ಮರಳು ಮತ್ತು ನೊರೆ ~ ಖಲೀಲ್ ಗಿಬ್ರಾನ್ : ಕಾವ್ಯ ವಿರಾಮ #3

ಖಲೀಲ್ ಗಿಬ್ರಾನ್’ರ ‘SAND AND FOAM’ ಕೃತಿಯಲ್ಲಿ ಗದ್ಯ – ಪದ್ಯಗಳ ಹದ ಬೆರಕೆಯ ರಚನೆಗಳಿವೆ. ಕಾವ್ಯ, ಅನುಭಾವ, ತಾತ್ತ್ವಿಕತೆಯೇ ಮೊದಲಾದ ಗುಣಗಳು ಮೆಳೈಸಿರುವ ಈ ರಚನೆಗಳನ್ನು ನಿರ್ದಿಷ್ಟವಾಗಿ ಯಾವ ಪ್ರಕಾರಕ್ಕೆ ಸೇರಿಸಬೇಕೆಂಬುದೇ ಗೊಂದಲ. ಈ ರಚನೆಗಳು ಎಲ್ಲ ಕಡೆಗೂ, ಎಲ್ಲ ಕಾಲಕ್ಕೂ ಸಲ್ಲುತ್ತವೆ ಅನ್ನುವುದು ಮಾತ್ರ ನಿರ್ವಿವಾದ. SAND AND FOAM ಕೃತಿಯ ಈ ರಚನೆಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ, ‘ಅರಳಿ ಬಳಗ’ದ ಬರಹಗಾರ ಚಿದಂಬರ ನರೇಂದ್ರ. 

gibran

ವಿದ್ವಾಂಸ ಮತ್ತು ಕವಿಯ ನಡುವೆ ಇದೆ ಫಲವತ್ತಾದ ಭೂಮಿ.
ವಿದ್ವಾಂಸ ದಾಟಿದರೆ, ಅವನು ಬುದ್ಧಿವಂತ;
ಕವಿ ದಾಟಿದರೆ, ಅವನು ಪ್ರವಾದಿ.
~
ಪ್ರತಿ ನಿತ್ಯ ಹೊಸ ಹುಟ್ಟು ಪಡೆಯದ ಪ್ರೀತಿ
ಬರೀ ಹವ್ಯಾಸದಂತೆ,
ಗುಲಾಮಗಿರಿಯಂತೆ.
~
ಪ್ರೀತಿ ಮತ್ತು ಸಂಶಯ
ಯಾವತ್ತೂ
ಪರಸ್ಪರ ಮುಖಕೊಟ್ಟು
ಮಾತನಾಡುವದಿಲ್ಲ.
~
ಭೂಮಿಯ ಮೇಲೆ
ಎಲ್ಲಾದರೂ ಅಗಿಯಿರಿ,
ನಿಮಗೆ ಖಜಾನೆ ಸಿಗುವುದಂತೂ ಖಚಿತ.
ಆದರೆ ನಿಮ್ಮಲ್ಲಿ
ರೈತನ ನಂಬಿಕೆ ಇರಬೇಕು ಮಾತ್ರ.
~
ತ್ಯ ಮತ್ತು ಸೌಂದರ್ಯ ಎರಡು ತತ್ವಗಳು.
ಸೌಂದರ್ಯ ಪ್ರೇಮಿಯ ಎದೆಯಲ್ಲಿದ್ದರೆ,
ಸತ್ಯ ನೆಲ ಉಳುವವನ ರಟ್ಟೆಯಲ್ಲಿದೆ.
~
ಸಾಧಾರಣ ಸೌಂದರ್ಯ
ನನ್ನ ಕಾಡುವುದೇನೋ ನಿಜ,
ಆದರೆ ನನ್ನನ್ನು, ತನ್ನಿಂದಲೂ
ಮುಕ್ತಗೊಳಿಸುವ ಚೆಲುವು
ನನಗೆ ಇನ್ನೂ ಶ್ರೇಷ್ಠ.
~
ಚೆಲುವು ತನ್ನನ್ನು ನೋಡುವವರ ಕಣ್ಗಳಿಗಿಂತ,
ತನಗಾಗಿ ತುಡಿಯುವವರ ಎದೆಯಲ್ಲಿ
ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತದೆ.

(ಮುಂದುವರೆಯುವುದು…..)

ಅನುವಾದಕರ ಟಿಪ್ಪಣಿ :
ಖಲೀಲ್ ಗಿಬ್ರಾನ್ ನ ಆಯ್ದ (ಆಯ್ದ ಎಂದರೆ ತಪ್ಪಾಗಬಹುದು. ನನ್ನನ್ನು ತಾಕಿದ ಎನ್ನಬಹುದೇನೋ) ವಚನಗಳು. ಈ ವಚನಗಳು ನಾನು ಅರ್ಥ ಮಾಡಿಕೊಳ್ಳಲಿಕ್ಕೆ ಕನ್ನಡಿಸಿರುವಂಥವು. ಕೆಲವು ರಚನೆಗಳು ಎಷ್ಟು ಸರಳ ಮತ್ತು ಹೃದ್ಯವಾಗಿವೆಯೆಂದರೆ, ಬೇರೆ ರೀತಿ ಅನುವಾದಿಸಲು ಸಾಧ್ಯವಿಲ್ಲವೇನೋ. ಆದ್ದರಿಂದ ನನ್ನ ಪ್ರಯತ್ನ, ಬೇರೆಯವರ ಪ್ರಯತ್ನ ಕೆಲವೊಮ್ಮೆ ತುಂಬ ಹತ್ತಿರವಾಗಿದೆ. ಆದರೆ ನನ್ನ ಮುಖ್ಯ ಉದ್ದೇಶ ಈ ವಚನಗಳನ್ನ ಅರಿಯುವುದಾಗಿರುವದರಿಂದ ಜಾಸ್ತಿ ಸರ್ಕಸ್ ಮಾಡಲು ಹೋಗಿಲ್ಲ. ಕಾವ್ಯ ಗುಣಗಳಿಂದ ತುಂಬಿ ತುಳುಕುತ್ತಿದ್ದರೂ, ಯಾಕೋ ಗಿಬ್ರಾನ್ ಈ ರಚನೆಗಳನ್ನ ಗದ್ಯ ರೂಪದಲ್ಲಿ, ಹೇಳಿಕೆಗಳ(quotation) ರೂಪದಲ್ಲಿ ಕೊಟ್ಟಿದ್ದಾನೆ. “Obvious becomes obvious when someone says in simple form” ಅಂತಾನೆ ಗಿಬ್ರಾನ್.

3 Comments

  1. ಅರಳಿಮರ ಆಗಾಗ ನೋಡುವೆ. ಪರಿಚಯಿಸಿದವರು ಶಮ ನಂದಿಬೆಟ್ಟ. ಈಸಲದ ಖಲೀಲ್ ಗಿಬ್ರಾನ್ ಕವನಗಳ ಕೆಲವು ಅನುವಾದ ಹಿಡಿಸಿತು!! ಚಿದಂಬರ್ ನರೇಂದ್ರ ಅವರಿಗೆ ನಮನ ಗಳು.

Leave a Reply