ಪೂರ್ಣವಾಗಿದ್ದಾಗ ಮಾತ್ರ ಅದು ನಂಬಿಕೆ ಇಲ್ಲವಾದರೆ ಅದು ನಂಬಿಕೆಯೇ ಅಲ್ಲ ~ ಓಶೋ ರಜನೀಶ್ | ಚಿದಂಬರ ನರೇಂದ್ರ
Osho tells a story about faith versus prayer.
ಒಮ್ಮೆ ಒಂದೂರಿನಲ್ಲಿ ಹೀಗಾಯಿತು…
ಎಷ್ಟೋ ದಿನಗಳಿಂದ ಆ ಊರಿನಲ್ಲಿ ಮಳೆಯೇ ಬಂದಿರಲಿಲ್ಲ.
ಮಳೆಗಾಲ ಶುರುವಾಗಿ ಎಷ್ಟೋ ದಿನಗಳಾದರೂ ಊರಿನ ಸುತ್ತ ಮುತ್ತ ಮಳೆಯ ಸುಳಿವೇ ಇರಲಿಲ್ಲ. ಆದ್ದರಿಂದ ಊರಿನ ಮುಖ್ಯ ಪುರೋಹಿತ, ಊರಿನ ಎಲ್ಲ ಜನರಿಗೆ ಊರ ಗುಡಿಯ ಹತ್ತಿರ ಬಂದು ಸೇರಲು ಕೇಳಿಕೊಂಡ. ಊರಿನ ಎಲ್ಲ ಜನರನ್ನು ಸೇರಿಸಿ ಊರ ದೇವರನ್ನು ಮಳೆಗಾಗಿ ಪ್ರಾರ್ಥಿಸುವುದು ಪುರೋಹಿತನ ಉದ್ದೇಶವಾಗಿತ್ತು.
ಪುರೋಹಿತನ ಮಾತಿಗೆ ಮನ್ನಣೆ ನೀಡಿ ಊರಿನ ಪ್ರತಿಯೊಬ್ಬರೂ ಊರ ಗುಡಿಯ ಕಡೆಗೆ ಹೊರಟರು.
ಗುಡಿಯ ದಾರಿಯಲ್ಲಿ ಕೊಡೆ ಹಿಡಿದುಕೊಂಡು ಒಂದು ಪುಟ್ಟ ಮಗುವೂ ನಡೆದುಕೊಂಡು ಹೋಗುತ್ತಿತ್ತು. ಊರಿನ ಜನರೆಲ್ಲ ಆ ಮಗುವನ್ನು ನೋಡಿ ತಮಾಷೆ ಮಾಡಿ ನಗತೊಡಗಿದರು. ಊರಿನ ಪುಢಾರಿಯೊಬ್ಬ ಮಗುವನ್ನು ಮಾತನಾಡಿಸಿದ,
“ ಮಳೆ ಬಂದು ಎಷ್ಟೋ ದಿನಗಳಾಯ್ತು , ಸಧ್ಯ ಮಳೆ ಬರುವ ಸೂಚನೆಯೂ ಇಲ್ಲ, ನೀನು ಯಾಕೆ ಕೊಡೆ ತೆಗೆದುಕೊಂಡು ಬಂದಿದ್ದೀಯ ಹುಚ್ಚು ಹುಡುಗ.”
“ ಆದರೆ ನೀವೆಲ್ಲ ಮಳೆಗಾಗಿ ಪ್ರಾರ್ಥನೆ ಮಾಡಲು ಊರ ದೇವರ ಗುಡಿಗೆ ಹೋಗುತ್ತಿದ್ದೀರಲ್ಲ, ಖಂಡಿತ ಮಳೆ ಬಂದೇ ಬರತ್ತೆ, ಅದಕ್ಕೇ ನಾನು ಕೊಡೆ ತಂದಿರೋದು”
ಆ ಮುಗ್ಧ ಹುಡುಗ ಪ್ರಾಮಾಣಿಕವಾಗಿ ಉತ್ತರಿಸಿದ.
ಊರ ಜನರೆಲ್ಲ ಸೇರಿ ಪ್ರಾರ್ಥನೆ ಮಾಡಿದರೂ ಮಳೆ ಬರುವುದಿಲ್ಲ ಏಕೆಂದರೆ ಯಾರೀಗೂ ತಮ್ಮ ಪ್ರಾರ್ಥನೆಯಲ್ಲಿ ನಂಬಿಕೆಯಿಲ್ಲ, ಆದರೆ ಆ ಪುಟ್ಟ ಹುಡುಗ ಪ್ರಾರ್ಥನೆ ಮಾಡಿದರೆ ಮಳೆ ಸುರಿಯುವುದು ಖಂಡಿತ, ಆ ಹುಡುಗನಿಗೆ ತನ್ನ ಪ್ರಾರ್ಥನೆಯಲ್ಲಿ ಅಪಾರ ನಂಬಿಕೆ. ತನ್ನ ಪ್ರಾರ್ಥನೆಯಿಂದ ಮಳೆ ಖಂಡಿತ ಸುರಿಯುವುದು ಎನ್ನುವ ನಂಬಿಕೆಯಿಂದಲೇ ಆ ಮಗು ಕೊಡೆ ಕೂಡ ತನ್ನ ಜೊತೆ ತಂದಿರುವುದು.
ಪೂರ್ಣವಾಗಿದ್ದಾಗ ಮಾತ್ರ ಅದು ನಂಬಿಕೆ ಇಲ್ಲವಾದರೆ ಅದು ನಂಬಿಕೆಯೇ ಅಲ್ಲ.
Osho, The True sage – Talks on Hassidism, Ch 4, Q 6 (excerpt)