ಭಾರತೀಯ ಪುರಾಣ ಸರಣಿ ~ ದಶಾವತಾರದ ಕಥನಗಳು

ಅವತಾರಗಳ ಪೌರಾಣಿಕ ಕಥನಗಳು ಬಹುಶಃ ಪ್ರಾಚೀನದಲ್ಲಿ ನಡೆದ ಘಟನೆಗಳ ಉತ್ಪ್ರೇಕ್ಷಿತ ಕಥನಗಳೂ ಇರಬಹುದು. ಅಥವಾ ನಿರ್ದಿಷ್ಟ ಮೌಲ್ಯ ಅಥವಾ ಜ್ಞಾನವನ್ನು ಸಾರುವ ಸಂಕೇತಗಳೂ ಇರಬಹುದು. ಧರ್ಮಭೀರುಗಳ ಪಾಲಿಗೆ ಯಥಾವತ್ತಾಗಿ ನಡೆದಿರಬಹುದಾದ ಘಟನೆಗಳು ಅನ್ನುವುದಂತೂ ಸರಿಯೇ. ಈ ಕಥನಗಳು ಬೇರೆ ಯಾವ ಉದ್ದೇಶಗಳೂ ಇಲ್ಲದ ಶುದ್ಧ ಸಾಹಿತ್ಯವೂ ಇರಬಹುದು, ಸಂಪೂರ್ಣವಾಗಿ ಕವಿಕಲ್ಪಿತ ಘಟನೆಗಳಾಗಿಯೂ ಇರಬಹುದು. ಅದೇನೇ ಇದ್ದರೂ, ಯಾವುದೇ ಕಥನದ ಅರ್ಥ ಘಟಿಸುವುದು ನಮ್ಮೊಳಗೆ…. ~ ಅರಳಿಬಳಗ

ಗವಂತ ಯಾವಾಗ ಯಾವ ರೂಪ ಧರಿಸಿ ಬರುತ್ತಾನೋ ಗೊತ್ತಿಲ್ಲ. ಅಥವಾ ಹೀಗೂ ಹೇಳಬಹುದು; ನಾವು ಸಂಕಟದಲ್ಲಿ ಇರುವಾಗ ಯಾರು ಸಹಾಯಕ್ಕೆ ಧಾವಿಸುತ್ತಾರೋ ಅವರೇ ಭಗವತ್ ಸ್ವರೂಪರು. ಅಲ್ಲದೆ, ಸೃಷ್ಟಿಯ ಪ್ರತಿಯೊಂದು ಜೀವವೂ ಭಗವತ್ ಸ್ವರೂಪವೇ. ಸಮುದ್ರದ ಪ್ರತಿ ಹನಿಯಲ್ಲೂ ಅಗಾಧ ಕಡಲಿನ ಗುಣಲಕ್ಷಣಗಳು ಇರುವಂತೆ, ಪ್ರತಿ ಜೀವದಲ್ಲೂ ಭಗವಂತನಿದ್ದಾನೆ. ಆಯಾ ಜೀವದ ಕರ್ಮಾನುಸಾರ ಕೆಲವರಲ್ಲಿ ಪ್ರಕಟಗೊಳ್ಳುತ್ತಾನೆ. ಅದು ಮನುಷ್ಯ ಜೀವವೇ ಆಗಬೇಕಿಲ್ಲ… ಸೃಷ್ಟಿಯ ಯಾವ ಜೀವ ಬೇಕಾದರೂ ಆಗಬಹುದು. ಆದ್ದರಿಂದ, ಸಂಕಟಗಳನ್ನು ಪರಿಹರಿಸುವ ಪ್ರತಿಯೊಂದು ಪ್ರಾಣಿ/ಜೀವಿಯೂ (ಅದರೊಳಗಿನ ಭಗವಂತ ಪ್ರಕಟಗೊಳ್ಳುವುದರಿಂದ) ಭಗವಂತನ ಅವತಾರವೇ.

