ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 5ನೇ ಕಂತು ಇಲ್ಲಿದೆ…
4ನೇ ಕಂತು ಇಲ್ಲಿ ನೋಡಿ: https://aralimara.com/2024/06/08/neruda-3/
ಸಾವು ಎಲ್ಲಿಂದ ಬರತ್ತೆ? ಮೇಲಿನಿಂದ? ಕೆಳಗಿನಿಂದ?
ಕೀಟಾಣು, ಗೋಡೆ, ಯುದ್ಧ, ಹಸಿವು, ರೋಗ ಅಥವಾ ಕಾರಣವೇ ಇರದೆ?
*
ಹೊಳೆಯಲ್ಲಿ ಕದಡಿದ ನನ್ನ ಮೈಯ ಬೂದಿ
ಹೊಳೆ ನೀರನ್ನು ಕುಡಿದವರಿಗೆ ಬೆರಕೆ ಜಾತಿಯ ಮಗುವಾಗಿ ಹುಟ್ಟತ್ತೋ,
ಅಥವಾ ಆಮೆಯ ಮರಿಯಾಗಿ ಹುಟ್ಟತ್ತೋ?
*

ನಮ್ಮ ಬದುಕು ಅನ್ನೋದು
ಎರಡು ಅಸ್ಪಷ್ಟ ಸ್ಪಷ್ಟತೆಗಳ ನಡುವಿನ ಸುರಂಗ, ಹೌದೇ?
ಅಥವಾ ಅದು ಕತ್ತಲಿನ ಎರಡು ತ್ರಿಕೋನಗಳ ನಡುವೆ
ಇರುವ ಸ್ಪಷ್ಟತೆಯ ಬೆಳಕೇ?
ಅಥವಾ ಬದುಕು ಅನ್ನೋದು
ಹಕ್ಕಿಯಾಗಲು ಸಿದ್ಧವಾಗುತಿರುವ ಮೀನೇ?
ಸಾವು ಅಂದರೆ ಏನೇನೂ ಇಲ್ಲದೆ ಇರುವುದೋ
ಅಥವಾ ಅಪಾಯಗಳೆಲ್ಲ ಕಿಕ್ಕಿರಿದಿರುವುದೋ?
ಕೊನೆಗೂ ಸಾವು ಅಂದರೆ
ಅನಂತದ ಅಡುಗೆಮನೆಯೊ?
ಚದುರಿಬಿದ್ದ ನಮ್ಮ ಎಲುಬು ಏನಾಗುತ್ತವೆ?
ನಮ್ಮ ರೂಪ ಎಲ್ಲೆಂದು ಹುಡುಕುತ್ತವೋ?
ನಾಶವಾದ ನಾವು
ಇನ್ನೊಂದು ದನಿ ಇನ್ನೊಂದು ಬೆಳಕಿನೊಡನೆ ಕೂಡುತ್ತೇವೋ?
ನಮ್ಮ ಹುಳುಗಳು
ನಾಯಿ, ಚಿಟ್ಟೆಗಳ ಮೈ ಸೇರುತ್ತವೋ?

ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್ ಆಫ್ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸಲಿದೆ.
(Illustrations: Chetana Thirthahalli)


[…] 5ನೇ ಕಂತು ಇಲ್ಲಿ ನೋಡಿ: https://aralimara.com/2024/06/09/neruda-4/ […]
LikeLike