ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಹಳೆಯ ಜಪಾನಿನಲ್ಲಿ, ಬಿದಿರು ಮತ್ತು ಕಾಗದಗಳಿಂದ ಕಂದೀಲುಗಳನ್ನು ತಯಾರಿಸಿ, ಅದರಲ್ಲಿ ಮೇಣದ ಬತ್ತಿ ಇಟ್ಟು ಉಪಯೋಗಿಸುತ್ತಿದ್ದರು.
ಕುರುಡನೊಬ್ಬ ತನ್ನ ಗೆಳೆಯನ ಮನೆಗೆ ಬಂದಿದ್ದ. ರಾತ್ರಿ ಅವ ವಾಪಸ್ ಹೋಗುವಾಗ, ಗೆಳೆಯ ಅವನಿಗೆ ದಾರಿಯಲ್ಲಿ ಬಳಸಲು ಒಂದು ಕಂದೀಲು ಕೊಟ್ಟ.
ಕುರುಡ : ನನಗೇಕೆ ಕಂದೀಲು? ಮೊದಲೇ ನನಗೆ ಕಣ್ಣು ಕಾಣಿಸುವುದಿಲ್ಲ. ಕತ್ತಲು, ಬೆಳಕು ಎಲ್ಲ ಒಂದೇ ನನಗೆ.
ಗೆಳೆಯ : ಗೊತ್ತು ನನಗೆ, ದಾರಿ ತೋರಿಸಲು ನಿನಗೆ ಕಂದೀಲು ಬೇಕಿಲ್ಲ. ಆದರೆ ಕಂದೀಲು ನಿನ್ನ ಹತ್ತಿರ ಇರದೇ ಹೋದರೆ, ದಾರಿಹೋಕರು ನಿನಗೆ ಡಿಕ್ಕಿ ಹೊಡೆಯಬಹುದು. ನಿನ್ನ ಜೊತೆ ಈ ಕಂದೀಲು ಇರಲಿ.
ಕುರುಡ ಕಂದೀಲು ಹಿಡಿದುಕೊಂಡು ರಸ್ತೆಯಲ್ಲಿ ನಡೆಯತೊಡಗಿದ. ಕತ್ತಲೆಯಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ, ಒಬ್ಬ ದಾರಿಹೋಕ ಕುರುಡನಿಗೆ ಡಿಕ್ಕಿ ಹೊಡೆದ.
ಯಾಕೆ ದಾರಿ ಕಾಣುವುದಿಲ್ಲವೆ? ನನ್ನ ಕೈಯಲ್ಲಿರುವ ಕಂದೀಲಿನ ಬೆಳಕು ಕಾಣುವುದಿಲ್ಲವೆ? ಕುರುಡ ಚೀರಿದ.
ನಿನ್ನ ಕೈಯಲ್ಲಿರುವ ಕಂದೀಲು ಆರಿ ಹೋಗಿದೆ ಗೆಳೆಯ, ದಾರಿಹೋಕ ಉತ್ತರಿಸಿದ.
ಒಂದು ಝೆನ್ ಕೊಯಾನ್
ಒಂದು ಝೆನ್ ಆಶ್ರಮದಲ್ಲಿ ಮಾಳಿಗೆ ಸೋರುತ್ತಿತ್ತು. ಮಾಸ್ಟರ್ ತನ್ನ ಶಿಷ್ಯರಿಬ್ಬರಿಗೆ, ನೀರು ಹಿಡಿಯಲು ಏನಾದರೂ ತರಲು ಹೇಳಿದರು.
ಒಬ್ಬ ಶಿಷ್ಯ ಬಕೆಟ್ ತಂದ, ಇನ್ನೊಬ್ಬ ಬಾಸ್ಕೇಟ್.
ಬಕೆಟ್ ತಂದವನನ್ನು ಶಿಕ್ಷೆಗೆ ಗುರಿಪಡಿಸಲಾಯಿತು.
ಬಾಸ್ಕೇಟ್ ತಂದವನಿಗೆ ಬಹುಮಾನ ಕೊಡಲಾಯಿತು.