ಹೆಚ್ಚು ಹೆಚ್ಚು ತುಂಬು ಬೆಳಕನ್ನು ಫೀಲ್ ಮಾಡಿಕೊಳ್ಳಿ.
ಮೂಲ ಸ್ರೋತಕ್ಕೆ ಹತ್ತಿರವಾಗಲು ಇದು ಒಂದು ವಿಧಾನ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕರಗೇನಿ ಸಾಗರದಾಗ
ಉಪ್ಪಿನ್ಹಾಂಗ,
ಇಲ್ಲ ಸಂಶಯಾ, ಇಲ್ಲ ನಿಂದನಾ
ನಕ್ಷತ್ರ ಹುಟ್ಟೇದ ಎದಿಯೊಳಗ
ಅಹಾ ಸ್ಪೋಟಾ ! ಎಂಥಾ ಸೂತ್ರಾ !
ಒಂದಾಗೇದ ಬೆಳಕು
ಏಳು ಅಕಾಶದಾಳ ದಾಳ ದೊಳಗ.
– ರೂಮಿ.
ಹೆಚ್ಚು ಹೆಚ್ಚು ತುಂಬು ಬೆಳಕನ್ನು ಫೀಲ್ ಮಾಡಿಕೊಳ್ಳಿ. ಯಾವಾಗ ನೀವು ಕಣ್ಣು ಮುಚ್ಚಿಕೊಂಡರೂ, ಬೆಳಕು ಸುಮ್ಮನೇ ನಿಮ್ಮ ಇರುವಿಕೆಯನ್ನು ಆವರಿಸಿಕೊಳ್ಳುತ್ತಿರುವಂತೆ ಗಮನಿಸಿ. ಮೊದಮೂದಲು ಇದು ಒಂದು ಕಲ್ಪನೆ, ಆದರೆ ಕಲ್ಪನೆ ಬಹಳ ಸೃಜನಶೀಲವಾದದ್ದು.
So, ಸುಮ್ಮನೇ ನಿಮ್ಮ ಹೃದಯದ ಹತ್ತಿರ ಜ್ವಾಲೆಯೊಂದನ್ನು ಕಲ್ಪಿಸಿಕೊಳ್ಳಿ, ಮತ್ತು ಬೆಳಕು ನಿಮ್ಮನ್ನು ಪೂರ್ತಿಯಾಗಿ ಆವರಿಸಿಕೊಂಡಂತೆ ಭಾವಿಸಿ. ಬೆಳಕನ್ನು ಹೆಚ್ಚು ಮಾಡುತ್ತ ಹೋಗಿ. ಆಗ ಅದು ಬಹುತೇಕ ಹೊಳೆಯತೊಡಗುತ್ತದೆ! ಮತ್ತು ಆಗ ನೀವು ಅದನ್ನು ಅನುಭವಿಸಲು ಶುರು ಮಾಡುತ್ತೀರಿ ; ಅಷ್ಟೇ ಅಲ್ಲ ಇತರರು ಅದನ್ನು ಅನುಭವಿಸತೊಡಗುತ್ತಾರೆ. ನೀವು ಅವರಿಗೆ ಹತ್ತಿರವಾಗಿದ್ದಾಗ ಅವರು ಇದನ್ನು ಅನುಭವಿಸುತ್ತಾರೆ, ಏಕೆಂದರೆ ಅದು ಕಂಪಿಸುತ್ತಿರುತ್ತದೆ.
