ಶಾರದಾ ದೇವಿಯವರ ಅಧ್ಯಾತ್ಮ ವೈಯಕ್ತಿಕ ಸಾಧನೆಗೆ ಸೀಮಿತವಾಗಿದ್ದಲ್ಲ. ಅದು ಸಕಲರನ್ನೂ ಒಳಗೊಳ್ಳುವಂಥದ್ದು. ಶಾರದಾ ದೇವಿಯವರು ಬಯಸಿದ್ದು ಕೇವಲ ತಮ್ಮ ಮುಕ್ತಿಯನ್ನಲ್ಲ, ಒಟ್ಟು ಸಮಾಜದ ಮುಕ್ತಿಯನ್ನು. ಸಮಾಜದ ಪ್ರತಿಯೊಬ್ಬರ ಬದುಕಿನ ಸ್ವಾತಂತ್ರ್ಯವನ್ನು… ~ ಚೇತನಾ ತೀರ್ಥಹಳ್ಳಿ
ಆಧುನಿಕ ಭಾರತದಲ್ಲಿ ಆಧ್ಯಾತ್ಮವಾದಿ ಮಹಿಳೆಯರ ಹೆಸರು ಕಾಣಿಸುವುದು ಬೆರಳೆಣಿಕೆಯಷ್ಟು. ಅಂಥ ಮಹಿಳೆಯರು ಇರಲಿಲ್ಲವೆಂದಲ್ಲ, ಅಂಥವರಿಗೆ ಮನ್ನಣೆಯಲ್ಲಾಗಲೀ ಸುದ್ದಿಯಲ್ಲಾಗಲೀ ಪ್ರಾಶಸ್ತ್ಯ ಸಿಗದೆ ಎಲೆಮರೆಯ ಕಾಯಾಗಿ ಉಳಿದುಹೋದರು. ಇಂಥ ಪರಿಸ್ಥಿತಿಯಲ್ಲೂ ತಮ್ಮ ಅಂತಃಕರಣದ ಪ್ರಕಾಶ ಬೀರಿ ಕಂಗೊಳಿಸಿದವರಲ್ಲಿ ಶ್ರೀಮಾತೆ ಶಾರದಾ ದೇವಿ ಪ್ರಮುಖರು.
ಶಾರದಾ ದೇವಿ, 19ನೇ ಶತಮಾನದಲ್ಲಿ, ಬಂಗಾಳದಲ್ಲಿ ಆಗಿಹೋದ ಸುಪ್ರಸಿದ್ಧ ಸಂತ ರಾಮಕೃಷ್ಣ ಪರಮಹಂಸರ ಪತ್ನಿ. ಆದರೆ ಅವರ ಗುರುತು ಅಷ್ಟಕ್ಕೆ ಸೀಮಿತವಲ್ಲ. ಶಾರದಾ ದೇವಿ ಸ್ವತಃ ಅಧ್ಯಾತ್ಮ ಸಾಧಕಿ. ತಮ್ಮದೇ ಆದ ಶಿಷ್ಯ ಬಳಗವನ್ನೂ ಹೊಂದಿದ್ದವರು. ಪರಮಹಂಸರ ವಿಚಾರಧಾರೆಯನ್ನು ಅಕ್ಷರಶಃ ಕಾರ್ಯರೂಪಕ್ಕಿಳಿಸಿದವರು.
ಶಾರದಾ ದೇವಿಯವರ ಅಧ್ಯಾತ್ಮ ವೈಯಕ್ತಿಕ ಸಾಧನೆಗೆ ಸೀಮಿತವಾಗಿದ್ದಲ್ಲ. ಅದು ಸಕಲರನ್ನೂ ಒಳಗೊಳ್ಳುವಂಥದ್ದು. ಶಾರದಾ ದೇವಿಯವರು ಬಯಸಿದ್ದು ಕೇವಲ ತಮ್ಮ ಮುಕ್ತಿಯನ್ನಲ್ಲ, ಒಟ್ಟು ಸಮಾಜದ ಮುಕ್ತಿಯನ್ನು. ಸಮಾಜದ ಪ್ರತಿಯೊಬ್ಬರ ಬದುಕಿನ ಸ್ವಾತಂತ್ರ್ಯವನ್ನು.
