ದಶನಾಮಿ ಪದ್ಧತಿ| ಸನಾತನ ಸಾಹಿತ್ಯ ~ ಮೂಲಪಾಠಗಳು #45

ಸನ್ಯಾಸದಲ್ಲಿ ನಾಲ್ಕು ವಿಧಗಳು. ಕುಟಿಚಕ, ಬಹುಚಕ, ಹಂಸ ಮತ್ತು ಪರಮಹಂಸ. ಶಂಕರಾಚಾರ್ಯರು ದಶನಾಮಿ ಪದ್ಧತಿಯನ್ನು ಪರಿಚಯಿಸಿದರು.

Sanyasi1.ತೀರ್ಥ  2.ಆಶ್ರಮ  3.ವನ  4.ಅರಣ್ಯ  5. ಗಿರಿ 6.ಪರ್ವತ 7ಸಾಗರ 8.ಸರಸ್ವತಿ 9.ಭಾರತೀ ಮತ್ತು 10. ಪುರೀ – ಇವು ಸಂನ್ಯಾಸ ಪರಂಪರೆಯ ಹತ್ತು ಉಪಾಧಿಗಳು. 

ಈ ದಶನಾಮಗಳನ್ನು ಯಾರಿಗೆ ನೀಡಲಾಗುತ್ತದೆ ಅನ್ನುವ ಕಿರು ವಿವರ ಮುಂದಿದೆ :

ಭಾರತೀ ನಾಮ ವಿದ್ಯಾಭಾರೇಣ ಸಂಪೂರ್ಣಃ ಸರ್ವಭಾರಂ ಪರಿತ್ಯಜೇತ್ |
ದುಃಖ ಭಾರಂ ನ ಜಾನತಿ ಭಾರತೀ ಪರಿಕೀರ್ತಿತಃ ||

ಯಾವ ವ್ಯಕ್ತಿಯು ವಿದ್ಯೆಯ ಭಾರದಿಂದ ಪರಿಪೂರ್ಣನಾಗಿ, ಪ್ರಪಂಚದ ಸಮಸ್ತ ಭಾರಗಳನ್ನೂ ತ್ಯಜಿಸುತ್ತಾರೋ; ಮತ್ತು ದುಃಖದ ಭಾರವನ್ನು ತಿಳಿದಿರುವುದಿಲ್ಲವೋ ಅವರಿಗೆ ‘ಭಾರತೀ’ ಎಂಬ ಉಪಾಧಿ ನೀಡಲಾಗುತ್ತದೆ.

ಸರಸ್ವತೀ ನಾಮ ಸ್ವರಜ್ಞಾನ ವಶೋ ನಿತ್ಯಂ ಸ್ವರವಾದೀ ಕಿವೀಶ್ವರಃ |
ಸಂಸಾರ ಸಾಗರೇ ಸಾರಾಭಿಜ್ಞೋ ಯಃ ಸಃ ಸರಸ್ವತೀ ||

ಯಾರು ಸ್ವರದ ಜ್ಞಾನ ಹೊಂದಿದ್ದು, ಸಕಲ ವೇದಗಳ ಸ್ವರಗಳನ್ನು ಸಂಪೂರ್ಣವಾಗಿ ತಿಳಿದಿರುತ್ತಾರೋ; ಮತ್ತು ಸಂಸಾರದ ಸತ್ವ ಪರೀಕ್ಷೆಯನ್ನು ಮಾಡುತ್ತಾರೋ ಅವರ ಪದವಿಯನ್ನು ‘ಸರಸ್ವತೀ’ ಎಂದು ಕರೆಯುತ್ತಾರೆ.

