ಎಲ್ಲ ಕೆಲಸವೂ ಹೂವೆತ್ತಿದಂತೆ ಹಗುರವಾಗಿರೋದು ಕಷ್ಟ; ಮಾನವರಾಗಿ ಹುಟ್ಟಿದ ಎಲ್ಲರಿಗೂ ಮನುಷ್ಯರಾಗೋದು ಕಷ್ಟ! ~ ಗಾಲಿಬ್
: ಸಾಕಿ
ಆಪತ್ತು ಎದುರಾಗುವಾಗ ಪ್ರತಿರೋಧ ಒಡ್ಡುವುದು ಪ್ರತಿಯೊಂದು ಜೀವಿಗಳ ಸಹಜ ಗುಣ. ಆದರೆ ಬುದ್ದಿವಂತ ಮಾನವ ಮಾತ್ರ ಇದಕ್ಕೆ ಸ್ವಲ್ಪ ಭಿನ್ನ. ಪ್ರತಿರೋಧ ಎಂಬ ಪ್ರಕೃತಿ ಸಹಜ ಗುಣವೇ ಆತನನ್ನು ಆಪತ್ತಿಗೆ ತಳ್ಳುತ್ತಿದೆ. ತನ್ನಿಂದಾದ ಒಂದು ಸಣ್ಣ ಪ್ರಮಾದವನ್ನು ಮುಚ್ಚಿ ಹಾಕಲು ಆತ ಇನ್ನಿಲ್ಲದ ಸಾಹಸಕ್ಕೆ ಇಳಿಯುತ್ತಾನೆ. ಮುಖವಾಡದ ಬದುಕು ಆತನೊಳಗಿನ ಮನುಷ್ಯತ್ವವನ್ನು ಕಿತ್ತುಕೊಂಡು ಬಿಡುತ್ತದೆ. ಆತ ಕ್ರೂರಿಯೂ ನಿರ್ದಯಿಯೂ ಆಗುತ್ತಾನೆ; ಕೇವಲ ತಾನು ಸುಭಗನೆಂದು ಸಾಬೀತು ಪಡಿಸುವ ಸಲುವಾಗಿ.
ಅದರೂ, ಅತ್ಯಂತ ಪ್ರೀತಿಪಾತ್ರರ ಮುಂದೆ ತಮ್ಮ ಒಳಗನ್ನು ತೆರೆದಿಡುವುದುಂಟು. ಇನ್ನು ಕೆಲವರು ತಮ್ಮ ಆತ್ಮಸಾಕ್ಷಿಯ ಮುಂದೆ ತಲೆಬಾಗುತ್ತಾರೆ. ಇಂದಿನಿಂದ ಮುಖವಾಡದ ಬದುಕಿಗೆ ಮರಳುವುದಿಲ್ಲ ಎಂದು ಮಾತು ಕೊಡುತ್ತಾರೆ. ಆದರೆ ಎಷ್ಟು ದಿನ ಅದು ನಮ್ಮಿಂದ ಸಾಧ್ಯವಾಗುತ್ತದೆ. ಇಂತಹ ಕೆಲಸಗಳು ಅದೆಷ್ಟು ಕಷ್ಟವೆಂದರೆ ಮಾತು ಕೊಟ್ಟ ಮರುದಿನವೇ ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದಿರುತ್ತೇವೆ. ಮತ್ತೆ ಮತ್ತೆ ಆತ್ಮಘಾತುಕತನದ ಕೆಲಸದಲ್ಲಿ ತೊಡಗಿರುತ್ತೇವೆ. ಇದು ಮನುಷ್ಯನ ಸಹಜ ಗುಣ ಅಲ್ಲವೇ ಅಲ್ಲ. ಅದರೂ ಯಾಕೆ ಹೀಗೆ?
ಗಾಲಿಬ್ ತನ್ನ ಗಝಲೊಂದರಲ್ಲಿ ಹೇಳುತ್ತಾನೆ “ಎಲ್ಲ ಕೆಲಸವೂ ಹೂವೆತ್ತಿದಂತೆ ಹಗುರವಾಗಿರೋದು ಕಷ್ಟ, ಮಾನವರಾಗಿ ಹುಟ್ಟಿದ ಎಲ್ಲರಿಗೂ ಮನುಷ್ಯರಾಗೋದು ಕಷ್ಟ!” ಎಂದು. ಈ ಕಷ್ಟವನ್ನು ದಾಟಿದವರು ತಮ್ಮ ಹೃದಯದಾಳದ ಪ್ರೇಮದ ಬೆಳಕನ್ನು ಕಾಣುತ್ತಾರೆ. ಮನುಷ್ಯನಾಗುವುದು ಎಂದರೆ ಮಮತೆ, ಕರುಣೆ, ಪರಾನುಭೂತಿ ಇವೇ ಮೊದಲಾದ ಮಾನವೀಯ ಗುಣಗಳನ್ನು ಹೊಂದುವುದು. ಒಂದೇ ಮಾತಲ್ಲಿ ಹೇಳುವುದಾದರೆ ಮನುಷ್ಯ ಪ್ರೇಮಿಯಾಗುವುದು. ಹಾಗಾಗಿ ಲೋಕದ ಮುಂದೆ ಸಮರ್ಥನೆಗೆ ನಿಲ್ಲದೆ ಮನುಷ್ಯರಾಗಿ ಬಾಳೋಣ.