ಇದು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು, ಆದರೆ ಇದನ್ನು ಕ್ಲೇಮ್ ಮಾಡಬೇಕು ಅಷ್ಟೇ. ಇದು ಇನ್ನೂ ಹಕ್ಕುಸ್ವಾಮ್ಯ ಸಾಧಿಸದ ಸಂಪತ್ತು. ಇದನ್ನು ನೀವು ಕ್ಲೇಮ್ ಮಾಡದೇ ಹೋದರೆ, ಅದು ನೆಲದಲ್ಲಿ ಹುಗಿದ ಮೃತ ಸಂಗತಿಯಾಗಿಯೇ ಉಳಿಯುತ್ತದೆ. ಒಮ್ಮೆ ನೀವು ಕ್ಲೇಮ್ ಮಾಡಿದಿರಾದರೆ, ನೀವು ನಿಮ್ಮ ಆಂತರ್ಯದ ಇರುವಿಕೆಯನ್ನು ಕ್ಲೇಮ್ ಮಾಡಿದಂತೆ. ಸುಮ್ಮನೇ ಒಂದು ಸಾಧಾರಣ ದೀಪ ಉರಿಯುತ್ತಿರುವಾಗ , ಈ ಕುರಿತು ನಿಮ್ಮಲ್ಲಿ ಒಂದು ಬೆರಗು, ಒಂದು ಗೌರವ ಇರಲಿ. ರಾತ್ರಿ ಆಕಾಶದಲ್ಲಿ ನಕ್ಷತ್ರಗಳು ಕಾಣಿಸಿಕೊಳ್ಳುತ್ತವೆ – ಸುಮ್ಮನೇ ಅವನ್ನು ಗಮನಿಸುತ್ತ, ಅವುಗಳ ಸಂಪರ್ಕವನ್ನು ಅನುಭವಿಸಿ. ಮುಂಜಾನೆ ಸೂರ್ಯ ಉದಯಿಸುತ್ತಾನೆ – ಸುಮ್ಮನೇ ಅದನ್ನು ಗಮನಿಸಿ, ಜೊತೆ ಜೊತೆಗೆ ನಿಮ್ಮೊಳಗಿನ ಸೂರ್ಯನೂ ಉದಯಿಸಲಿ. ಯಾವಾಗ ದೀಪವನ್ನು ನೋಡಿದರೂ ಕೂಡಲೇ ಅದರ ಜೊತೆ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಿ – ಆದಷ್ಟು ಬೇಗ ಇದು ನಿಮಗೆ ಸಾಧ್ಯವಾಗುತ್ತದೆ.
ಗೀತಾಂಜಲಿ ಯ ಪದ್ಯಗಳ ರಚನೆಯ ಕಾಲದಲ್ಲಿ ಟ್ಯಾಗೋರ್ ರು ಒಂದು ಪುಟ್ಟ ಹೌಸ್ ಬೋಟ್ ನಲ್ಲಿ ದಿನಗಟ್ಟಲೇ ನದಿಯ ಮೇಲೆ ವಾಸ ಮಾಡುತ್ತಿದ್ದರು, ಒಬ್ಬರೇ ದೋಣಿಯಲ್ಲಿ ಪ್ರಯಾಣ ಮಾಡುತ್ತ, ತಮಗೆ ಇಷ್ಟವಾದಲ್ಲಿ ದೋಣಿಯನ್ನ ನಿಲ್ಲಿಸಿ ಪ್ರಕೃತಿಯ ಮಡಿಲಲ್ಲಿ ಕಾವ್ಯವನ್ನು ತಮ್ಮೊಳಗೆ ಆವಾಹಿಸಿಕೊಂಡು ಪದ್ಯ ರಚನೆ ಮಾಡುತ್ತಿದ್ದರು.
