ಬಯಲಿಗೆ ಬಾಗಿಲಿಟ್ಟ ಕ್ಷಣ ಗೋಡೆಗಳು ಎದ್ದುನಿಲ್ತವೆ. ದಂಡೆತ್ತಿ ಹೋಗಬೇಕೆಂದೇನೂ ಇಲ್ಲ; ಬೇಲಿ ಕಟ್ಟಿಕೊಂಡ ಕ್ಷಣ ಶತ್ರುಗಳು ಹುಟ್ಟಿಕೊಳ್ತಾರೆ ~ ಅಲಾವಿಕಾ
ಬದುಕು ಬಯಲಿನಂತಿರಬೇಕು. ವಿಸ್ತಾರವೂ ವಿಶಾಲವೂ ಆಗಿದ್ದು ಎಲ್ಲರನ್ನೂ ತೆರೆದ ತೋಳುಗಳಿಂದ ಸ್ವಾಗತಿಸುವಂತೆ ಇರಬೇಕು. ಆದರೆ ನಾವು ನಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತೇವೆ. ನಮ್ಮ ಸ್ವಾರ್ಥಕ್ಕೆ ತಕ್ಕಂತೆ ಕೆಲವರಿಗಷ್ಟೆ ಪ್ರವೇಶ ಕೊಟ್ಟು ಬಾಗಿಲಿಡುತ್ತೇವೆ. ಹಾಗೆ ಬಾಗಿಲಿಟ್ಟಕೂಡಲೇ ಉಳಿದವರ ಪಾಲಿಗೆ ತಡೆ ಉಂಟಾಗುತ್ತದೆ. ಅದನ್ನೇ “ಗೋಡೆಗಳು ಎದ್ದುನಿಲ್ಲುತ್ತವೆ” ಅನ್ನುವುದು.
ನಾವು ಬಾಗಿಲಿಟ್ಟು ಗೋಡೆಗಳಿಗಷ್ಟೆ ಕಾರಣವಾಗುವುದಿಲ್ಲ, ಬೇಲಿಯನ್ನೂ ಕಟ್ಟಿಕೊಳ್ಳುತ್ತೇವೆ. ನಮ್ಮ ಜಾತಿ, ನನ್ನ ನೆಲ ಇತ್ಯಾದಿಯಾಗಿ ಗಡಿಗಳನ್ನು ಎಳೆಯುತ್ತೇವೆ. ಯಾವಾಗ ನಾವು ಗಡಿ ಎಳೆಯುತ್ತೇವೆಯೋ ಆಗ ಅದನ್ನು ಆಕ್ರಮಿಸಲೆಂದೇ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಹೀಗೆ ನಾವೇ ನಮ್ಮ ಪಾಲಿನ ಯುದ್ಧಕ್ಕೆ ಮುನ್ನುಡಿ ಬರೆದುಕೊಳ್ತೇವೆ, ಬದುಕಿನ ನೆಮ್ಮದಿ ಕಳೆದುಕೊಳ್ತೇವೆ.