ತೀರ್ಥ ನಾಮ ತ್ರಿವೇಣೀ ಸಂಗಮೇ ತೀರ್ಥೇ ತತ್ವಮಸ್ಯಾದಿ ಲಕ್ಷಣೇ|
ಸ್ನಾಯತ್ ತತ್ವಾರ್ಥ ಭಾವೇನ ತೀರ್ಥ ನಾಮಾ ಸ ಉಚ್ಯತೇ||

ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಶಿವೋಹಮ್ ಜ್ಞಾನಗಳ ತ್ರಿವೇಣೀ ಸಂಗಮ. ಆ ಸಂಗಮರೂಪವಾದ ತೀರ್ಥದಲ್ಲಿ ತತ್ತ್ವಾರ್ಥವನ್ನು ತಿಳಿಯಬೇಕೆಂಬ ಅಪೆಕ್ಷೇಯಿಂದ ಯಾವ ವ್ಯಕ್ತಿಯು ಸ್ನಾನ ಮಾಡುತ್ತಾರೋ ಅವರು ತೀರ್ಥ ಎಂಬ ಹೆಸರಿಂದ ಕರೆಯಲ್ಪಡುತ್ತಾರೆ.

ಆಶ್ರಮ ನಾಮ ಆಶ್ರಮ ಗ್ರಹಣೀ ಪ್ರೌಢಃ ಆಶಾಪಾಶ ವಿವರ್ಜಿತಃ |
ಯಾತಾಯಾತ ವಿನಿರ್ಮುಕ್ತ ಏತದಾಶ್ರಮ ಲಕ್ಷಣ ||

ಯಾವ ವ್ಯಕ್ತಿಯು ಹೃದಯದಿಂದ ಆಸೆ, ಮಮತೆ, ಮೋಹ… ಇತ್ಯಾದಿ ಬಂಧನಗಳು ಸಂಪೂರ್ಣವಾಗಿ ನಾಶವಾಗಿರುತ್ತವೋ, ಆಶ್ರಮದ ನಿಯಮಗಳನ್ನು ಧರಿಸಲು ದೃಢಮನಸ್ಕನಾಗಿರುತ್ತಾರೋ ಮತ್ತು ಸಂಪೂರ್ಣ ವಿರಕ್ತನಾಗಿರುತ್ತಾರೋ ಅವರಿಗೆ ‘ಆಶ್ರಮ’ ಎಂಬ ಉಪಾಧಿ.

ವನ ನಾಮ ದೀಕ್ಷೆ ಸುರಮ್ಯನಿರ್ಜನೇದೇಶೇ ವಾಸಂ ನಿತ್ಯಂ ಕರೋತಿ ಯಃ|
ಆಶಾಪಾಶ ವಿನಿರ್ಮುಕ್ತೋ ವನ ನಾಮ ಸ ಉಚ್ಯತೇ||

ಯಾವ ಮನುಷ್ಯನು ಸುಂದರವಾದ, ಶಾಂತವಾದ ಮತ್ತು ನಿರ್ಜನವಾದ ವನದಲ್ಲಿ ವಾಸ ಮಾಡುತ್ತಾ, ಪ್ರಪಂಚದ ಬಂಧನಗಳಿಂದ ಸಂಪೂರ್ಣವಾಗಿ ವಿಮುಕ್ತರಾಗಿರುತ್ತಾನೋ ಅವರ ಹೆಸರು ‘ವನ’ ಎಂದು.

ಅರಣ್ಯ ನಾಮ ಅರಣ್ಯೇ ಸಂಸ್ಥಿತೋ ನಿತ್ಯ ಆನಂದಂ ನಂದನೇವನೇ|
ತ್ವಕ್ತಾ ಸರ್ವಮಿದಂ ವಿಶ್ವಂ ಅರಣ್ಯಂ ಲಕ್ಷಣಂ ಕಿಲ ||

ಯಾರು ಪ್ರಪಂಚವನ್ನು ತ್ಯಜಿಸಿ ಅರಣ್ಯದಲ್ಲಿ ವಾಸಮಾಡುತ್ತಾ (ನಂದನವನದಲ್ಲಿ ವಾಸಮಾಡುತ್ತಾ) ಆನಂದವನ್ನು ಸರ್ವದಾ ಅನುಭವಿಸುತ್ತಲಿರುತ್ತಾರೋ ಅವರಿಗೆ ‘ಅರಣ್ಯ’ ಎಂದು ಹೆಸರು.

