ಕುಕುದ್ಮಿ ಎಂಬ ಅರಸನಿಗೆ ರೇವತಿ ಎಂಬ ಮಗಳಿರುತ್ತಾಳೆ. ರೂಪ ಗುಣಗಳಲ್ಲಿ ಅಪ್ರತಿಮಳಾದ ಆಕೆಯನ್ನು ಮದುವೆಯಾಗಲು ಬಯಸಿ ಸುತ್ತಲಿನ ಹಲವು ರಾಜಕುಮಾರರು ಒಕ್ಕಣೆ ಕಳುಹಿಸಿರುತ್ತಾರೆ. ಅವರೆಲ್ಲರೂ ಒಬ್ಬರಿಗಿಂತ ಒಬ್ಬರು ಶೂರರೂ ಧೀರರೂ ಸುಂದರರೂ ಆಗಿದ್ದು, ಸೂಕ್ತ ವರನ ಆಯಕೆಯಲ್ಲಿ ತಂದೆ ಮಗಳಿಬ್ಬರೂ ಸೋಲುತ್ತಾರೆ.
ಕುಕುದ್ಮಿಗೆ ತನ್ನ ಮಗಳ ಹಣೆಯಲ್ಲಿ ಯಾರ ಹೆಸರು ಬರೆಯಲಾಗಿದೆಯೋ ಆತನೇ ಮದುವೆಯಾಗುವನು. ಆದರೆ ಬ್ರಹ್ಮ ದೇವ ಯಾರನ್ನು ಆಕೆಯ ಪತಿಯನ್ನಾಗಿ ಬರೆದಿರಬಹುದು? ಎಂಬ ಕುತೂಹಲ ಉಂಟಾಗುತ್ತದೆ. ಸೂಕ್ತನಾದ ವರ ತಾನಾಗಿಯೇ ಬರುವವರೆಗೆ ಕಾಯುವುದಕ್ಕಿಂತ ಒಮ್ಮೆ ಬ್ರಹ್ಮನನ್ನೇ ಕೇಳಿಕೊಂಡು ಬರೋಣವೆಂದು ಮಗಳು ರೇವತಿಯನ್ನೂ ಕರೆದುಕೊಂಡು ಬ್ರಹ್ಮಲೋಕಕ್ಕೆ ಹೊರಡುತ್ತಾನೆ. ಕುಕುದ್ಮಿ ಒಬ್ಬ ಧರ್ಮಭೀರುವಾದ, ಮಹಾತ್ಮನಾದ ಅರಸ. ಬ್ರಹ್ಮ ಲೋಕ ಪ್ರವೇಶಕ್ಕೆ ಬೇಕಾದ ಅರ್ಹತೆಗಳಲ್ಲವೂ ಆತನಲ್ಲಿ ಇದ್ದುದರಿಂದ ಸುಲಭವಾಗಿ ಪ್ರವೇಶ ದೊರಕುತ್ತದೆ.
ತಂದೆ ಮಗಳಿಬ್ಬರೂ ಬ್ರಹ್ಮನೆದುರು ಕೈಮುಗಿದು ನಿಲ್ಲುತ್ತಾರೆ ಆ ಸಮಯದಲ್ಲಿ ಹಲವು ಗಂಧರ್ವರು ಅಲ್ಲಿ ಸಂಗೀತ ಸೇವೆ ನಡೆಸುತ್ತಿರುತ್ತಾರೆ. ಅದು ಮುಗಿಯುವವರೆಗೂ ಕಾದಿದ್ದು, ಅನಂತರ ಕುಕುದ್ಮಿಯು ಬ್ರಹ್ಮನಿಗೆ ತಾವು ಬಂದ ಕಾರಣವನ್ನು ತಿಳಿಸುತ್ತಾನೆ. ಅದನ್ನು ಕೇಳಿದ ಬ್ರಹ್ಮದೇವನು ಗಟ್ಟಿಯಾಗಿ ನಕ್ಕುಬಿಡುತ್ತಾನೆ. ಮತ್ತು ಕುಕುದ್ಮಿಯನ್ನು ಕುರಿತು, `ರಾಜನೇ! ನೀನು ಭೂಲೋಕವನ್ನು ತೊರೆದು 27 ಚತುರ್ಯುಗಗಳು ಕಳೆದಿವೆ. ಅಂದರೆ, 108 ಯುಗಗಳು ಸಂದುಹೋಗಿವೆ. ಈಗ ನೀನು ಭೂಮಿಗೆ ಮರಳಿದಾಗ ನಿನ್ನದೆನಿಸಿದ್ದ ರಾಜ್ಯ, ಪ್ರಜೆಗಳು, ಆಪ್ತೇಷ್ಟರು, ಅಷ್ಟೇ ಯಾಕೆ, ನಿನ್ನ ಮಗಳಿಗೆಂದು ನೀನು ನಿಕ್ಕಿ ಮಾಡಿಕೊಂಡಿರುವ ವರಗಳು – ಇವರ್ಯಾರೂ ಇರುವುದಿಲ್ಲ. ಅವರೆಲ್ಲ ನಶಿಸಿ, ಅವರ ತಲೆಮಾರುಗಳೂ ನಶಿಸಿ, ಯುಗಯುಗಗಳೇ ಬದಲಾಗಿಹೋಗಿವೆ.’ ಎನ್ನುತ್ತಾನೆ.
ಇದರಿಂದ ಕುಕುದ್ಮಿ ಹಾಗೂ ರೇವತಿಯರು ಗಾಬರಿಗೊಳ್ಳುತ್ತಾರೆ. ಅವರನ್ನು ಸಮಾಧಾನಿಸುವ ಬ್ರಹ್ಮ ದೇವ ಯದುಕುಲದ ಬಲರಾಮನಿಗೆ ರೇವತಿಯನ್ನು ಕೊಟ್ಟು ಮದುವೆಮಾಡುವಂತೆಯೂ ಅನಂತರ ಕುಕುದ್ಮಿಯು ವಾನಪ್ರಸ್ಥ ಸ್ವೀಕರಿಸುವಂತೆಯೂ ತಿಳಿಸುತ್ತಾನೆ.
ಅದರಂತೆ ಭೂಮಿಗೆ ಮರಳುವ ತಂದೆ ಮಗಳಿಬ್ಬರೂ ದ್ವಾರಕೆಗೆ ಬರುತ್ತಾರೆ. ಬಲರಾಮ ಸಂಭ್ರಮದಿಂದ ರೇವತಿಯನ್ನು ಮದುವೆಯಾಗುತ್ತಾನೆ.
(ಭಾಗವತ ಪುರಾಣದಲ್ಲಿನ ಒಂದು ಕಥೆ)
1 Comment