ನೀವು ನೃತ್ಯದಿಂದ ನೃತ್ಯಪಟುವನ್ನು ಬೇರ್ಪಡಿಸುವುದು ಸಾಧ್ಯವಿಲ್ಲ. ದೇವರು ಹೆಚ್ಚು ಹೆಚ್ಚು ನೃತ್ಯಪಟುವಿನಂತೆ, ನಾವು ಅವನ ಒಂದೊಂದು ಮೂವಮೆಂಟ್ ನ ಹಾಗೆ. ನಾವು ಇದನ್ನ ಗುರುತಿಸಬಹುದು ಅಥವಾ ಗುರುತಿಸದೇ ಹೋಗಬಹುದು… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತ,
ಮಂದಿರ, ಮಸಿದಿ, ಚರ್ಚುಗಳಿಗೆ
ಸೀಮಿತನಲ್ಲವಾದ್ದರಿಂದ,
ಬ್ರಹ್ಮಾಂಡದ ಯಾವುದರ ಮುಖಾಂತರವೂ,
ಯಾರ ಮೂಲಕವೂ
ನೀವು ಅವನನ್ನು ತಲುಪಬಹುದು.
ಆದರೂ ನಿಮಗೆ
ಅವನ ಖಾಸಾ ಮನೆಯನ್ನು ಹುಡುಕುವ
ಹುಕಿ ಇದ್ದರೆ,
ನಿಜದ ಪ್ರೇಮಿಯ
ಹೃದಯದ ಬಾಗಿಲನ್ನ ತಟ್ಟಿ.
ಭಗವಂತನ ಮನೆ ಇರುವುದೇ ಅಲ್ಲಿ,
ಪ್ರೇಮ ಇರುವಲ್ಲಿ.
ಭಗವಂತನನ್ನು ಕೇಳುವ ಉಮೇದು ನಿಮಗಿದ್ದರೆ,
ಹೃದಯದಲ್ಲಿ ಪಿಸುಗುಡುತ್ತಿರುವ
ಪ್ರೇಮದ ದನಿಗೆ ಕಿವಿಯಾಗಿ.
~ ಶಮ್ಸ್ ತಬ್ರೀಝಿ
*********************
ಪಾಶ್ಚಿಮಾತ್ಯರ ಐಡಿಯಾ, ಪೇಂಟರ್ ಒಬ್ಬ ತನ್ನ ಚಿತ್ರವನ್ನು ಪೇಂಟ್ ಮಾಡುವಂತೆ. ಪೇಂಟಿಂಗ್ ಮಾಡುವುದು ಮುಗಿಯುತ್ತಿದ್ದಂತೆಯೇ ಪೇಂಟರ್, ಪೇಂಟಿಂಗ್ ನಿಂದ ಬೇರೆಯಾಗುತ್ತಾನೆ. ನಂತರ ಪೇಂಟರ್ ಸತ್ತರೂ ಪೇಂಟಿಂಗ್ ಉಳಿದುಕೊಂಡಿರುತ್ತದೆ.
ಪೂರ್ವದಲ್ಲಿ ನಾವು ದೇವರು ಮತ್ತು ಜಗತ್ತಿನ ಬಗ್ಗೆ ಪೇಂಟರ್ ಮತ್ತು ಪೇಂಟಿಂಗ್ ನ ಹಾಗೆ ಆಲೋಚಿಸುವುದಿಲ್ಲ. ನಾವು ದೇವರನ್ನು ಡಾನ್ಸರ್ ನಟರಾಜ್ ನಂತೆ ಥಿಂಕ್ ಮಾಡುತ್ತೇವೆ. ಡಾನ್ಸರ್ ನಿಂದ ಡಾನ್ಸ್ ನ ಬೇರ್ಪಡಿಸುವುದು ಸಾಧ್ಯವಿಲ್ಲ. ಇಲ್ಲಿ ಡಾನ್ಸರ್ ಇಲ್ಲವಾದರೆ ಡಾನ್ಸ್ ಕೂಡ ಇರುವುದಿಲ್ಲ. ಅಕಸ್ಮಾತ್ ಡಾನ್ಸ್ ನಿಂತುಹೋದರೆ, ಆಗ ವ್ಯಕ್ತಿ ಡಾನ್ಸರ್ ಆಗಿ ಉಳಿಯುವುದಿಲ್ಲ.
ನೃತ್ಯ ಮತ್ತು ನೃತ್ಯಪಟು ಯಾವತ್ತೂ ಒಂದಾಗಿಯೇ ಅಸ್ತಿತ್ವದಲ್ಲಿ ಇರುತ್ತಾರೆ, ಬೇರೆ ಬೇರೆಯಾಗಿ ಅವರು ಅಸ್ತಿತ್ವದಲ್ಲಿ ಇರುವುದು ಸಾಧ್ಯವಿಲ್ಲ. ನೀವು ನೃತ್ಯದಿಂದ ನೃತ್ಯಪಟುವನ್ನು ಬೇರ್ಪಡಿಸುವುದು ಸಾಧ್ಯವಿಲ್ಲ. ದೇವರು ಹೆಚ್ಚು ಹೆಚ್ಚು ನೃತ್ಯಪಟುವಿನಂತೆ, ನಾವು ಅವನ ಒಂದೊಂದು ಮೂವಮೆಂಟ್ ನ ಹಾಗೆ. ನಾವು ಇದನ್ನ ಗುರುತಿಸಬಹುದು ಅಥವಾ ಗುರುತಿಸದೇ ಹೋಗಬಹುದು.
