ಎಲ್ಲ ಸುಂದರವಾದದ್ದು ಏಕಾಂತದ ಮೂಲಕವೇ ಸಂಭವಿಸುತ್ತದೆ; ಇಂಥ ಗುಂಪಿನ ಗೌಜು ಗದ್ದಲದಲ್ಲಿ ಸಂಭವಿಸುವುದಿಲ್ಲ. ಏಕಾಂತದ ಹೋರತಾಗಿ ಬೇರೆ ಯಾವ ಸ್ಥಿತಿಯಲ್ಲೂ ಮೀರುವಿಕೆ (beyond) ಸಾಧ್ಯವಾಗುವುದಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನನ್ನ ಏಕಾಂತ ಹುಟ್ಟಿದ್ದು
ಜನ, ನನ್ನ ತಪ್ಪು ಮಾತುಗಳನ್ನ
ಹೊಗಳಿದಾಗ ಮತ್ತು ನನ್ನ
ಮೌನದ ಮೌಲ್ಯಗಳನ್ನ
ಪ್ರಶ್ನಿಸಿದಾಗ.
~ ಖಲೀಲ್ ಜಿಬ್ರಾನ್
ಬಹಿರ್ಮುಖಿ ಮೈಂಡ್ ನಮ್ಮ ಸುತ್ತ ಸೃಷ್ಟಿಸಿರುವ ಕಂಡಿಷನಿಂಗ್ ನಮ್ಮೊಳಗೆ ಆಳವಾಗಿ ಬೇರೂರಿಬಿಟ್ಟಿದೆ : ಇದರ ಪ್ರಕಾರ ನೀವು ಒಂಟಿಯಾಗಿರುವಾಗ ಆ ಕುರಿತು ನಿಮಗೆ ಬೇಸರ ಇರುತ್ತದೆ. ಇದು ನಿಮಗೆ ಚಲಿಸಲು, ಜನರನ್ನು ಭೇಟಿ ಮಾಡಲು ಒತ್ತಾಯಿಸುತ್ತದೆ, ಏಕೆಂದರೆ ಅದರ ಪ್ರಕಾರ ಖುಶಿ ಇರುವುದು ಜನರೊಂದಿಗೆ ವ್ಯವಹರಿಸುವುದರಲ್ಲಿ. ಆದರೆ ಇದು ನಿಜ ಅಲ್ಲ, ಜನರ ಜೊತೆ ಇರುವ ಖುಶಿ ಕೇವಲ ತೋರಿಕೆಯದು, ಮತ್ತು ನೀವು ಏಕಾಂಗಿಯಾಗಿದ್ದಾಗ ಸಂಭವಿಸುವ ಖುಶಿ ಬಹಳ ಆಳವಾದದ್ದು. ಆದ್ದರಿಂದ ಈ ಖುಶಿಯೊಳಗೆ ನಿಮ್ಮನ್ನು ತೊಡಗಿಸಿಕೊಳ್ಳಿ.
ಏಕಾಂತ ಸಂಭವಿಸಿದಾಗ ಅದನ್ನು ಖುಶಿಯಿಂದ ಅನುಭವಿಸಿ. ಹಾಡಿರಿ, ಕುಣಿಯಿರಿ ಅಥವಾ ಗೋಡೆಗೆ ಎದುರಾಗಿ ಮೌನದಲ್ಲಿ ಕುಳಿತುಕೊಂಡು ಆಗಲಿರುವುದನ್ನು ಎದುರು ನೋಡಿ. ಆಗ ನಿಮಗೆ ಈ ಏಕಾಂತ ಸಾಧ್ಯ ಮಾಡುವ ವಿಭಿನ್ನ ಕ್ವಾಲಿಟಿಯ ಪರಿಚಯವಾಗುವುದು. ಇದು ಖಂಡಿತ ದುಗುಡದ ಅನುಭವ ಅಲ್ಲ. ಒಮ್ಮೆ ನೀವು ಏಕಾಂತದ ಆಳಕ್ಕಿಳಿದು ಈ ಅನುಭವದ ರುಚಿ ನೋಡಿದಿರಾದರೆ, ಮುಂದೆ ನಿಮಗೆ ಬಾಕಿ ಎಲ್ಲ ಸಂಬಂಧಗಳು ತೋರಿಕೆಯವು ಅನುಸುತ್ತದೆ. ಏಕಾಂತ ತಲುಪಬಹುದಾದ ಆಳವನ್ನು ಪ್ರೇಮ ಕೂಡ ತಲುಪಲಾರದು, ಏಕೆಂದರೆ ಪ್ರೇಮದಲ್ಲಿ ಕೂಡ ಇನ್ನೊಬ್ಬರ ಹಾಜರಾತಿ ಇದೆ. ಮತ್ತು ಇನ್ನೊಬ್ಬರ ಹಾಜರಾತಿ ನಿಮ್ಮನ್ನು ಕೇಂದ್ರದ ಬದಲಿಗೆ ಪರಿಧಿಯತ್ತ ತಳ್ಳುತ್ತದೆ.