ಒಂದು ಹುಣ್ಣಿಮೆ ರಾತ್ರಿ ಟ್ಯಾಗೋರ್ ರು ತಮ್ಮ ಬೋಟ್ ನ ಪುಟ್ಟ ಕೋಣೆಯಲ್ಲಿ ಕುಳಿತು ಕ್ಯಾಂಡಲ್ ಬೆಳಕಲ್ಲಿ ಹುಣ್ಣಿಮೆಯ ಅದ್ಭುತ ಸೌಂದರ್ಯದ ಬಗ್ಗೆ ಪದ್ಯ ರಚನೆ ಮಾಡುತ್ತಿದ್ದರು ಹೊರಗೆ ಚಂದ್ರ ತನ್ನ ಪೂರ್ಣ ಅವತಾರದಲ್ಲಿ ಕಂಗೊಳಿಸುತ್ತಿರುವುದರ ಕಡೆಗೆ ಕೊಂಚವೂ ಗಮನವಿಲ್ಲದೆ. ನದಿಯ ಅತ್ಯಂತ ಸುಂದರ ತಾಣದಲ್ಲಿ ಹೌಸ್ ಬೋಟ್ ನಿಂತಿತ್ತು, ಸುತ್ತ ಮುತ್ತ ಮೈಲುಗಟ್ಟಲೇ ಹಬ್ಬಿಕೊಂಡಿದ್ದ ಸುಶಾಂತ ಮೌನ. ಆಗೊಮ್ಮೆ ಈಗೊಮ್ಮೆ ನದಿಯ ಹರಿವು ಮೌನಕ್ಕೆ ಭಂಗ ತರುತ್ತಿತ್ತಾದರೂ ಈ ಅಡಚಣೆಯ ನಂತರ ಮೌನ ಇನ್ನೂ ಆಳವಾಗಿ ಹರಡಲು ಶುರು ಮಾಡುತ್ತಿತ್ತು.
ರವೀಂದ್ರರಿಗೆ ಈ ಬಗ್ಗೆ ಗಮನವೇ ಇರಲಿಲ್ಲ ; ಕ್ಯಾಂಡಲ್ ನ ಬೆಳಕಲ್ಲಿ ತದೇಕಚಿತ್ತದಿಂದ ಹುಣ್ಣಿಮೆಯ ಅಪ್ರತಿಮ ಚೆಲುವನ್ನ ಕಾಗದದ ಮೇಲೆ ಅನಾವರಣಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ನಟ್ಟ ನಡು ರಾತ್ರಿ ಸುಸ್ತಾದಂತೆ ಅನಿಸಿದಾಗ ಎಲ್ಲ ಎತ್ತಿಟ್ಟು ಕ್ಯಾಂಡಲ್ ದೀಪವನ್ನು ಊದಿ ಆರಿಸಿ ನಿದ್ದೆಗೆ ಜಾರಲು ಸಿದ್ಧರಾದರು. ರವೀಂದ್ರರು ಕ್ಯಾಂಡಲ್ ದೀಪ ಆರಿಸುತ್ತಿದ್ದಂತೆಯೇ, ತಮ್ಮ ಡೈರಿಯಲ್ಲಿ ಟ್ಯಾಗೋರ್ ಇದನ್ನ ದಾಖಲು ಮಾಡುತ್ತಾರೆ “ ಕ್ಯಾಂಡಲ್ ದೀಪ ಆರಿಸುತ್ತಿದ್ದಂತೆಯೇ, ಒಂದು ಜಾದೂ ಸಂಭವಿಸಿತು. ನನಗೆ ದಿಗ್ಭ್ರಮೆಯಾಯಿತು, ಬಿದಿರಿನಿಂದ ನಿರ್ಮಿತವಾದ ಹೌಸ್ ಬೋಟ್ ನ ಎಲ್ಲ ಸಂದುಗಳಿಂದ ಹುಣ್ಣಿಮೆಯ ಚಂದ್ರ ಒಳಗೆ ನುಸುಳಲು ಶುರು ಮಾಡಿದ.
