ನಾವು ಕ್ಯಾರಿ ಮಾಡುತ್ತಿರುವುದು ಖೊಟ್ಟಿ ಎನ್ನುವುದನ್ನ ಮೊದಲು ನಾವು ಅರಿತುಕೊಳ್ಳಬೇಕು, ನಮ್ಮ ಬಳಿ ಇರುವುದು ಖೊಟ್ಟಿ ನಾಣ್ಯ. ಹೌದು ನಿಮಗೆ ದುಃಖವಾಗಬಹುದು, ಏನೋ ಕಳೆದುಕೊಂಡ ಭಾವ ನಿಮ್ಮನ್ನು ಕಾಡಬಹುದು. ಆದರೆ ಅದು ನಿಮ್ಮ ಬಳಿ ಮೊದಲು ಇರಲೇ ಇಲ್ಲವಲ್ಲ! ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ತಾವು ಅಂತಃಕರುಣಿಗಳು ಎಂದು ಜನ ತಿಳಿದುಕೊಂಡಿರುತ್ತಾರೆ. ಅಂತಃಕರಣ ಬಹಳ ಅಪರೂಪದ ಕ್ವಾಲಿಟಿ. ನಿಮಗೆ ಕರುಣೆ ಸಾಧ್ಯವಾಗಬಹುದು ಆದರೆ ಅಂತಃಕರಣ ಬಹಳ ಉನ್ನತ ಸಂಗತಿ. ಯಾವಾಗ ನೀವು ಅಂತಃಕರುಣಿಗಳಲ್ಲ ಎನ್ನುವುದು ನಿಮಗೆ ಗೊತ್ತಾಗುತ್ತದೆಯೋ ಆಗ ನೀವು ಅಂತಃಕರುಣಿಗಳಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಈಗ ನಿಮಗೆ ಯಾವುದು ನಿಜ ಯಾವುದು ನಿಜವಲ್ಲ ಎನ್ನುವುದನ್ನ ಸ್ಪಷ್ಚವಾಗಿ ಗುರುತಿಸುವುದು ಸಾಧ್ಯವಾಗುತ್ತಿಲ್ಲ. ಯಾವಾಗ ನಿಮ್ಮೊಳಗೆ ಸಮಗ್ರ ಪ್ರಜ್ಞೆ ಹುಟ್ಟಿಕೊಳ್ಳುತ್ತದೆಯೋ ಆಗ ಇದು ನಿಮಗೆ ಸಾಧ್ಯವಾಗಬಹುದು. ಬದುಕಿನಲ್ಲಿನ ಕೆಲ ಸಂಗತಿಗಳು ವಾಸ್ತವ, ಕೆಲವು ವಾಸ್ತವ ಅಲ್ಲ ಅಂತಲ್ಲ. ನೀವು ಈಗ ಇರುವ ಅಪ್ರಜ್ಞೆಯ ಸ್ಥಿತಿಯಲ್ಲಿ ನಿಮಗೆ ಎಲ್ಲವೂ ಕನಸಿನ ಹಾಗೆ ಅವಾಸ್ತವ, ಆದರೆ ಎಲ್ಲವೂ ವಾಸ್ತವದಂತೆ ಗೋಚರಿಸುತ್ತಿವೆ.
ನಿಮ್ಮ ಇನ್ನೊಂದು ಸ್ಥಿತಿಯಲ್ಲಿ, ನಿಮ್ಮೊಳಗೆ ಅರಿವು ಹುಟ್ಟಿಕೊಂಡಂಥ ಸ್ಥಿತಿಯಲ್ಲಿ, ನೀವು ಬುದ್ಧ ಆಗಿರುವ ಸ್ಥಿತಿಯಲ್ಲಿ, ಎಲ್ಲವೂ ನಿಮಗೆ ನೈಜ, ಎಲ್ಲವೂ ವಾಸ್ತವ, ಯಾವುದು ಮಿಥ್ಯೆಯಲ್ಲ. ಆದ್ದರಿಂದ ಕೆಲವು ಸಂಗತಿಗಳು ನಿಜ, ಕೆಲವು ನಿಜವಲ್ಲ ಎನ್ನುವ ಮಾತು ಸರಿಯಲ್ಲ. ಅಪ್ರಜ್ಞೆಯ ಸ್ಥಿತಿಯಲ್ಲಿ ನಿಮಗೆ ಎಲ್ಲವೂ ಮಿಥ್ಯೆ. ಅರಿವಿನ ಸ್ಥಿತಿಯಲ್ಲಿ ನಿಮಗೆ ಎಲ್ಲವೂ ಸತ್ಯ ಎಲ್ಲವೂ ವಾಸ್ತವ. ಆದರೆ ಪ್ರಜ್ಞೆಯ ಸ್ಥಿತಿಯಲ್ಲಿ ಮಾತ್ರ ಯಾವುದು ಮಿಥ್ಯೆ ಎನ್ನುವುದನ್ನ ನಿಮಗೆ ಕಂಡುಕೊಳ್ಳುವುದು ಸಾಧ್ಯ, ಅದಕ್ಕಿಂತ ಮೊದಲು ಅಲ್ಲ.
