ಒಂದು ದಿನ ಮುಲ್ಲಾ ನಸ್ರುದ್ದೀನ್ ಶ್ರೀಮಂತನೊಬ್ಬನ ಮನೆ ಎದುರು ಹಾದುಹೋಗುತ್ತಿದ್ದ. ಅವರ ಮನೆ ಚಾವಡಿಯಲ್ಲಿ ನೇತುಹಾಕಿದ್ದ ಚಿನ್ನದ ಪಂಜರದಲ್ಲಿ ಗಿಳಿಯೊಂದಿತ್ತು. ಅದು ಒಂದೇ ಸಮನೆ “ಸ್ವಾತಂತ್ರ್ಯ…. ಸ್ವಾತಂತ್ರ್ಯ” ಎಂದು ಕಿರುಚುತ್ತಿತ್ತು.
ಇದನ್ನು ಕೇಳಿಸ ನಸ್ರುದ್ದೀನ್, ಆ ಗಿಳಿ, “ಪಾಪ ಆ ಗಿಳಿಯನ್ನು ಬಿಟ್ಟುಬಿಡುತ್ತೇನೆ. ಅದು ಸ್ವಾತಂತ್ರ್ಯ ಬಯಸುತ್ತಿದೆ” ಎಂದು ಯೋಚಿಸಿದ. ಅತ್ತಿತ್ತ ನೋಡಿ, ಯಾರೂ ಇಲ್ಲದ್ದನ್ನು ಖಾತ್ರಿಪಡಿಸಿಕೊಂಡು ನಿಧಾನವಾಗಿ ಪಂಜರದ ಬಾಗಿಲು ತೆರೆದ. ಗಿಳಿ ತನ್ನ ಪಾಡಿಗೆ ತಾನು ಹಾರಿಹೋಗುತ್ತದೆ ಎಂದು ಕಾದುನಿಂತ.
ಆದರೆ ಆ ಗಿಳಿ ಪಂಜರದ ಸರಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು “ಸ್ವಾತಂತ್ರ್ಯ… ಸ್ವಾತಂತ್ರ್ಯ…” ಎಂದು ಕಿರುಚುವುದನ್ನು ಮುಂದುವರಿಸಿತು. ಅದನ್ನು ನೋಡಿ ನಸ್ರುದ್ದೀನ್ ಆಶ್ಚರ್ಯಚಕಿತನಾದ. ಅವನು ಆ ಗಿಳಿಯನ್ನು ಬಲವಂತವಾಗಿ ಹೊರಕ್ಕೆ ತೆಗದು ಅದನ್ನು ಹಾರಿಬಿಟ್ಟು ಹೇಳಿದ, “ಈಗ ನೀನು ನಿಜವಾಗಿ ಸ್ವತಂತ್ರವಾಗಿರುವೆ. ನಿನಗೆ ಬೇಕಾದಲ್ಲಿಗೆ ಹೋಗು.”
ಆ ಗಿಳಿ ಹಾರಿ ಅಲ್ಲಿಯೇ ಮರದ ಕೆಳಗಿನ ಕೊಂಬೆಯ ಮೇಲೆ ಕುಳಿತಿತು. ಇನ್ನೇನು ನಸ್ರುದ್ದೀನ್ ನಿಶ್ಚಿಂತನಾಗಿ ಹತ್ತು ಹೆಜ್ಜೆ ನಡೆದಿರಬೇಕು… ಆ ಗಿಳಿ ಪಂಜರದೊಳಕ್ಕೆ ಮರಳಿ ಬಂದು “ಸ್ವಾತಂತ್ರ್ಯ… ಸ್ವಾತಂತ್ರ್ಯ…” ಎಂದು ಕಿರುಚುವುದನ್ನು ಮುಂದುವರಿಸಿತು.