ಗಿರಿ ನಾಮ ವಾಸೋ ಗಿರಿವರೇ ನಿತ್ಯಂ ಗೀತಾಭ್ಯಾಸೇ ಹಿ ತತ್ಪರಃ |
ಗಂಭೀರಾಚಲ ಬುದ್ಧೆಶ್ಚ ಗಿರಿ ನಾಮ ಸ ಉಚ್ಯತೇ ||

ಯಾರು ಗೀತಾಭ್ಯಾಸದಲ್ಲಿ ತತ್ಪರರಾಗಿ, ಎತ್ತರವಾದ ಪರ್ವತಗಳ ಶಿಖರಗಳ ಮೇಲೆ ವಾಸಮಾಡುತ್ತಾ, ಗಂಭೀರವಾದ ಮತ್ತು ನಿಶ್ಚಿತವಾದ ಬುದ್ಧಿಯನ್ನು ಹೊಂದಿರುತ್ತಾರೋ ಅವರಿಗೆ ‘ಗಿರಿ’ ಎಂದು ಹೆಸರು.

ಪರ್ವತ ನಾಮ ವಸೇತ್ಪರ್ವತ ಮೂಲೇಷು ಪ್ರೌಢೋ ಯೋ ಧ್ಯಾನತತ್ಪರಃ |
ಸಾರಾಸಾರಂ ವಿಚಾನಾತಿ ಪರ್ವತಃ ಪರಿಕೀರ್ತೀತಃ ||

ಸಮಾಧಿಸ್ಥರಾಗಿ ಯಾರು ಪರ್ವತಗಳ ತಪ್ಪಲು ಪ್ರದೇಸಗಳಲ್ಲಿ ವಾಸಮಾಡುತ್ತಾ, ಸತ್ಯಾಸತ್ಯಗಳ ಜ್ಞಾನ ಹೊಂದಿರುತ್ತಾರೋ ಅವರಿಗೆ ‘ಪರ್ವತ’ ಎಂದು ಹೆಸರು.

ಸಾಗರ ನಾಮ ವಸೇತ್ಸಾಗರ ಗಂಭಿರೇ ಘನ ರತ್ನ ಪರಿಗ್ರಹಃ |
ಮರ್ಯಾದದಶ್ಚಾನ ಲಂಘ್ಯೇತ ಸ ಸಾಗರಃ ಪರಿಕೀರ್ತಿತಃ ||

ಸಮುದ್ರದ ಸಮೀಪದಲ್ಲಿ ವಾಸ ಮಾಡುತ್ತಾ ಯಾರು ಅಧ್ಯಾತ್ಮ ಶಾಸ್ತ್ರದ ಉಪದೇಶ ಗ್ರಹಣ ಮಾಡುತ್ತಾರೋ ಮತ್ತು ಆಶ್ರಮ ನಿಯಮಗಳನ್ನು ಸ್ವಲ್ಪವೂ ಉಲ್ಲಂಘಿಸುವುದಿಲ್ಲವೋ ಅವರು ಸಮುದ್ರಕ್ಕೆ ಸಮಾನರಾದುದರಿಂದ ‘ಸಾಗರ’ ಎಂದು ಕರೆಯಲ್ಪಡುತ್ತಾರೆ.

ಪುರೀ ನಾಮ ಜ್ಞಾನ ತತ್ತ್ವೇನ ಸಂಪೂರ್ಣಃ ಪೂರ್ಣ ತತ್ತ್ವೇ ಪದೇ ಸ್ಥಿತಃ |
ಪರಬ್ರಹ್ಮರತೋ ನಿತ್ಯಂ ಪುರೀ ನಾಮ ಸ ಉಚ್ಯತೇ ||

‘ಪುರೀ’ ಎಂದರೆ ತತ್ವಜ್ಞಾನದಿಂದ ಪೂರ್ಣನಾಗಿರುವುದು, ಪೂರ್ಣಪದಗಳಲ್ಲಿ ಸ್ಥಿತನಾಗಿರುವುದು, ಪರಬ್ರಹ್ಮ ಚಿಂತನೆಯಲ್ಲಿ ನಿರತನಾಗಿರುವುದು. ಈ ರೀತಿ ನಿರತರಾಗಿರುವ ಸನ್ಯಾಸಿಗಳು ‘ಪುರೀ’ ಎಂಬ ಪದವಿಗೆ ಅಧಿಕಾರಿಯಾಗುತ್ತಾರೆ.

Leave a Reply