ಮೈಂಡ್, ಪಾಸಿಟಿವ್ ನಿಂದ ನಗೆಟಿವ್ ಗೆ ಬದಲಾಗುತ್ತ ಹೋಗುತ್ತದೆ, ಮತ್ತೆ ನೆಗೆಟಿವ್ ನಿಂದ ಪಾಸಿಟಿವ್ ಗೆ. ಮೈಂಡ್ ಗೆ ಆ ಎರಡು ಧ್ರುವಗಳು, ಇಲೆಕ್ಟ್ರಿಸಿಟಿಗೆ ಇರುವ ಪಾಸಿಟಿವ್ ಮತ್ತು ನಗೆಟಿವ್ ಪೋಲ್ ಗಳಷ್ಟೇ ಮೂಲಭೂತ. ಒಂದೇ ಒಂದು ಪೋಲ್ ನಿಂದ ವಿದ್ಯುತ್ ಪ್ರಸರಣ ಸಾಧ್ಯವಿಲ್ಲ ಹಾಗೆಯೇ ಮೈಂಡ್ ನ ಕ್ರಿಯಾಶೀಲತೆಗೆ ಎರಡು ಧ್ರುವಗಳು ಅವಶ್ಯಕ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಆಳದಲ್ಲಿ, ಮೈಂಡ್ ವಿದ್ಯುತ್ತಿನ ಹಾಗೆ. ಹಾಗಾಗಿಯೇ ಕಂಪ್ಯೂಟರ್ ತನ್ನ ಕೆಲಸ ಮಾಡಲು ಸಾಧ್ಯವಾಗಿರುವುದು, ಕೆಲವೊಮ್ಮೆ ಹ್ಯೂಮನ್ ಮೈಂಡ್ ಗಿಂತಲೂ ಅತ್ಯುತ್ತಮವಾಗಿ. ಮೈಂಡ್, ಒಂದು ಜೈವಿಕ ಕಂಪ್ಯೂಟರ್ ನಂತೆ. ಎರಡು ಧ್ರುವಗಳಿರುವ ಕಾರಣವಾಗಿಯೇ ಚಲನಶೀಲತೆ ಸಾಧ್ಯ.
ಆದ್ದರಿಂದ ಕೆಲವೊಮ್ಮೆ ನೀವು ಮಾಂತ್ರಿಕ ಕ್ಷಣಗಳನ್ನು ಅನುಭವಿಸುವುದು ಮತ್ತು ಕೆಲವೊಮ್ಮೆ ಕರಾಳ ಕ್ಷಣಗಳನ್ನು ಅನುಭವಿಸುವುದು ಸಮಸ್ಯೆ ಅಲ್ಲ. ಕರಾಳ ಕ್ಷಣಗಳ ಅಂಧಕಾರ, ಮಾಂತ್ರಿಕ ಕ್ಷಣಗಳ ಮಾಂತ್ರಿಕತೆಯ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ ( proportionate). ಪಾಸಿಟಿವಿಟಿಯಲ್ಲಿ ನೀವು ಉನ್ನತ ಶಿಖರಗಳನ್ನು ತಲುಪಿದಿರಾದರೆ, ನೆಗೆಟಿವಿಟಿಯಲ್ಲಿ ನೀವು ಅಷ್ಟೇ ಆಳದ ಪಾತಾಳವನ್ನು ತಲುಪುವಿರಿ. ಪಾಸಿಟಿವಿಟಿಯ ಶಿಖರ ಎಷ್ಟು ಎತ್ತರವಾಗಿರುತ್ತದೆಯೋ ನೆಗೆಟಿವಿಟಿಯ ಆಳ ಅಷ್ಟೇ ಡೀಪ್ ಆಗಿರುತ್ತದೆ. ಆದ್ದರಿಂದ ನೀವು ಎಷ್ಟು ಎತ್ತರವನ್ನು ತಲುಪುವಿರೋ ಅಷ್ಟೇ ಆಳದ ಪಾತಾಳವನ್ನು ಮುಟ್ಟಬೇಕಾಗುತ್ತದೆ.
ಇದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು : ನೀವು ಪಾತಾಳದ ಆಳವನ್ನು ತಲುಪಲು ಇಚ್ಛಿಸುವುದಿಲ್ಲವಾದರೆ, ನಿಮಗೆ ಎತ್ತರದ ಶಿಖರಗಳೂ ಸಾಧ್ಯವಾಗುವುದಿಲ್ಲ. ಆಗ ನೀವು ಸಮತಟ್ಟಾದ ಜಾಗದ ಮೇಲೆ ಪ್ರಯಾಣ ಮಾಡುವಿರಿ. ಇದನ್ನೇ ಬಹುತೇಕರು ಮಾಡಲು ಪ್ರಯತ್ನಿಸುತ್ತಿರುವುದು ; ಪಾತಾಳದ ಆಳದ ಬಗ್ಗೆ ಅವರಿಗಿರುವ ಭಯ, ಅವರನ್ನು ಎತ್ತರದ ಶಿಖರಗಳಿಂದಲೂ ವಿಮುಖವಾಗಿಸಿದೆ. ಇಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಬಹಳ ಅವಶ್ಯಕ. ಎತ್ತರದ ಶಿಖರ ತಲುಪಲು ಬೇಕಾಗಿರುವುದನ್ನ ನಿಮ್ಮ ಪಾತಾಳದ ಆಳ ಒದಗಿಸಬೇಕಾಗಿದೆ. But it is worth. ಎತ್ತರದ ಒಂದೇ ಒಂದು ಕ್ಷಣ, ಆ ಮಾಂತ್ರಿಕತೆಯ ಕ್ಷಣಕ್ಕಾಗಿ ನೀವು ಇಡೀ ಬದುಕನ್ನು ಕರಾಳ ಆಳದಲ್ಲಿ ಕಳೆಯಲು ಸಿದ್ಧರಾಗಬಹುದು. ಒಂದು ಕ್ಷಣದ ಸ್ವರ್ಗದ ಗಳಿಗೆಗಾಗಿ, ಶಾಶ್ವತವಾಗಿ ನರಕದಲ್ಲಿ ಬದುಕಲು ಒಪ್ಪಿಕೊಳ್ಳಬಹುದು. ಮತ್ತು ಇದು ಯಾವಾಗಲೂ proportionate ಆಗಿರುತ್ತದೆ, ಅರ್ಧ-ಅರ್ಧ, ಫಿಫ್ಟಿ – ಫಿಫ್ಟಿ.
ಒಂದು ದಿನ ಪರ ಊರಿನಿಂದ ಬಂದಿದ್ದ ಒಬ್ಬ ಮನುಷ್ಯ ನಸ್ರುದ್ದೀನ್ ಜೊತೆ ಮಾತನಾಡುತ್ತಿದ್ದ,
“ ನಾನು ದೊಡ್ಡ ಶ್ರೀಮಂತ ಆದರೆ ತುಂಬ ದುಃಖ ಮತ್ತು ಶೋಚನೀಯ ಪರಿಸ್ಥಿತಿಯಲ್ಲಿರುವ ಮನುಷ್ಯ. ಈ ಹಣ ಹಿಡಿದುಕೊಂಡು ಸುಖ ಮತ್ತು ಸಂತೋಷ ಹುಡುಕುತ್ತಾ ಊರೂರು ಅಲೆಯುತ್ತಿದ್ದೇನೆ ಆದರೆ ಯಾವ ಪ್ರಯೋಜನವೂ ಆಗಿಲ್ಲ. “
ಆ ಮನುಷ್ಯ ಇನ್ನೂ ಮಾತು ಮುಗಿಸಿರಲಿಲ್ಲ, ನಸ್ರುದ್ದೀನ್ ಆ ಮನುಷ್ಯನ ಕೈಯ್ಯಲಿದ್ದ ಹಣದ ಗಂಟು ಕಸಿದುಕೊಂಡು ಓಡತೊಡಗಿದ. ಆ ಮನುಷ್ಯ, ನಸ್ರುದ್ದೀನ್ ನ ಹಿಂದೆ ಕಳ್ಳ ಕಳ್ಳ ಎಂದು ಕೂಗುತ್ತ ಬೆನ್ನುಹತ್ತಿದ.
ಸ್ವಲ್ಪ ದೂರ ಹೋದ ಮೇಲೆ ನಸ್ರುದ್ದೀನ್ ಹಣದ ಗಂಟನ್ನು ರಸ್ತೆಯ ಮೇಲೆ ಎಸೆದು, ಅಲ್ಲಿಯೇ ಮರದ ಹಿಂದೆ ಅಡಗಿಕೊಂಡು ಆ ಮನುಷ್ಯನನ್ನು ಗಮನಿಸತೊಡಗಿದ.
ರಸ್ತೆಗುಂಟ ಓಡಿಬಂದ ಮನುಷ್ಯ, ರಸ್ತೆಯ ಮೇಲೆ ಅನಾಥವಾಗಿ ಬಿದ್ದಿದ್ದ ಹಣದ ಗಂಟು ಕಂಡು ಸಂತೋಷಭರಿತನಾದ. ಅವನ ಕಣ್ಣುಗಳಿಂದ ಆನಂದಭಾಷ್ಪ ಹರಿಯತೊಡಗಿತ್ತು. ಹಣದ ಗಂಟು ಸಿಕ್ಕ ಖುಶಿಯಲ್ಲಿ ಆ ಮನುಷ್ಯ ಸಂತೋಷದಿಂದ ಕುಣಿಯತೊಡಗಿದ.
ಇದನ್ನೆಲ್ಲ ಅಡಗಿಕೊಂಡು ನೋಡುತ್ತಿದ್ದ ನಸ್ರುದ್ದೀನ್ ಮನಸ್ಸಿನಲ್ಲೇ ಅಂದುಕೊಂಡ,
“ ಮನುಷ್ಯನ ದುಃಖವನ್ನು ನೀಗಿಸಲು ಇದೂ ಒಂದು ವಿಧಾನ “

