ಆಚಾರ್ಯ ನಾಗಾರ್ಜುನ ಮತ್ತು ಸಾಮ್ರಾಟ ಮಿಲಿಂದರ ನಡುವಿನ ಈ ಒಂದು ಸಂಭಾಷಣೆ ಬಹಳ ಪ್ರಸಿದ್ಧವಾದುದು. ಕಳಚಿನೋಡದೆ ಪೂರ್ಣವು ದಕ್ಕುವುದಿಲ್ಲ ಎಂಬುದನ್ನು ಈ ಸಂಭಾಷಣೆ ಮನದಟ್ಟು ಮಾಡುತ್ತದೆ.
ಸಾಮ್ರಾಟ ಮಿಲಿಂದ ತನ್ನ ಆಸ್ಥಾನಕ್ಕೆ ಬಂದ ನಾಗಾರ್ಜುನನ್ನು ಸ್ವಾಗತಿಸುತ್ತಾ, `ನಾಗಾರ್ಜುನನಿಗೆ ಸ್ವಾಗತ’ ಅನ್ನುತ್ತಾನೆ. ನಾಗಾರ್ಜುನ ನಗುತ್ತಾ `ಇಲ್ಲಿ ನಾಗಾರ್ಜುನ ಎಂಬುವವನಿಲ್ಲ!’ ಎಂದು ನಗುತ್ತಾನೆ.
ಅದನ್ನು ವಿವರಿಸುವಂತೆ ಸಾಮ್ರಾಟ ಕೇಳುತ್ತಾನೆ.
ನಾಗಾರ್ಜುನ ತಾನು ಬಂದ ರಥವನ್ನು ತೋರಿಸುತ್ತಾ ಕೇಳುತ್ತಾನೆ, `ಅದು ಏನು?’
`ರಥ’ ಎನ್ನುತ್ತಾನೆ ಸಾಮ್ರಾಟ.
ರಥದಿಂದ ಕುದುರೆಗಳನ್ನು ಬೇರ್ಪಡಿಸುವಂತೆ ಹೇಳಿದ ನಾಗಾರ್ಜುನ ಕೇಳುತ್ತಾನೆ, `ಈ ಕುದುರೆಗಳು ರಥವೇನು?’
`ಅಲ್ಲ….!’ ಸಾಮ್ರಾಟನ ಉತ್ತರ.
ನೊಗವನ್ನು ಕಳಚಲು ಹೇಳುವ ನಾಗಾರ್ಜುನ ಕೇಳುತ್ತಾನೆ, `ಈ ನೊಗವು ರಥವೇನು?’
ಮತ್ತೆ ಅಲ್ಲ ಎನ್ನುವ ಉತ್ತರವೇ ಬರುತ್ತದೆ.
ಹೀಗೆ ಒಂದೊಂದೇ ಭಾಗ ಕಳಚುತ್ತ ಕೇಳಿದಾಗ ಯಾವುದೂ ರಥವಲ್ಲವೆಂಬ ಉತ್ತರ ಬರುತ್ತದೆ ಸಾಮ್ರಾಟನಿಂದ. ಹೀಗೆ ಕಳಚುತ್ತ ಕಳಚುತ್ತ ಅಲ್ಲಿ ಏನೂ ಉಳಿಯುವುದಿಲ್ಲ. ವಾಸ್ತವದಲ್ಲಿ ಅಲ್ಲಿ ರಥವಿರಲಿಲ್ಲ. ಮೊದಲೂ ಇರಲಿಲ್ಲ, ಅನಂತರವೂ. `ರಥಕ್ಕೆ ತನ್ನದೆಂಬುದು ಏನೂ ಇಲ್ಲ. ಅದು ಹಲವು ವಸ್ತುಗಳ ಜೋಡಣೆಯಷ್ಟೆ . ಹಾಗೇ ಮನುಷ್ಯನೂ’ ಎಂದು ಬೋಧಿಸುತ್ತಾನೆ ನಾಗಾರ್ಜುನ.