ಖಲೀಲ್ ಗಿಬ್ರಾನ್’ರ ‘SAND AND FOAM’ ಕೃತಿಯಲ್ಲಿ ಗದ್ಯ – ಪದ್ಯಗಳ ಹದ ಬೆರಕೆಯ ರಚನೆಗಳಿವೆ. ಕಾವ್ಯ, ಅನುಭಾವ, ತಾತ್ತ್ವಿಕತೆಯೇ ಮೊದಲಾದ ಗುಣಗಳು ಮೆಳೈಸಿರುವ ಈ ರಚನೆಗಳನ್ನು ನಿರ್ದಿಷ್ಟವಾಗಿ ಯಾವ ಪ್ರಕಾರಕ್ಕೆ ಸೇರಿಸಬೇಕೆಂಬುದೇ ಗೊಂದಲ. ಈ ರಚನೆಗಳು ಎಲ್ಲ ಕಡೆಗೂ, ಎಲ್ಲ ಕಾಲಕ್ಕೂ ಸಲ್ಲುತ್ತವೆ ಅನ್ನುವುದು ಮಾತ್ರ ನಿರ್ವಿವಾದ. SAND AND FOAM ಕೃತಿಯ ಈ ರಚನೆಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ, ‘ಅರಳಿ ಬಳಗ’ದ ಬರಹಗಾರ ಚಿದಂಬರ ನರೇಂದ್ರ.
ವಿದ್ವಾಂಸ ಮತ್ತು ಕವಿಯ ನಡುವೆ ಇದೆ ಫಲವತ್ತಾದ ಭೂಮಿ.
ವಿದ್ವಾಂಸ ದಾಟಿದರೆ, ಅವನು ಬುದ್ಧಿವಂತ;
ಕವಿ ದಾಟಿದರೆ, ಅವನು ಪ್ರವಾದಿ.
~
ಪ್ರತಿ ನಿತ್ಯ ಹೊಸ ಹುಟ್ಟು ಪಡೆಯದ ಪ್ರೀತಿ
ಬರೀ ಹವ್ಯಾಸದಂತೆ,
ಗುಲಾಮಗಿರಿಯಂತೆ.
~
ಪ್ರೀತಿ ಮತ್ತು ಸಂಶಯ
ಯಾವತ್ತೂ
ಪರಸ್ಪರ ಮುಖಕೊಟ್ಟು
ಮಾತನಾಡುವದಿಲ್ಲ.
~
ಈ ಭೂಮಿಯ ಮೇಲೆ
ಎಲ್ಲಾದರೂ ಅಗಿಯಿರಿ,
ನಿಮಗೆ ಖಜಾನೆ ಸಿಗುವುದಂತೂ ಖಚಿತ.
ಆದರೆ ನಿಮ್ಮಲ್ಲಿ
ರೈತನ ನಂಬಿಕೆ ಇರಬೇಕು ಮಾತ್ರ.
~
ಸತ್ಯ ಮತ್ತು ಸೌಂದರ್ಯ ಎರಡು ತತ್ವಗಳು.
ಸೌಂದರ್ಯ ಪ್ರೇಮಿಯ ಎದೆಯಲ್ಲಿದ್ದರೆ,
ಸತ್ಯ ನೆಲ ಉಳುವವನ ರಟ್ಟೆಯಲ್ಲಿದೆ.
~
ಅಸಾಧಾರಣ ಸೌಂದರ್ಯ
ನನ್ನ ಕಾಡುವುದೇನೋ ನಿಜ,
ಆದರೆ ನನ್ನನ್ನು, ತನ್ನಿಂದಲೂ
ಮುಕ್ತಗೊಳಿಸುವ ಚೆಲುವು
ನನಗೆ ಇನ್ನೂ ಶ್ರೇಷ್ಠ.
~
ಚೆಲುವು ತನ್ನನ್ನು ನೋಡುವವರ ಕಣ್ಗಳಿಗಿಂತ,
ತನಗಾಗಿ ತುಡಿಯುವವರ ಎದೆಯಲ್ಲಿ
ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತದೆ.
(ಮುಂದುವರೆಯುವುದು…..)
ಅನುವಾದಕರ ಟಿಪ್ಪಣಿ :
ಖಲೀಲ್ ಗಿಬ್ರಾನ್ ನ ಆಯ್ದ (ಆಯ್ದ ಎಂದರೆ ತಪ್ಪಾಗಬಹುದು. ನನ್ನನ್ನು ತಾಕಿದ ಎನ್ನಬಹುದೇನೋ) ವಚನಗಳು. ಈ ವಚನಗಳು ನಾನು ಅರ್ಥ ಮಾಡಿಕೊಳ್ಳಲಿಕ್ಕೆ ಕನ್ನಡಿಸಿರುವಂಥವು. ಕೆಲವು ರಚನೆಗಳು ಎಷ್ಟು ಸರಳ ಮತ್ತು ಹೃದ್ಯವಾಗಿವೆಯೆಂದರೆ, ಬೇರೆ ರೀತಿ ಅನುವಾದಿಸಲು ಸಾಧ್ಯವಿಲ್ಲವೇನೋ. ಆದ್ದರಿಂದ ನನ್ನ ಪ್ರಯತ್ನ, ಬೇರೆಯವರ ಪ್ರಯತ್ನ ಕೆಲವೊಮ್ಮೆ ತುಂಬ ಹತ್ತಿರವಾಗಿದೆ. ಆದರೆ ನನ್ನ ಮುಖ್ಯ ಉದ್ದೇಶ ಈ ವಚನಗಳನ್ನ ಅರಿಯುವುದಾಗಿರುವದರಿಂದ ಜಾಸ್ತಿ ಸರ್ಕಸ್ ಮಾಡಲು ಹೋಗಿಲ್ಲ. ಕಾವ್ಯ ಗುಣಗಳಿಂದ ತುಂಬಿ ತುಳುಕುತ್ತಿದ್ದರೂ, ಯಾಕೋ ಗಿಬ್ರಾನ್ ಈ ರಚನೆಗಳನ್ನ ಗದ್ಯ ರೂಪದಲ್ಲಿ, ಹೇಳಿಕೆಗಳ(quotation) ರೂಪದಲ್ಲಿ ಕೊಟ್ಟಿದ್ದಾನೆ. “Obvious becomes obvious when someone says in simple form” ಅಂತಾನೆ ಗಿಬ್ರಾನ್.
ಮನತಟ್ಟುವ ಸಾಲುಗಳು
ಅರಳಿಮರ ಆಗಾಗ ನೋಡುವೆ. ಪರಿಚಯಿಸಿದವರು ಶಮ ನಂದಿಬೆಟ್ಟ. ಈಸಲದ ಖಲೀಲ್ ಗಿಬ್ರಾನ್ ಕವನಗಳ ಕೆಲವು ಅನುವಾದ ಹಿಡಿಸಿತು!! ಚಿದಂಬರ್ ನರೇಂದ್ರ ಅವರಿಗೆ ನಮನ ಗಳು.
ಧನ್ಯವಾದ ಸರ್. ಶಮಾ ಅವರಿಗೂ ಧನ್ಯವಾದ