ಶಾರದಾ ದೇವಿಯರ ಈ ಚಿಂತನೆಯನ್ನು ಅವರ ಬಾಲ್ಯ ಕಾಲದಿಂದಲೇ ನೋಡಬಹುದಾಗಿತ್ತು. ಬಂಗಾಳದಲ್ಲಿ ಬರಬಿದ್ದ ಕಾಲದಲ್ಲಿ ನಾಲ್ಕೈದು ವರ್ಷದ ಪುಟ್ಟ ಶಾರದೆ ತನ್ನ ಮನೆಗೆ ಹಸಿದು ಬಂದವರನ್ನು ಕುಳ್ಳಿರಿಸಿ ಊಟ ಬಡಿಸುತ್ತಿದ್ದಳಂತೆ. ಅವರ ಊಟ ಮುಗಿಯುವವರೆಗೂ ಪಕ್ಕದಲ್ಲಿ ಕುಳಿತು ಬೀಸಣಿಗೆ ಗಾಳಿ ಬೀಸುತ್ತಿದ್ದಳಂತೆ.
ಮುಂದಿನ ದಿನಗಳಲ್ಲಿ ಅದನ್ನು ನೆನೆಯುತ್ತಾ, “ಯಾರಿಗಾದರೂ ನಾವು ಉಣಬಡಿಸುವಾಗ ಅವರಿಗೇನೋ ಉಪಕಾರ ಮಾಡುತ್ತಿದ್ದೇವೆ ಅನ್ನುವ ಭಾವನೆ ಇರಬಾರದು. ಉಣ್ಣುವವರು ದೀನರಾಗಿ ಕಾಣುವಂತೆ ನಾವು ವರ್ತಿಸಬಾರದು. ಅವರು ನಮ್ಮ ಸತ್ಕಾರ ಸ್ವೀಕರಿಸಿ ನಮ್ಮನ್ನು ಉಪಕೃತರಾಗಿಸಿದ್ದಾರೆ ಎಂದೇ ತಿಳಿಯಬೇಕು” ಅನ್ನುತ್ತಿದ್ದರು.
ಇದು ಶಾರದಾ ದೇವಿಯವರ ಜೀವನ ದೃಷ್ಟಿಕೋನ.
ನಾವು ಪ್ರತಿಯೊಬ್ಬರೂ ಮತ್ತೊಬ್ಬರೊಡನೆ ಹಂಚಿಕೊಳುವಂಥ ಏನಾದರೊಂದನ್ನು ಹೊತ್ತು ಬಂದಿರುತ್ತೇವೆ. ಕೆಲವರು ಹಣ, ಕೆಲಬರು ಅಧಿಕಾರ, ಕೆಲವರು ಜ್ಞಾನ ಇತ್ಯಾದಿ. ನಮ್ಮಲ್ಲಿರುವುದನ್ನು ಮತ್ತೊಬ್ಬರಿಗೆ ಕೊಟ್ಟರೆ ನಮಗೇನೂ ಕೊರತೆಯಾಗುವುದಿಲ್ಲ. ಕೊಡುವುದರಿಂದ ನಮ್ಮಲ್ಲಿರುವ ಸಂಪತ್ತು ಸಾರ್ಥಕಗೊಳ್ಳುತ್ತದೆ.