ಅವತಾರಗಳ ಪೌರಾಣಿಕ ಕಥನಗಳು ಬಹುಶಃ ಪ್ರಾಚೀನದಲ್ಲಿ ನಡೆದ ಘಟನೆಗಳ ಉತ್ಪ್ರೇಕ್ಷಿತ ನಿರೂಪಣೆಯಾಗಿರಬಹುದು. ಅಥವಾ ನಿರ್ದಿಷ್ಟ ಮೌಲ್ಯ ಅಥವಾ ಜ್ಞಾನವನ್ನು ಸಾರುವ ಸಂಕೇತಗಳೂ ಇರಬಹುದು. ಧರ್ಮಭೀರುಗಳ ಪಾಲಿಗೆ ಯಥಾವತ್ತಾಗಿ ನಡೆದಿರಬಹುದಾದ ಘಟನೆಗಳು ಅನ್ನುವುದಂತೂ ಸರಿಯೇ. ಈ ಕಥನಗಳು ಬೇರೆ ಯಾವ ಉದ್ದೇಶಗಳೂ ಇಲ್ಲದ ಶುದ್ಧ ಸಾಹಿತ್ಯವೂ ಇರಬಹುದು, ಸಂಪೂರ್ಣವಾಗಿ ಕವಿಕಲ್ಪಿತ ಘಟನೆಗಳಾಗಿಯೂ ಇರಬಹುದು.

ಅದೇನೇ ಇದ್ದರೂ, ಯಾವುದೇ ಕಥನದ ಅರ್ಥ ಘಟಿಸುವುದು ನಮ್ಮೊಳಗೆ. ಯಾರಾದರೂ ‘ಹೂವು’ ಅಂದಾಗ  ನಮ್ಮೊಳಗೆ ಕೇವಲ ಹೂವಿನ ಚಿತ್ರ ಮೂಡಬಹುದು; ಅಥವಾ ತಣ್ಣಗಿನ ಅಗ್ನಿಜ್ವಾಲೆಯನ್ನು ಕುರಿತು ಹೇಳುತ್ತಿದ್ದಾರೆ ಅನ್ನಿಸಬಹುದು. ಕೆಲವರಿಗೆ ಹೂವು ಅನ್ನುವುದು ಅಲ್ಪಕಾಲದಲ್ಲಿ ಜೀವನಚಕ್ರವನ್ನು ಸಂಕೇತಿಸುವ ಸಂಗತಿ ಎಂಬ ಅರ್ಥ ಹೊಳೆಯಬಹುದು. ಇನ್ನು ಕೆಲವರಿಗೆ ಹೂವು ಜಗತ್ತಿನ ವೃಕ್ಷಸಂಪತ್ತನ್ನು ಒಡಲಲ್ಲಿ ಇಟ್ಟುಕೊಂಡ ಜಗಜ್ಜನನಿ ಅನ್ನಿಸಬಹುದು. ಯಾರಿಗೆ ಯಾವುದು ಹೊಳೆಯುತ್ತದೆಯೋ ಅದನ್ನು ವಿವರಿಸುತ್ತಾರೆ. ಈ ಯಾವ ಚಿಂತನೆಯೂ ಸ್ವಲ್ಪವೂ ತಪ್ಪಾಗಿಲ್ಲ. ಹಾಗೆಯೇ, ಈ ಯಾವುದು ಕೂಡಾ ಆತ್ಯಂತಿಕ ಅರ್ಥವನ್ನೂ ಹೊಮ್ಮಿಸುವುದಿಲ್ಲ.

