ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಒಂದು ಕಾಲದಲ್ಲಿ ಬೆಟ್ಟಗಳ ನಾಡಿನಲ್ಲಿ ಒಬ್ಬಾತನ ಹತ್ತಿರ ಪ್ರಾಚೀನ ಕಾಲದ ಕಲಾವಿದಮಾಡಿದ ವಿಗ್ರಹವೊಂದಿತ್ತು. ಅದು ಅವನ ಮನೆಯ ಹೆಬ್ಬಾಗಿಲ ಮುಂದೆ ಮುಖ ಅಡಿಯಾಗಿ ಬಿದ್ದಿತ್ತು. ಆ ವಿಗ್ರಹದ ಬಗ್ಗೆ ಅವನಿಗೆ ಏನೂ ಅನಿಸುತ್ತಿರಲಿಲ್ಲ
ಒಂದು ದಿನ ನಗರದಿಂದ ಬಂದವನೊಬ್ಬ, ತಿಳಿವಳಿಕೆ ಇದ್ದಾತ, ಅವನ ಮನೆಯ ಮುಂದೆ ಹೋಗುತ್ತಿದ್ದ. ವಿಗ್ರಹವನ್ನು ನೋಡಿದವನೇ ಯಾರಿಗೆ ಸೇರಿದ್ದು ಇದು, ಮಾರುತ್ತಾರಾ ಎಂದು ವಿಚಾರಿಸಿದ.
ಮನೆಯ ಯಜಮಾನ ಜೋರಾಗಿ ನಕ್ಕ. ʻಅಲ್ಲಾ, ಈ ಕೊಳಕು ಕಲ್ಲನ್ನು ಯಾರು ತಾನೇ ದುಡ್ಡು ಕೊಟ್ಟು ಖರೀದಿ ಮಾಡುತ್ತಾರೆ, ಹೇಳಿ!ʼ ಅಂದ.
ʻನಿಮಗೆ ಒಂದು ಬೆಳ್ಳಿಯ ನಾಣ್ಯ ಕೊಡುತ್ತೇನೆ, ಈ ವಿಗ್ರಹ ನನಗೆ ಕೊಡುತ್ತೀರಾ?ʼ ನಗರದವನು ಕೇಳಿದ.
ಯಜಮಾನನಿಗೆ ಬೆರಗಾಯಿತು, ಖುಷಿಯು ಆಯಿತು.
ಆನೆಯ ಮೇಲೆ ಹೇರಿಕೊಂಡು ಆ ವಿಗ್ರಹವನ್ನು ನಗರಕ್ಕೆ ತೆಗೆದುಕೊಂಡು ಹೋದರು. ಕೆಲವು ತಿಂಗಳು ಕಳೆದವು. ಬೆಟ್ಟದ ನಾಡಿನ ಮನುಷ್ಯ ನಗರಕ್ಕೆ ಬಂದ. ಅಲ್ಲೊಂದು ಅಂಗಡಿಯ ಮುಂದೆ ಬಹಳ ಜನ ಸೇರಿದ್ದರು. ಅಂಗಡಿಯ ಮುಂದೆ ನಿಂತವನೊಬ್ಬ, ʻಬನ್ನಿ, ಬನ್ನಿ, ನೋಡಿ. ಜಗತ್ತಿನ ಅತಿ ಹಳೆಯ ಅತಿ ಸುಂದರ ವಿಗ್ರಹ. ತಲಾ ಎರಡು ಬೆಳ್ಳಿಯ ನಾಣ್ಯ ಅಷ್ಟೇ. ಮಹಾನ್ ಕಲಾವಿದನ ಕೃತಿ, ಬನ್ನೀʼ ಎಂದು ಕೂಗುತ್ತಿದ್ದ.
ಬೆಟ್ಟದ ನಾಡಿನವನು ಒಳಕ್ಕೆ ಹೋಗಿ, ಒಂದು ಒಂದು ನಾಣ್ಯಕ್ಕೆ ತಾನೇ ಮಾರಿದ್ದ ವಿಗ್ರಹವನ್ನು ಈಗ ಎರಡು ಬೆಳ್ಳಿಯ ನಾಣ್ಯ ಕೊಟ್ಟು ನೋಡಿಕೊಂಡು ಬಂದ.

