ಚಿಕ್ಕದೊಂದು ಕದಲುವಿಕೆ ಸಾಕು, ಬಿಂಬ ಕನ್ನಡಿಯಾಚೆ ಹೋಗಲು ~ ಅಲಾವಿಕಾ
ಎಲ್ಲ ಸುಖ ದುಃಖಗಳೂ, ಎಲ್ಲ ಘಟನೆಗಳೂ ಕನ್ನಡಿ ಮೇಲಿನ ಬಿಂಬಗಳಷ್ಟೆ.
ಯಾವುದೂ ಶಾಶ್ವತವಲ್ಲ. ಪ್ರತಿಯೊಂದೂ ತಾತ್ಕಾಲಿಕ, ಕನ್ನಡಿ ಮೇಲಿನ ಪ್ರತಿಬಿಂಬದಂತೆ.
ನಾವು ಅವನ್ನು ಶಾಶ್ವತ ಚಿತ್ರಗಳಂತೆ ಚಿತ್ತ ಭಿತ್ತಿಯ ಮೇಲೆ ತೂಗಿ ಹಾಕಿಕೊಳ್ಳುತ್ತೇವೆ. ಬಂದೊದಗಿದ ದುಃಖ ಶಾಶ್ವತವೋ ಎಂಬಂತೆ ಯಾತನೆ ಪಡುತ್ತೇವೆ. ಸುಖ ಶಾಶ್ವತವೋ ಎಂಬಂತೆ ಮೆರೆದಾಡುತ್ತೇವೆ. ಅಧಿಕಾರ ಶಾಶ್ವತ ಅನಿಸಿಬಿಟ್ಟರೆ, ಅದರ ದುರ್ಬಳಕೆ ಮಾಡುತ್ತೇವೆ. ಅವೆಲ್ಲ ಅದೆಷ್ಟು ಅಳ್ಳಕ ಎಂಬುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ನಾವು ಅವೆಲ್ಲದರ ಯೋಚನೆಯನ್ನೇ ಮಾಡುವುದಿಲ್ಲ.
ಮೂಲ ವಸ್ತು ಒಂದಿಷ್ಟು ಕದಲಿದರೂ ಸಾಕು, ಬಿಂಬ ಕನ್ನಡಿಯಾಚೆ ಹೊರಟು ಹೋಗುತ್ತದೆ. ನಮ್ಮ ಸುಖ ದುಃಖಗಳು, ನೋವು ನಲಿವುಗಳು ಕ್ಷಣಮಾತ್ರದ ಕದಲುವಿಕೆಯಿಂದ ಇಲ್ಲವಾಗಿಬಿಡುತ್ತವೆ.
ಇದನ್ನು ಮನದಟ್ಟು ಮಾಡಿಕೊಂಡರೆ ಮಾತ್ರ, ವರ್ತಮಾನದ ಬದುಕನ್ನು ಮೌಲಿಕವಾಗಿ ವಿನಿಯೋಗಿಸಲು ಸಾಧ್ಯ.