ನೆರೂಡನ Book of Questions, ಕನ್ನಡದಲ್ಲಿ… #10

ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 10ನೇ ಕಂತು ಇಲ್ಲಿದೆ…

ಬಣ್ಣ ಮಾಸಿ ಮಂಕು ಬಡಿದ ನನ್ನ ಬಟ್ಟೆ
ಧ್ವಜದ ಹಾಗೆ ಪಟಪಟಿಸುವುದು ಯಾಕೆ?

ನಾನು ಆಗಾಗ ಕೆಡುಕು
ಯಾವಾಗಲೂ ಒಳಿತು, ಹೌದೋ?

ನಾವು ಮರುಕವನ್ನು ಕಲಿಯುತ್ತೇವೋ
ಮರುಕದ ಮುಖವಾಡ ತೊಡುವುದನ್ನೋ?

ಕೆಡುಕು-ಬಿಳಿಯ ಗುಲಾಬಿಯ ಪೊದೆಯಾಗಿ
ಒಳಿತೆಂಬುದು ಕಪ್ಪು ಹೂವುಗಳಾಗಿ ಇರಲಾವೆ?

ಅಸಂಖ್ಯಾತ ಮುಗ್ಧರಿಗೆ
ಹೆಸರು, ಕ್ರಮಸಂಖ್ಯೆ ಕೊಡುವವರು ಯಾರು?

**

ನಾನು ನಿನಗಿಂತ ನಿಧಾನ
ಅಂತ ಆಮೆಗೆ ಹೇಗೆ ಹೇಳಲಿ?

ಈ ಪರಿಮಳಕ್ಕೆ ಕೃತಜ್ಞ
ಅಂತ ಮಲ್ಲಿಗೆಗೆ ಹೇಗೆ ತಿಳಿಸಲಿ?

**
ಸಾವಿನ ಓಣಿಯಲ್ಲಿ
ಬದುಕುವುದು ಅಂದರೇನು ಅರ್ಥ?

ಉಪ್ಪಿನ ಮರುಭೂಮಿಯಲ್ಲಿ
ಅರಳಲು ಸಾಧ್ಯವೋ?

ಏನೂ ಇರದ ಕಡಲಿನಲ್ಲಿ ಸತ್ತಾಗ
ತೊಡಲು ಬಟ್ಟೆ ಇರುವುದೋ?
ಈಗ ಮೂಳೆ ಎಲುಬೂ ಇಲ್ಲ ಅಂತಾದರೆ
ಕೊನೆಯ ಮಣ್ಣಿನ ರಾಶಿಯಲ್ಲಿ ಇರುವುದು ಯಾರು, ಏನು?


ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್‌ ಆಫ್‌ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸುತ್ತಿದೆ.

(Illustrations: Chetana Thirthahalli)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.