ಪುರಾಣ ಕಥನಗಳೂ ಹೀಗೆಯೇ. ಆದ್ದರಿಂದ, ಕಥನವನ್ನು ಕೇಳಬೇಕು, ಓದಬೇಕು… ನಮ್ಮನಮ್ಮ ಚಿಂತನಾ ಧಾರೆ, ಆಸಕ್ತಿ, ಗ್ರಹಿಕೆಗೆ ತಕ್ಕಂತೆ ಅರ್ಥ ಪಡೆಯಬೇಕು. ಯಾರಾದರೂ ಅದು ಸರಿಯಲ್ಲವೆಂದು ಖಂಡಿಸಿದರೆ, ಅದು ಕೂಡ ಒಂದು ಬಗೆಯ ಗ್ರಹಿಕೆ ಎಂದು ಅರಿತು ಸುಮ್ಮನಾಗಬೇಕು; ಹೊರತು, ಕೀಳರಿಮೆಯನ್ನಾಗಲೀ ಬೇಸರವನ್ನಾಗಲೀ ಮಾಡಿಕೊಳ್ಳಬಾರದು. ಹಾಗೂ ಕೋಪ, ದ್ವೇಷ, ಪ್ರತೀಕಾರ, ಧಿಕ್ಕಾರಗಳೇ ಮೊದಲಾದ ಪ್ರತಿಕ್ರಿಯೆ ತೋರಬಾರದು. ನಮಗೆ ಹೇಗೆ ತೋಚಿದ್ದನ್ನು ನೆಚ್ಚಿಕೊಳ್ಳುವ, ಪ್ರತಿಪಾದಿಸುವ ಹಕ್ಕು ಇದೆಯೋ, ಹಾಗೆಯೇ ಅವರಿಗೆ ಖಂಡಿಸುವ, ನಿರಾಕರಿಸುವ ಅಧಿಕಾರವೂ ಇರುತ್ತದೆ.

ನಾವು ನಂಬಿಕೊಳ್ಳುವ ಭರದಲ್ಲಿ ಹಲವು ತಪ್ಪುಗಳನ್ನು ಖಂಡಿತವಾಗಿಯೂ ಮಾಡುತ್ತೇವೆ. ಹಾಗೆಯೇ ಅವರೂ ಧಿಕ್ಕರಿಸುವ ಭರದಲ್ಲಿ ತಪ್ಪುಗಳನ್ನು ಮಾಡಿಯೇ ಇರುತ್ತಾರೆ. ಆದ್ದರಿಂದ, ನಮ್ಮ ನಮ್ಮ ದಾರಿಯ ನಡಿಗೆಯಷ್ಟೆ ನಮಗೆ ಮುಖ್ಯವಾಗಬೇಕು ಹೊರತು ಪ್ರತಿಕ್ರಿಯೆಗಳಲ್ಲಿ ಸಮಯ ವ್ಯರ್ಥ ಮಾಡುವುದು ಅರ್ಥಹೀನ. 

ಅದಿರಲಿ, ಈಗಿನ ಕಾಲಮಾನಕ್ಕೆ ಬೇಕಾಗಿ ಇಷ್ಟು ಹೇಳುವಂತಾಯಿತು. ಈಗ, ಅರಳಿಬಳಗ ಪುರಾಣ ಕಥನಗಳನ್ನು ಏಕೆ ಪ್ರಕಟಿಸುತ್ತಿದೆ? ಈ ಹಿಂದೆ ಗ್ರೀಕ್ ಪುರಾಣ ಕಥನ ಹಾಗೂ ಜಾಗತಿಕ ಸೃಷ್ಟಿ ಕಥನಗಳನ್ನು ಪ್ರಕಟಿಸಿತ್ತು. ಇವೆಲ್ಲದರ ಅಗತ್ಯ ಈಗ ಇದೆಯೇ?

ಬಳಗದ ಚಿಂತನೆಯ ಪ್ರಕಾರ, ಅಗತ್ಯವಿದೆ. ಮೊದಲ ಹಾಗೂ ಸರಳ ಉದ್ದೇಶ –  ಬೆರಗನ್ನು ಕಾಯ್ದುಕೊಳ್ಳುವುದು. ಎರಡನೆಯದು, ನಮ್ಮ ನೆಲದ ನುಡಿಗಟ್ಟುಗಳನ್ನು, ಸಾಂಪ್ರದಾಯಿಕ ನಂಬಿಕೆಗಳನ್ನು, ಜನಪದ ನಂಬಿಕೆಗಳ ಮೂಲವನ್ನು ಹಾಗೂ ಆಚರಣೆಗಳನ್ನು ಅರಿಯುವ ಪರಿಕರ ನೀಡುವುದು (ಈ ಹಿಂದೆ ನೂರಾರು ಇಂಥ ಪ್ರಯತ್ನಗಳಾಗಿವೆ. ಅರಳಿಬಳಗವು ನಡುವಿನ ಕೊಂಡಿಯಂಥ ಮತ್ತೊಂದು ಪ್ರಯತ್ನವನ್ನು ಮಾಡುತ್ತಿದೆಯಷ್ಟೆ). 

