ಶಿಷ್ಯನೊಬ್ಬ ರಬ್ಬೀ ನ್ಯಾಕಮನ್ ಹತ್ತಿರ ಬಂದ.
“ಇನ್ನು ಮುಂದೆ ಪವಿತ್ರ ಗ್ರಂಥಗಳ ಕಲಿಕೆ ನನ್ನಿಂದಾಗದು. ನಾನು ಒಂದು ಸಣ್ಣ ಮನೆಯಲ್ಲಿ ನನ್ನ ತಂದೆ ತಾಯಿ ಮತ್ತು ಸಹೋದರರೊಡನೆ ವಾಸ ಮಾಡುತ್ತಿದ್ದೇನೆ. ಬಹಳ ಬಡತನದ ಕುಟುಂಬ ನಮ್ಮದು. ಪವಿತ್ರ ಗ್ರಂಥಗಳ ಕಲಿಕೆ ಬೇಕಾಗುವ ಸೂಕ್ತ ವಾತಾವರಣ ನಮ್ಮಲ್ಲಿ ಇಲ್ಲ”.
ರಬ್ಬೀ ತನ್ನ ಶಿಷ್ಯನಿಗೆ ಸೂರ್ಯನನ್ನು ತೋರಿಸಿ ಸೂರ್ಯ ಕಾಣದಂತೆ ಮುಖ ಮುಚ್ಚಿಕೊಳ್ಳುವಂತೆ ಹೇಳಿದ. ಶಿಷ್ಯ, ರಬ್ಬೀ ಹೇಳಿದಂತೆ ಸೂರ್ಯ ಕಾಣಿಸದಂತೆ ತನ್ನ ಮುಖವನ್ನು ಕೈಗಳಿಂದ ಮುಚ್ಚಿಕೊಂಡ.
“ ನಿನ್ನ ಕೈಗಳು ಇಷ್ಟು ಚಿಕ್ಕದಾಗಿದ್ದರೂ ಅವು ಸೂರ್ಯನ ಶಕ್ತಿ, ಬೆಳಕು ಮತ್ತು ಪ್ರಖರತೆಯನ್ನು ತಡೆಯುವಷ್ಟು ಸಮರ್ಥವಾಗಿವೆ. ಇದೇ ರೀತಿ ಸಣ್ಣ ಸಣ್ಣ ಸಮಸ್ಯೆಗಳು ನಿನ್ನ ಅಧ್ಯಾತ್ಮಿಕ ಪ್ರಯಾಣದ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಿ ನೀನು ಇಂಥ ನೆಪ ಹೇಳುವಂತೆ ಮಾಡುತ್ತಿವೆ.
“ಹೇಗೆ ನಿನ್ನ ಕೈಗಳಿಗೆ ಸೂರ್ಯನನ್ನು ಮರೆಮಾಚುವ ಸಾಮರ್ಥ್ಯವಿದೆಯೋ ಹಾಗೆಯೇ, ನಿನ್ನ ಸಾಧಾರಣತೆಗೆ (mediocrity) ನಿನ್ನ ಒಳಗಿನ ದಿವ್ಯ ಶಕ್ತಿಯನ್ನು ತಡೆಹಿಡಿಯುವ ಸಾಮರ್ಥ್ಯವಿದೆ. ನಿನ್ನ ಸ್ವಂತದ ಒಳಗಿನ ಅಸಮರ್ಥತೆಗೆ ಹೊರಗಿನವರನ್ನು ದೂರಬೇಡ”.
ರಬ್ಬೀ, ಶಿಷ್ಯನಿಗೆ ತಿಳಿ ಹೇಳಿದರು.
(ಸಂಗ್ರಹಾನುವಾದ: ಚಿದಂಬರ ನರೇಂದ್ರ)

