ಯಾರು ಯಾರಿಗೆ ಗುಲಾಮರು? : ಸೂಫಿ ಕಥೆ

ಒಂದು ದಿನ ಸೂಫಿ ಗುರು ಜುನೈದ್ ತನ್ನ ಶಿಷ್ಯರೊಂದಿಗೆ ಸಂತೆ ಬೀದಿಯಲ್ಲಿ ನಡೆದುಹೋಗುತ್ತಿದ್ದ. ಅಲ್ಲೊಬ್ಬ ವ್ಯಕ್ತಿ ತನ್ನ ಹಸುವಿಗೆ ಕಟ್ಟಿದ ಹಗ್ಗವನ್ನು ಎಳೆಯುತ್ತಾ “ಹುರ್ರ್… ಬಾ.. ಬಾ…” ಅನ್ನುತ್ತ ಕಾಕು ಹೊಡೆಯುತ್ತಿದ್ದ. ಆ ಹಸು ತಲೆಯನ್ನು ಎಳೆಯುತ್ತ ಅವನಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿತ್ತು.

ಈ ಹಗ್ಗ ಜಗ್ಗಾಟವನ್ನು ಕಂಡ ಜುನೈದ್ ಅಲ್ಲಿಯೇ ನಿಂತು, “ಬನ್ನಿ, ಆ ವ್ಯಕ್ತಿಯನ್ನು ಸುತ್ತುಗಟ್ಟಿ. ನಿಮಗೊಂದು ಪಾಠ ಹೇಳಿಕೊಡ್ತೀನಿ” ಎಂದು ತನ್ನ ಶಿಷ್ಯರನ್ನು ಕರೆದ.

ಶಿಷ್ಯರೆಲ್ಲರೂ ಅವನನ್ನು ಸುತ್ತುವರಿದು ನಿಂತರು. ಜುನೈದ್ ಕೇಳಿದ, “ಹಸು ಮತ್ತು ಮನುಷ್ಯ – ಇವರಿಬ್ಬರಲ್ಲಿ ಯಾರು ಮಾಲೀಕ, ಯಾರು ಗುಲಾಮ?”
“ಈ ಮನುಷ್ಯನೇ ಮಾಲೀಕ ಮತ್ತು ಹಸುವೇ ಗುಲಾಮ. ಹಸು ತನ್ನ ಮಾಲೀಕನನ್ನು ಹಿಂಬಾಲಿಸಬೇಕು. ಇದರಲ್ಲಿ ಅನುಮಾನವೇ ಇಲ್ಲ!” ಎಂದರು ಶಿಷ್ಯರು.

ಜುನೈದ್ ಆ ಹಸುವಿನ ಕೊರಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ. ಆ ಮನುಷ್ಯ ಕೋಪದಿಂದ ಜುನೈದ್’ಗೆ ಬೈಯಬೇಕು ಅನ್ನುವಾಗಲೇ ಹಸು ತಪ್ಪಿಸಿಕೊಂಡು ಓಡತೊಡಗಿತ್ತು. ಆತ “ಏಯ್, ನಿಲ್ಲು! ನಿಲ್ಲು!” ಅನ್ನುತ್ತಾ ಅದರ ಹಿಂದೆ ಎದ್ದೂಬಿದ್ದೂ ಓಡತೊಡಗಿದ.

“ಈಗ ಹೇಳಿ. ಯಾರು ಯಾರನ್ನು ಅನುಸರಿಸುತ್ತಿದ್ದಾರೆ? ಯಾರು ಯಾರಿಗೆ ಗುಲಾಮರಾಗಿದ್ದಾರೆ? ಆ ಹಸುವಿಗೆ ಆ ಮನುಷ್ಯನಲ್ಲಿ ಸ್ವಲ್ಪವೂ ಆಸಕ್ತಿಯೇ ಇಲ್ಲ. ಆದರೆ ಆ ಮನುಷ್ಯನಿಗೆ ಆ ಹಸು ಇಲ್ಲದಿದ್ದರೆ ನಷ್ಟ. ಹೇಗೆ ಅದರ ಹಿಂದೆ ಓಡುತ್ತಿದ್ದಾನೆ ನೋಡಿ! ಆ ಹಸು ಅವನನ್ನು ಹೇಗೆ ಆಟವಾಡಿಸ್ತಿದೆ ನೋಡಿ!” ಅಂದ.

ಜುನೈದನ ಶಿಷ್ಯರು ಅಂದು ಮನಸ್ಸು ಮತ್ತು ಮನುಷ್ಯ ಪರಸ್ಪರ ಒಡೆತನ ಸಾಧಿಸುವ ಕುರಿತು ಹೊಸ ಪಾಠವೊಂದನ್ನು ಕಲಿತರು.

(ಸಂಗ್ರಹ ಮತ್ತು ಅನುವಾದ: ಅಲಾವಿಕಾ)

Leave a Reply