ಈ ಚಿಂತನೆಯನ್ನು ಶಾರದಾ ದೇವಿಯವರು ಕೇವಲ ಬಾಯಿ ಮಾತಲ್ಲಿ ಬಿತ್ತರಿಸಲಿಲ್ಲ, ಸ್ವತಃ ಬದುಕಿ ತೋರಿಸಿದರು. ಕಾಲು ಚಾಚಿ ಮಲಗಲಿಕ್ಕೂ ಸಾಧ್ಯವಾಗದಷ್ಟು ಚಿಕ್ಕ ನಹಬತ್ ಖಾನೆಯಲ್ಲಿ ವಾಸಿಸುತ್ತ, ಪರಮಹಂಸರ ಭೇಟಿಗೆ ಬಂದವರಿಗೆಲ್ಲ ಅಡುಗೆ ಮಾಡಿ ಉಣಬಡಿಸುತ್ತ, ಮಹಿಳಾ ಭಕ್ತೆಯರಿಗೆ ತಮ್ಮ ಕೋಣೆಯಲ್ಲೇ ಜಾಗ ಕೊಟ್ಟು ವಿರಮಿಸಲು ಅನುಕೂಲ ಕಲ್ಪಿಸುತ್ತ ತಮ್ಮ ಔದಾರ್ಯವನ್ನು ಜಾಹೀರು ಮಾಡಿದರು.
~
ಪರಮಹಂಸರು ಕಾಲವಾದ ನಂತರ ಸ್ವಲ್ಪ ಕಾಲ ಹಳ್ಳಿಗೆ ಹೋಗಿ ನೆಲೆಸಿದ್ದ ಶಾರದಾ ದೇವಿ ನಡೆಸಿದ ಜೀವನ ಎಂಥವರಿಗೂ ಮಾದರಿಯಾಗುವಂಥದ್ದು. ಒಂದು ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಅವರು, ಹಿತ್ತಲಲ್ಲಿ ಸೊಪ್ಪು ಬೆಳೆದುಕೊಂಡಿದ್ದರು. ದಿನಕ್ಕೆ ಒಂದು ಹೊತ್ತು ಆ ಸೊಪ್ಪಿಗೆ ಉಪ್ಪು ಹಾಕಿ ಬೇಯಿಸಿಕೊಂಡು ತಿನ್ನುತ್ತಿದ್ದರು. ಬಾಕಿ ಸಮಯವೆಲ್ಲ ಮನೆಯ ಸುತ್ತಮುತ್ತ ಶುಚಿಯಾಗಿಡುವುದಕ್ಕೆ, ಭೇಟಿಗೆ ಬಂದವರ ಜೊತೆ ಪ್ರೀತಿಯಿಂದ ಮಾತಾಡುವುದಕ್ಕೆ, ಬಹುಪಾಲು ಸಮಯವನ್ನು ಜಪ ಧ್ಯಾನಕ್ಕೆ ವಿನಿಯೋಗಿಸುತ್ತಿದ್ದರು.
ಮನುಷ್ಯರು ವಿನಮ್ರರಾಗಿರಬೇಕು, ಆದರೆ ಯಾವತ್ತೂ ತಮ್ಮ ಸ್ವಾಭಿಮಾನ ಬಿಟ್ಟುಕೊಡಬಾರದು. ನಮ್ಮಲ್ಲಿ ದೈನ್ಯ ಇರಬೇಕು, ಆದರೆ ಅದು ಸ್ವಾನುಕಂಪದ ರೂಪ ತಾಳಬಾರದು ಅನ್ನುವುದು ಶಾರದಾ ದೇವಿಯವರ ಸ್ಪಷ್ಟ ನಿಲುವಾಗಿತ್ತು. ತಮ್ಮ ಜೀವಿತದ ಯಾವ ಘಟ್ಟದಲ್ಲೂ ಅವರು ತಮ್ಮ ಸ್ವಾಭಿಮಾನ ಬಿಡಲಿಲ್ಲ. ಪರಮಹಂಸರ ಶಿಷ್ಯರು ಒತ್ತಾಯ ಮಾಡಿ ಅವರನ್ನು ಕಲ್ಕತ್ತಕ್ಕೆ ಕರೆದುಕೊಂಡು ಹೋದ ಮೇಲೆ ಸುಮ್ಮನೆ ಕುಳಿತುಕೊಂಡು ಉಪಚಾರ ಮಾಡಿಸಿಕೊಳ್ಳಲಿಲ್ಲ. ದಿನವಿಡೀ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡು ತಮ್ಮ ಊಟ – ವಸತಿಯ ಲೆಕ್ಕ ಸರಿದೂಗುವಂತೆ ನೋಡಿಕೊಳ್ಳುತ್ತಿದ್ದರು. ಸ್ವಾಭಿಮಾನ ಕಾಯ್ದುಕೊಳುವ ನಿಟ್ಟಿನಲ್ಲಿ ಸ್ವಾವಲಂಬನೆ ಮೊದಲ ಹೆಜ್ಜೆ ಅನ್ನುವ ಸ್ಪಷ್ಟತೆ ಅವರಿಗಿತ್ತು.