ಮತ್ತೆ ಅವತಾರಗಳಿಗೆ ಮರಳಿದರೆ, ಈ ಸಂಚಿಕೆಯಲ್ಲಿ ಅವತಾರಗಳ ವಿಧಗಳ ಬಗ್ಗೆ ಹೇಳುವ ಮೂಲಕ ಸರಣಿಯನ್ನು ಆರಂಭಿಸೋಣ.

ಪುರಾಣಗಳು ಮಹಾವಿಷ್ಣುವಿನ ಹಲವು ಅವತಾರಗಳ ಕುರಿತು ಹೇಳುತ್ತವೆ. ಪೂರ್ಣಾವತಾರ, ಅಂಶಾವತಾರ, ಛಾಯಾವತಾರ ಇತ್ಯಾದಿ ಪ್ರಭೇದಗಳೂ ಅದರಲ್ಲಿವೆ. ಮಹಾವಿಷ್ಣುವಿನ ಪೂರ್ಣಾವತಾರಗಳ ಸಂಖ್ಯೆ ಹತ್ತು. ಇವನ್ನು ಒಟ್ಟಾಗಿ ‘ದಶಾವತಾರ’ ಎನ್ನಲಾಗುತ್ತದೆ.

ಮತ್ಸ್ಯ, ಕೂರ್ಮ, ವರಾಹ, ಮೋಹಿನಿ*, ನರಸಿಂಹ, ವಾಮನ (ತ್ರಿವಿಕ್ರಮ), ರಾಮ, ಕೃಷ್ಣ, ಬುದ್ಧ ಹಾಗೂ ಕಲ್ಕಿ – ಇವೇ ಆ ದಶಾವತಾರಗಳು. ** 

ಚತುರ್’ಸನರು (ಸನಕ, ಸನಾತನ, ಸನಂದನ, ಸನತ್ ಕುಮಾರ), ನಾರದ, ನರ – ನಾರಾಯಣ, ಕಪಿಲ, ದತ್ತಾತ್ರೇಯ, ಯಜ್ಞ, ಋಷಭ, ಪೃಥು, ಧನ್ವಂತರಿ, ಹಯಗ್ರೀವ, ಪರಶುರಾಮ, ವ್ಯಾಸ – ಇವು ಮಹಾವಿಷ್ಣುವಿನ ಇನ್ನಿತರ ಅವತಾರಗಳು. **

ಮುಂದಿನ ಸಂಚಿಕೆಗಳಲ್ಲಿ ಒಂದೊಂದೇ ಅವತಾರದ ಕಥನವನ್ನು ನೋಡೋಣ…

( *ಮೋಹಿನಿ ಅವತಾರವನ್ನು ಪೂರ್ಣಾವತಾರಗಳಲ್ಲಿ ಪರಿಗಣಿಸಿದ ಉಲ್ಲೇಖ ಇಲ್ಲ. ಆದರೆ, ಮೋಹಿನಿ ಅವತಾರದ ಮಹತ್ವವನ್ನೂ ಸ್ತ್ರೀರೂಪದಲ್ಲಿ  ಭಗವಂತ ಅವತಾರ ತಾಳಿದ ಸನ್ನಿವೇಶವನ್ನೂ ಗಮನದಲ್ಲಿಟ್ಟುಕೊಂಡು, ಈ ಅವತಾರವೂ ಪೂರ್ಣಾವತಾರವೇ ಎಂದು ಭಾವಿಸುವ ಸ್ವಾತಂತ್ರ್ಯವನ್ನು ಲೇಖಕಿ ವಹಿಸಿದ್ದಾರೆ  | ** ಪಾಠಾಂತರಗಳಲ್ಲಿ ವ್ಯತ್ಯಾಸವಿದೆ   | *** ಪಾಠಾಂತರಗಳಲ್ಲಿ ದಶಾವತಾರಗಳಲ್ಲದೆ ಇನ್ನೂ 29 ಅವತಾರಗಳಿವೆ)

1 Comment

Leave a Reply