ಒಂದೂರಿನಲ್ಲಿ ಒಬ್ಬ ಭೋಳೆ ಮನುಷ್ಯ ಇದ್ದ. ಸಣ್ಣ ಅಂಗಡಿ ಇಟ್ಟುಕೊಂಡಿದ್ದ. ಸಣ್ಣ ಪುಟ್ಟ ಸಾಮಾನುಗಳನ್ನು ಮಾರಿ ಜೀವನ ನಡೆಸುತ್ತಿದ್ದ.
ಆ ಊರಿನ ಜನ ಅವನನ್ನು ಸಾಮಾನ್ಯ ಜ್ಞಾನ ಇಲ್ಲದ, ಲಾಭ ನಷ್ಟ ಗೊತ್ತಿಲ್ಲದ ಪೆದ್ದ ಎಂದು ತಿಳಿದುಕೊಂಡಿದ್ದರು. ಕೆಲವರು, ಕೊಂಡ ವಸ್ತುಗಳಿಗೆ ಬದಲಾಗಿ ಅವನಿಗೆ ಖೊಟ್ಟಿ ನಾಣ್ಯಗಳನ್ನು ಕೊಡುತ್ತಿದ್ದರು. ಕೆಲವರಂತೂ ದುಡ್ಡು ಕೊಟ್ಟು ಬಿಟ್ಟಿದ್ದೇವೆ ಎಂದು ಸುಳ್ಳು ಹೇಳಿ ಮೋಸ ಮಾಡುತ್ತಿದ್ದರು. ಆದರೆ ಈ ಮನುಷ್ಯ ಯಾರೊಂದಿಗೂ ಜಗಳ ಆಡುತ್ತಿರಲಿಲ್ಲ. “ ಆಯ್ತು ಬಿಡಿ” ಎಂದು ಸುಮ್ಮನಾಗಿ ಬಿಡುತ್ತಿದ್ದ.
ಇವನು ಹೀಗೆ ಎಂದು ಗೊತ್ತಾಗಿ ಬೇರೆ ಊರಿನ ಜನ ಕೂಡ ಇವನ ಅಂಗಡಿಗೆ ಬಂದು, ಸಾಮಾನು ಕಂಡು ಖೊಟ್ಟಿ ನಾಣ್ಯ ಕೊಟ್ಟು ಮೋಸ ಮಾಡುತ್ತಿದ್ದರು.
ಸಮಯ ಕಳೆದಂತೆ ಆ ಮನುಷ್ಯನಿಗೆ ವಯಸ್ಸಾಯಿತು. ಕೊನೆಗೊಂದು ದಿನ ಅವನು ಸಾಯುವ ದಿನ ಬಂದೇ ಬಿಟ್ಟಿತು. ಊರಿನ ಜನ ಅವನ ಸುತ್ತ ಸೇರಿದರು. ಸಾಯುವ ಮುನ್ನ ಅವನು ಕೊನೆಯದಾಗಿ ಮಾತಾಡಿದ,
“ ಓ ನನ್ನ ದೇವರೆ, ಯಾವಾಗಲೂ ನಾನು ಎಲ್ಲ ಥರದ ನಾಣ್ಯಗಳನ್ನೂ ಸ್ವೀಕರಿಸಿದೆ, ಖೊಟ್ಟಿ ನಾಣ್ಯಗಳನ್ನೂ ಎರಡು ಮಾತಿಲ್ಲದೆ ತೆಗೆದುಕೊಂಡೆ. ನಾನೂ ಒಂದು ಖೊಟ್ಟಿ ನಾಣ್ಯವೇ ನನ್ನನ್ನೂ ಪರೀಕ್ಷಿಸದೇ ಸ್ವೀಕರಿಸು. ನಾನು ನಿನ್ನ ಜನರ ಬಗ್ಗೆ ನ್ಯಾಯದ ಮಾತನಾಡಿಲ್ಲ, ನೀನೂ ನನ್ನ ಮೇಲೆ ನಿನ್ನ ನ್ಯಾಯ ಹೇರಬೇಡ. “