~
ಶಾರದಾ ದೇವಿಯವರು ಬದುಕಿದ್ದ ಕಾಲ, ಭಾರತ ದೇಶವು ಬ್ರಿಟಿಷರ ಅಧೀನದಲ್ಲಿದ್ದ ಕಾಲ. ಸ್ವಾತಂತ್ರ್ಯ ಹೋರಾಟದ ಕಾವಿನ ಜೊತೆಗೇ ಸಾಮಾಜಿಕ ಬದಲಾವಣೆಯ ಗಾಳಿಯೂ ಬೀಸತೊಡಗಿದ್ದ ಕಾಲ. ಶಾರದಾ ದೇವಿಯವರೂ ಬದಲಾವಣೆಯ ಈ ಪರ್ವಕ್ಕೆ ಕೈಜೋಡಿಸಿದ್ದರು. ಹೆಣ್ಣುಮಕ್ಕಳು ಸಮಾಜದಲ್ಲಿ ಬೆರೆಯದೆ ಬದಲಾವಣೆ ಅಸಾಧ್ಯವೆಂದು ಮನಗಂಡಿದ್ದ ಶಾರದಾ ದೇವಿ, ಅದನ್ನು ಸಾಧ್ಯವಾಗಿಸಲು ಎಲ್ಲ ಬಗೆಯ ಪ್ರಯತ್ನ ಮಾಡಿದರು. ಸ್ವತಃ ಓದು ಬರಹ ಕಲಿಯುವ ಆಸಕ್ತಿ ಹೊಂದಿದ್ದ ಶಾರದಾ ದೇವಿಯವರು ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಸ್ವಾಮಿ ವಿವೇಕಾನಂದರೊಡನೆ ಭಾರತಕ್ಕೆ ಬಂದಿದ್ದ ಸೋದರಿ ನಿವೇದಿತಾ, ಮೇಡಮ್ ಮ್ಯಾಕ್ಲಾಯ್ಡ್ ಮೊದಲಾದವರಿಗೆ ಉತ್ಸಾಹ ತುಂಬಿ, ಬಂಗಾಳದಲ್ಲಿ ಹೆಣ್ಣುಮಕ್ಕಳ ಶಾಲೆ ತೆರೆಯಲು ಪ್ರೇರೇಪಿಸಿದರು. ತಾವೇ ಮುಂಚೂಣಿಯಲ್ಲಿ ನಿಂತು ಬಾಲಕಿಯರನ್ನು ಶಾಲೆಗೆ ಕಳಿಸುವಂತೆ ತಮ್ಮ ಭಕ್ತರಿಗೆ ಕರೆ ನೀಡಿದರು.