ರವೀಂದ್ರರು ಒಂದು ಕ್ಷಣ ಮೂಕ ವಿಸ್ಮಿತರಾದರು. ಅಷ್ಟು ಆಳವಾದ ಮೌನವನ್ನು ಅವರು ಎಂದೂ ಅನುಭವಿಸಿರಲಿಲ್ಲ. ಹೊರಗೆ ಬಂದು ಆಕಾಶದತ್ತ ಕಣ್ಣು ಹಾಯಿಸಿದ ರವೀಂದ್ರರ ಕಣ್ಣುಗಳಲ್ಲಿ ಕಣ್ಣೀರು ಒಂದೇ ಸವನೇ ಧಾರಾಕಾರವಾಗಿ ಹರಿಯುತ್ತಿತ್ತು. ಪುಟ್ಟ ಮಗುವಿನಂತೆ ರವೀಂದ್ರರು ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು. ಒಳಗೆ ಹೋಗಿ ಈಗ ತಾನೆ ಬರೆದು ಮುಗಿಸಿದ್ದ ಹುಣ್ಣಿಮೆ ಸೌಂದರ್ಯದ ಕುರಿತಾದ ಪದ್ಯವನ್ನು ಹರಿದು ಚೂರು ಚೂರು ಮಾಡಿದರು. ಈ ಘಟನೆಯನ್ನ ರವೀಂದ್ರರು ತಮ್ಮ ಡೈರಿಯಲ್ಲಿ ನಮೂದಿಸುತ್ತಾರೆ, “ ಹುಣ್ಣಿಮೆಯ ಕುರಿತಾದ ನನ್ನ ಪದ್ಯ ಅತ್ಯಂತ ಕಳಪೆಯಾಗಿತ್ತು ; ನಿಜ ಹುಣ್ಣಿಮೆಯ ಸಾವಿರದ ಒಂದು ಪಾಲಿಗೂ ಸಮನಾಗಿರಲಿಲ್ಲ. ನಿಜದ ಹುಣ್ಣಿಮೆ ಹೊರಗೆ ಬಾಗಿಲು ಬಾರಿಸುತ್ತಿದ್ದಾಗ, ನಾನು ಕಲ್ಪನೆಯ ಹುಣ್ಣಿಮೆಯನ್ನು ಪದಗಳಲ್ಲಿ ಹಿಡಿಯಲು ತಿಣುಕಾಡುತ್ತಿದ್ದೆ, ಮೌನದ ಸೌಂದರ್ಯ ದ ಕುರಿತು ಪದ್ಯ ಬರೆಯುತ್ತಿದ್ದೆ ಆದರೆ ಪರಿಪೂರ್ಣ ಮೌನ ನನಗಾಗಿ ಹೊರಗೆ ಕಾಯುತ್ತಿತ್ತು. ಅಂಥ ಬೆಳಕನ್ನ ನಾನು ಹಿಂದೆಂದೂ ಕಂಡಿರಲಿಲ್ಲ ಮತ್ತು ಮುಂದೂ ಕೂಡ ಕಾಣಲು ಸಾಧ್ಯವಾಗಲಿಲ್ಲ. ಅಕಸ್ಮಾತ್ ನಾನೇನಾದರೂ ಕ್ಯಾಂಡಲ್ ಆರಿಸದೇ ನಿದ್ದೆಗೆ ಮೊರೆ ಹೋಗಿ ಬಿಟ್ಟಿದ್ದರೆ ನನ್ನ ಬದುಕಿನ ಅಭೂತಪೂರ್ವ ಕ್ಷಣಗಳಿಗೆ ಎದುರಾಗುವ ಅಪರೂಪದ ಅವಕಾಶವೊಂದನ್ನು ನನಗೇ ಗೊತ್ತಿಲ್ಲದಂತೆ ಕಳೆದುಕೊಂಡು ಬಿಡುತ್ತಿದ್ದೆ. ಆ ಪುಟ್ಟ ಕ್ಯಾಂಡಲ್ ನ ಬೆಳಕು ಇಡೀ ಹುಣ್ಣಿಮೆಯನ್ನು ಒಳಗೆ ಬರದಂತೆ ತಡೆ ಹಿಡಿದಿತ್ತು. “
ಬಹುತೇಕ ಲೇಖಕರ ಪುಸ್ತಕಗಳು ಅನುಭವದ ಮಾಯೆಯಿಂದ ವಂಚಿತವಾದ ಬರಡು ಶಬ್ದಗಳ ನೂಕುನುಗ್ಗಲಿನಿಂದ ಗದ್ದಲಮಯವಾಗಿರುತ್ತೆ.