ಯಾರೂ ಇಲ್ಲದಿರುವಾಗ, ಯಾರ ಬಗೆಗಿನ ಆಲೋಚನೆಯೂ ನಿಮ್ಮೊಳಗೆ ಇಲ್ಲದಿರುವಾಗ ನೀವು ನಿಜವಾದ ಏಕಾಂತದಲ್ಲಿರುವಿರಿ, ಆಗ ನೀವು sink ಆಗುತ್ತೀರಿ, ನೀವು ನಿಮ್ಮೊಳಗೇ ತೇಲುತ್ತೀರಿ. ಈ ಬಗ್ಗೆ ಗಾಬರಿ ಬೇಡ. ಮೊದಮೊದಲು ಈ ತೇಲುವಿಕೆ ನಿಮಗೆ ಸಾವಿನ ಅನುಭವ ಕೊಡಬಹುದು, ಮತ್ತು ದುಗುಡ ನಿಮ್ಮನ್ನು ಸುತ್ತುವರೆಯುವುದು. ಏಕೆಂದರೆ ನೀವು ಯಾವತ್ತೂ ಖುಶಿಯನ್ನು ಅನುಭವಿಸಿರುವುದು ಜನರೊಂದಿಗೆ, ಸಂಬಂಧಗಳಲ್ಲಿ.
ಕೊಂಚ wait ಮಾಡಿ. ಈ sinking ಆಳವಾಗಿ ನಿಮ್ಮೊಳಗೆ ಇಳಿಯಲಿ. ಆಗ ನಿಮ್ಮೊಳಗೆ ಮೌನ ಹುಟ್ಟಿಕೊಳ್ಳುತ್ತಿರುವುದನ್ನು ನೀವು ಗಮನಿಸುವಿರಿ, ಮತ್ತು ನಿಶ್ಚಲತೆ ಕುಣಿಯುವುದನ್ನು. ಈಗ ಯಾವುದೂ ಚಲಿಸುತ್ತಿಲ್ಲ ಆದರೂ ಎಲ್ಲವೂ ವೇಗದಲ್ಲಿ ಸಂಭವಿಸುತ್ತಿದೆ , ಎಲ್ಲ ಖಾಲೀತನ ತುಂಬಿಕೊಂಡಿದೆ. ದ್ವಂದ್ವಗಳು ಎದುರುಬದಿರಾಗುತ್ತಿವೆ, ವೈರುಧ್ಯಗಳು ಕರಗಿ ಹೋಗುತ್ತಿವೆ.
ತನ್ನ ಗೆಳತಿಯರೆಲ್ಲ ಬಿಟ್ಚು ಹೋದರೆಂದು ನಸ್ರುದ್ದೀನ್ ನ ಹೆಂಡತಿ ಬೇಸರದಲ್ಲಿದ್ದಳು.
“ ನನ್ನ ಮಾತು ಕೇಳು ಒಂದು ತಿಂಗಳು ಏಕಾಂತದಲ್ಲಿರು, ಸ್ವತಃ ನಿನ್ನ ಜೊತೆ ಕಾಲ ಕಳೆ ಆಗ ನಿನ್ನ ಬೇಸರ ಕಡಿಮೆಯಾಗಬಹುದು “
ನಸ್ರುದ್ದೀನ್ ಹೆಂಡತಿಗೆ ಸಲಹೆ ನೀಡಿದ.
“ ಏನು ! ಒಂದು ತಿಂಗಳು ನಾನು ಒಬ್ಬಳೇ ಇರಬೇಕಾ ?
ಸಾಧ್ಯವಿಲ್ಲ ನನಗೆ ಬೋರ್ ಆಗತ್ತೆ “
ನಸ್ರುದ್ದೀನ್ ನ ಹೆಂಡತಿ ಏಕಾಂತವನ್ನು ನಿರಾಕರಿಸಿದಳು.
“ ನೋಡು ನಿನ್ನ ಸಹವಾಸವೇ ನಿನಗೆ ಬೋರ್ ಅನಿಸುವಾಗ, ನಿನ್ನ ಗೆಳತಿಯರಿಗೆ ಹೇಗೆ ನೀನು ಇಂಟರೆಸ್ಟಿಂಗ್ ಆಗಿರುವುದು ಸಾಧ್ಯ? “
ನಸ್ರುದ್ದೀನ್ ಹೆಂಡತಿಗೆ ಅವಳ ಸಮಸ್ಯೆಯ ಕಾರಣ ವಿವರಿಸಿದ.
********************************