ಅಂದಿನ ಬಂಗಾಳದ ಪರಿಸ್ಥಿತಿಯಲ್ಲಿ ಶಾರದಾ ದೇವಿಯವರ ಈ ಹೆಜ್ಜೆ ಕ್ರಾಂತಿಕಾರಕವಾಗಿತ್ತೆಂದೇ ಹೇಳಬಹುದು. ಅಲ್ಲಿಯ ಕೆಲವು ಕರ್ಮಠ ಪಂಡಿತರು. “ಆಕೆ ಮೊದಲನೆಯದಾಗಿ ಹೆಣ್ಣು, ಅದರಲ್ಲೂ ವಿಧವೆ, ಜೊತೆಗೆ ಮೇಲ್ಜಾತಿಯವರು. ಅಂಥವರು ಜನಸಾಮಾನ್ಯರೊಡನೆ ಬೆರೆಯುತ್ತಾ, ಅವರ ಮನೆಯ ಹೆಣ್ಣುಮಕ್ಕಳಿಗೆ ಓದುವ ಸಲಹೆ ನೀಡುವುದೆಂದರೆ ಏನು? ಹೆಣ್ಣುಮಕ್ಕಳು ಓದಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವೇ? ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಕಾಲಿಡುವುದು ಧರ್ಮಬಾಹಿರವಲ್ಲವೆ?” ಎಂದೆಲ್ಲ ಪ್ರಶ್ನೆ ಎತ್ತಿದರು. ಇಂಥ ಮಾತಿನ ಚಾಟಿಗಳಿಗೆಲ್ಲ ಶರದಾ ದೇವಿಯವರ ಮೌನವೇ ಉತ್ತರವಾಗಿರುತ್ತಿತ್ತು, ಸೃಷ್ಟಿಯಲ್ಲಿ ಯಾರೂ ಕೆಟ್ಟವರಲ್ಲ. ಪ್ರತಿಯೊಬ್ಬರ ವರ್ತನೆಗೂ ಅವರದೇ ಆದ ಕಾರಣವಿರುತ್ತದೆ ಅನ್ನೋದು ಅವರ ನಂಬಿಕೆಯಾಗಿತ್ತು.
~
ತಾಯ್ತನವೇ ಮೈವೆತ್ತಂತಿದ್ದ ಶಾರದಾ ದೇವಿಯವರಿಗೆ ಪ್ರತಿಯೊಬ್ಬರ ಭಾವನೆಯೂ ಅರ್ಥವಾಗುತ್ತಿತ್ತು. ಆದ್ದರಿಂದಲೇ ಅವರು ಎಲ್ಲರ ಜೊತೆಗೂ ಸಮಾಧಾನದಿಂದ, ನಗುಮೊಗದಿಂದ ವ್ಯವಹರಿಸುತ್ತಿದ್ದರು. ಅವರು ಸಿಡುಕಿದ್ದಾಗಲೀ ಗಟ್ಟಿ ದನಿಯಲ್ಲಿ ಮಾತಾಡಿದ್ದೇ ಇಲ್ಲ ಅನ್ನುವ ಜೀವನಗಂಗಾ, ಒಂದು ಅಪರೂಪದ ಪ್ರಕರಣ ದಾಖಲಿಸುತ್ತದೆ.
ಶಾರದಾ ದೇವಿಯವರು ಶಿಷ್ಯರ ಒತ್ತಾಯದ ಮೇರೆಗೆ ಕಲ್ಕತ್ತದ ಭಾಗ್ ಬಜಾರಿನ ಮನೆಯಲ್ಲಿದ್ದ ಸಂದರ್ಭ. ಮನೆಯ ಹಿಂಭಾಗದ ಕೊಳಗೇರಿಯಲ್ಲಿ ಕುಡಿದು ಮತ್ತನಾದ ಗಂಡನೊಬ್ಬ ಹೆಂಡತಿಯನ್ನು ಬೈಯುತ್ತಾ ಬಡಿಯುತ್ತಿದ್ದನಂತೆ. ಈ ಗದ್ದಲ ಕೇಳುತ್ತಲೇ ಮಾಳಿಗೆಗೆ ಹೋಗಿ ನಿಂತ ಶಾರದಾ ದೇವಿಯವರು “ಈ ದುಷ್ಟತನ ನಿಲ್ಲಿಸು” ಎಂದು ಅಬ್ಬರಿಸಿದರಂತೆ. ಆತ ಬೆಚ್ಚಿಬಿದ್ದು ಕೂಡಲೇ ತನ್ನ ದೌರ್ಜನ್ಯ ನಿಲ್ಲಿಸಿಬಿಟ್ಟನಂತೆ.
ಇದು ಶಾರದಾ ದೇವಿಯವರ ಸಾಮರ್ಥ್ಯ. ಇದು ಶಾಂತ ಕಡಲಿನ ಭೋರ್ಗರೆತದ ಶಕ್ತಿ.