ಆದರೆ ಜಗತ್ತಿನಲ್ಲಿರುವ ಒಂದೇ ವ್ಯತ್ಯಾಸವೆಂದರೆ ಕೆಲವರು ಮಾತ್ರ ತಮ್ಮನ್ನು ತಾವು ದೇವರು ಎಂದು ಗುರುತಿಸಿಕೊಳ್ಳುತ್ತಾರೆ. ಬಾಕಿ ಎಲ್ಲರಿಗೆ ಈ ಗುರುತಿಸಿಕೊಳ್ಳುವಿಕೆ ಸಾಧ್ಯವಾಗುವುದಿಲ್ಲ.
ಈ ವ್ಯತ್ಯಾಸಕ್ಕೆ ಕಾರಣ ನಿಮ್ಮ ಅಸ್ತಿತ್ವ ಕಾರಣ ಅಲ್ಲ, ಕಾರಣ ಗುರುತಿಸುವಿಕೆ. ನೀವು ಹೆಚ್ಚು ಹೆಚ್ಚು ಪ್ರೀತಿಸಿದಂತೆಲ್ಲ ಹೆಚ್ಚು ಹೆಚ್ಚು ತಿಳುವಳಿಕೆ, ಅರಿವು ನಿಮ್ಮದಾಗುತ್ತದೆ. ಮತ್ತು ಹೆಚ್ಚು ಹೆಚ್ಚು ಏನನ್ನೋ ಮಿಸ್ ಮಾಡಿಕೊಳ್ಳುತ್ತಿರುವ ಭಾವ ನಿಮ್ಮನ್ನು ಕಾಡಲು ಶುರು ಮಾಡುತ್ತದೆ.
ಒಮ್ಮೆ ಮುಲ್ಲಾ ನಸ್ರುದ್ದೀನ, ರೈಲು ಪ್ರಯಾಣ ಮಾಡುತ್ತಿದ್ದ. ತನ್ನ ಕಂಪಾರ್ಟಮೆಂಟ್ ಗೆ ಟಿಕೇಟ್ ಕಲೆಕ್ಟರ್ ಬರುತ್ತಿರುವುದನ್ನ ದೂರದಿಂದ ಗಮನಿಸಿದ ಮುಲ್ಲಾ, ಸಹ ಪ್ರಯಾಣಿಕರ ಜೇಬುಗಳಲ್ಲಿ, ಚೀಲಗಳಲ್ಲಿ ತನ್ನ ಟಿಕೇಟ್ ಹುಡುಕತೊಡಗಿದ.
ಮುಲ್ಲಾನ ಈ ವರ್ತನೆಯನ್ನು ನೋಡಿ ಆಶ್ಚರ್ಯಚಕಿತನಾದ ಸಹ ಪ್ರಯಾಣಿಕನೊಬ್ಬ ಪ್ರಶ್ನೆ ಮಾಡಿದ.
“ ಹಿರಿಯರೆ ನಿಮ್ಮ ಟಿಕೇಟು ನಿಮ್ಮ ಜೇಬು ಅಥವಾ ನಿಮ್ಮ ಚೀಲದಲ್ಲಿರಬೇಕಲ್ಲವೆ? ನೀವು ಅಲ್ಲಿ ಬಿಟ್ಟು ಬೇರೆಲ್ಲ ಕಡೆ ಹುಡುಕುತ್ತಿದ್ದೀರಲ್ಲ? “
“ ಹೌದು ನಾನು ಅಲ್ಲಿ ಹುಡುಕಬಹುದಿತ್ತು ಆದರೆ ಟಿಕೇಟ್ ಅಲ್ಲಿ ಸಿಗದಿದ್ದರೆ ನನ್ನ ಎಲ್ಲ ಭರವಸೆಯೂ ನಾಶವಾಗಿ ಬಿಡುತ್ತದಲ್ಲ “
ಮುಲ್ಲಾ ಉತ್ತರಿಸಿದ.
ನಾವೂ ನಸ್ರುದ್ದೀನ್ ನ ಹಾಗೆ ದೇವರನ್ನ ನಮ್ಮನ್ನು ಬಿಟ್ಟು ಬೇರೆ ಎಲ್ಲ ಕಡೆ ಹುಡುಕುತ್ತೇವೆ, ನಮಗೆ ಭಯ ಅಕಸ್ಮಾತ್ ನಾವು ನಮ್ಮನ್ನು ಹುಡುಕಿಕೊಂಡು ಅಲ್ಲಿ ನಾವು ದೇವರನ್ನು ಕಾಣದೇ ಹೋದರೆ ಎಂದು, ಬದುಕಿನ ಭರವಸೆಯನ್ನೇ ಕಳೆದುಕೊಂಡು ಬಿಡುತ್ತೇವೆಯೇನೋ ಎಂದು.
Source: Osho / A sudden clash of thunder

