ಆದಿ ಶಕ್ತಿಯನ್ನು ಪರಿಚಯಿಸುವ 6 ಚಿತ್ರಿಕೆಗಳು ಇಲ್ಲಿವೆ…