ಶಿವಮಹಿಮ್ನಃ ಸ್ತೋತ್ರ : ಕುವೆಂಪು ಅವರ ಅನುವಾದದಲ್ಲಿ…

ದಾರ್ಶನಿಕ ಕವಿ ಕುವೆಂಪು ಅವರು ರಾಮಕೃಷ್ಣ ಪಂಥದ ಅನುಯಾಯಿಯೂ ಆಗಿದ್ದರು. ಸ್ವಾಮಿ ಶಿವಾನಂದರ ಶಿಷ್ಯರಾಗಿ ಅವರ ಗರಡಿಯಲ್ಲಿ ಅಧ್ಯಾತ್ಮವಿಚಾರಗಳನ್ನು ಕರಗತ ಮಾಡಿಕೊಂಡಿದ್ದರು. ತಮ್ಮ ಪ್ರತಿಯೊಂದು ಕೃತಿಯಲ್ಲೂ ಅಧ್ಯಾತ್ಮ ಸ್ಪರ್ಶ ಕಾಣಿಸುವ ಕುವೆಂಪು, ಸ್ವತಂತ್ರ ಆಧ್ಯಾತ್ಮಿಕ ಕೃತಿಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ ‘ಗುರುವಿನೊಡನೆ ದೇವರಡಿಗೆ’ ಕೂಡಾ ಒಂದು. ಶಿವಮಹಿಮ್ನಃ ಸ್ತೋತ್ರದ  ಅನುವಾದವನ್ನು ಈ ಕೃತಿಯ ‘ಶಿವಸ್ತೋತ್ರ ಮತ್ತು ನಿರ್ವಿಕಲ್ಪ ಸಮಾಧಿ’ ಎಂಬ ಅಧ್ಯಾಯದಿಂದ ಆಯ್ದುಕೊಳ್ಳಲಾಗಿದೆ. 

ಮಹಿಮ್ನಃ ಪಾರಂ ತೇ ಪರಮವಿದುಷೋ ಯದ್ಯಸದೃಶೀ
ಸ್ತುತಿರ್ಬ್ರಹ್ಮಾದಿನಾಮಪಿ ತದವಸನ್ನಾಸ್ತ್ವಯಿ ಗಿರಃ |
ಅಥಾವಾಚ್ಯಃ ಸರ್ವಃ ಸ್ವಮತಿಪರಿಣಾಮಾವಧಿ ಗೃಣನ್
ಮಮಾಪ್ಯೇಷ ಸ್ತೋತ್ರೇ ಹರ ನಿರಪವಾದಃ ಪರಿಕರಃ ||

ನಿನ್ನ ಮಹಿಮೆಯ ಪರಮಪಾರಮಂ ತಿಳಿಯದೆನ್ನೀ ಸ್ತೋತ್ರವ್ಯಲ್ಪಮೆನೆ, ದೇವ,
ಬ್ರಹ್ಮಾದಿ ದೇವರ್ಕಳಾ ಸ್ತೋತ್ರಂಗಳುಂ ತಾಂ ಪೂರ್ಣತಾ ದೂರಮಲ್ತೆ?
ತಮ್ಮ ಮತಿಪರಿಣಾಮದಧಿಯಲಿ ನುತಿಗೆಯ್ವರಲ್ಲಿ ತಾಮಾಗೆ ನಿದೋಷಿಗಳ್
ನನ್ನ ಈ ಸ್ತೋತ್ರಪ್ರಯತ್ನಮುಂ, ಓ ಪರಮಗುರು, ಕೇಳ್, ತಾಮನಿಂದ್ಯಮಲ್ತೆ?

ಅತೀತಃ ಪಂಥಾನಂ ತವ ಚ ಮಹಿಮಾ ವಾಙ್ಮನಸಯೋರ್
ಅತದ್‌ವ್ಯಾವೃತ್ಯಾ ಯಂ ಚಕಿತಮಭಿದತ್ತೇ ಶ್ರುತಿರಪಿ |
ಸ ಕಸ್ಯ ಸ್ತೋತವ್ಯಃ ಕತಿವಿಧಗುಣಃ ಕಸ್ಯ ವಿಷಯಃ
ಪದೇ ತ್ವರ್ವಾಚೀನೇ ಪತತಿ ನ ಮನಃ ಕಸ್ಯನ ವಚಃ ||

ಮಹಿಮೆ ನಿನ್ನದು ವಾಙ್ಮನಾತೀತಮಾಗಿರ್ದೊಡಂ
ಶ್ರುತಿಗಳುಂ ಚಕಿತಹೃದಯದಿ ನೇತಿಯೆಂದಿರ್ದೊಡಂ
ಗುಣಕೆ ಗಡಿಯಿಲ್ಲ ನುಡಿಗೆಡೆಯಿಲ್ಲಮೆನೆ ಸೋಲ್ತಡಂ
ನಿನ್ನ ಅರ್ವಾಚೀನ ಪದಕೆರಗದಿರ್ಪ ವಾಙ್ಮನಗಳೊಳವೆ ಪೇಳ್?

ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ |
ರುಚಿನಾಂ ವೈಚಿತ್ರ್ಯಾದ್ ಋಜುಕುಟಿಲ ನಾನಾ ಪಥಜುಷಾಂ
ನೃಣಾಮೇಕೋ ಗಮ್ಯಸ್ತ್ವಮಸಿ ಪಯಸಾಮರ್ಣವ ಇವ ||

ವೇದತ್ರಯಂ ಸಾಂಖ್ಯಂ ಯೋಗಂ ಪಶುಪತಿಮತಂ ವೈಷ್ಣವಂ ಮೇಣ್
ಭಿನ್ನ ಭಿನ್ನ ಸ್ಥಾನದಿಂ ಪರಮದಂ ಪರಮಿದಂ ಪಥ್ಯಮೆಂಬರ್:
ರುಚಿಗಳೊಳ್ ವೈಚಿತ್ರ್ಯಿದಿಂ ಋಜುಕುಟಿಲ ನಾನಾಪಥಂಗಳಲ್ತೆ ಪೇಳ್?
ದಿಟದಿ ನೀನೊರ್ವನೆಯೆ ಗಮ್ಯನೈ, ಪೊಳೆಗಳ್ಗೆ ಪೆರ್ಗಡಲವೋಲ್ |

ನಮೋ ನೇದಿಷ್ಠಾಯ ಪ್ರಿಯದವ ದವಿಷ್ಠಾಯ ಚ ನಮೋ
ನಮಃ ಕ್ಷೋದಿಷ್ಠಾಯ ಸ್ಮರಹರ ಮಹಿಷ್ಠಾಯ ಚ ನಮಃ |
ನಮೋ ವರ್ಷಿಷ್ಠಾಯ ತ್ರಿನಯನ ಯವಿಷ್ಠಾಯ ಚ ನಮೋ
ನರ್ಮ ಸರ್ವಸ್ಮೈತೇ ತದಿದಮತಿಸರ್ವಾಯ ಚ ನಮಃ ||

ನಮೋ ಬಳಿಯಂಗೆ, ಪ್ರಿಯದವಗೆ ದೂರಂ ಮೇಣ್ ನಮೋ,
ಕಿರಿದರೊಳ್ ಕಿರಿಯಂಗೆ ನಮೋ, ಸ್ಮರಹರೆಗೆ ಪೆರ‍್ಮಂಗೆ ನಮೋ,
ಪಳೆಯ ಪಳೆಯಂಗೆ ನಮೋ, ನವೋನವತ್ರಿಯಂಗೆ ಮೇಣ್ ನಮೋ,
ಸರ್ವಮಾರ್ಪಂಗೆ ನಮೋ, ಮೇಣ್ ಸರ್ವಮುಂ ಮೀರ್ವಂಗೆ ನಮೋ ನಮಃ |

ಬಹುಲರಜಸೇ ವಿಶ್ವೋತ್ಪತ್ವೌ ಭವಾಯ ನಮೋ ನಮಃ
ಪ್ರಬಲತಮಸೇ ತತ್‌ಸುಹಾರೇ ಹರಾಯ ನಮೋ ನಮಃ |
ಜನಸುಖಕೃತೇ ಸತ್ತ್ವೋದ್ರಿಕ್ತೌ ಮೃಡಾಯ ನಮೋ ನಮಃ
ಪ್ರಮಹಸಿ ಪದೇ ನಿಸ್ತ್ರೈಗುಣ್ಯೇ ಶಿವಾಯ ನಮೋ ನಮಃ ||

ವಿಶ್ವೋತ್ಪತ್ತಿ ಬಹುಲ ರಜೋಮಯ ಭವರೂಪಗೆ ನಮೋ ನಮಃ
ತತ್ ಸಂಹಾರಕ್ಕೆ ಪ್ರಬಲತಮೋಮಯ ಹರರೂಪಗೆ ನಮೋ ನಮಃ
ಸತ್ತ್ವೋದ್ರಿಕ್ತಂ ತಾಂ ಜನಸುಖಕೃತ ಮೃಡರೂಪಗೆ ನಮೋ ನಮಃ
ನಿಸ್ತ್ರೈಗುಣ್ಯಂ ಪ್ರಮಹಸಿಪದಾ ಶಿವರೂಪಗೆ ನಮೋ ನಮಃ |

ಅಸಿತಗಿರಿಸಮಂ ಸ್ಯಾತ್ ಕಜ್ಜಲಂ ಸಿಂಧುಪಾತ್ರಂ
ಸುರತರುವರಶಾಖಾ ಲೇಖನೀ ಪತ್ರಮುರ್ವೀ |
ಲಿಖಿತ ಯದಿ ಗೃಹೀತ್ವಾ ಶಾರದಾ ಸರ್ವಕಾಲಂ
ತದಪಿ ತವ ಗುಣಾನಾಮೀಶ ಪಾರಂ ನ ಯಾತಿ ||

ಸಿಂಧುಪಾತ್ರದೊಳಸಿಗಿರಿ ಬರೆವ ಮಸಿಯಾದೊಡಂ,
ದೇವತರು ಶಾಖೆ ಲೇಖನಿಯಾದೊಡಂ.
ಪತ್ರಮಿಳೆಯಾಗಿ ಶಾರದ ಬರೆಯೆ ಸರ್ವಕಾಲಂ
ಗೋಚರವೆ ನಿನ್ನ ಗುಣಗಣದ ಪಾರಂ?

ತವ ತತ್ತ್ವಂನ ಜಾನಾಮಿ ಕೀದೃಶೋsಸಿ ಮಹೇಶ್ವರ |
ಯಾದೃಶೋsಸಿ ಮಹಾದೇವ ತಾದೃಶಾಯ ನಮೋ ನಮಃ ||

ನಿನ್ನ ತತ್ತ್ವವನರಿಯೆನೈ ನೀನೆಂತಿರುವೆಯೆಂದು. ಹೇ ಮಹೇಶ್ವರ! ಎಂತಿಹೆಯೊ, ಮಹಾದೇವ, ಅಂತಿಹಗೆ ನಮೋ ನಮಃ!

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.