ಒಂದು ದಿನ ಮುಲ್ಲಾ ನಸ್ರುದ್ದೀನ ಬೆಲೆ ಬಾಳುವ ಜರಿ ರುಮಾಲು ಸುತ್ತಿಕೊಂಡು ಸುಲ್ತಾನನ ರಾಜ್ಯ ಸಭೆಗೆ ಬಂದ. ಅವನನ್ನು ನೋಡಿದ ಕೂಡಲೇ ಸುಲ್ತಾನ, ಮುಲ್ಲಾ ಸುತ್ತಿಕೊಂಡಿದ್ದ ರುಮಾಲಿನ ಬಗ್ಗೆ ಅವನನ್ನು ವಿಚಾರಿಸಿದ.
“ಸುಲ್ತಾನರೇ, ಇದು ವಿಶೇಷವಾಗಿ ತಯಾರಿಸಲಾದ ರುಮಾಲು, 1000 ಬಂಗಾರದ ದಿನಾರು ಕೊಟ್ಟು ಕೊಂಡು ಕೊಂಡೆ” ಮುಲ್ಲಾ ಉತ್ತರಿಸಿದ.
“ 000 ಬಂಗಾರದ ದಿನಾರುಗಳ ? ಸಾಧ್ಯವೇ ಇಲ್ಲ” ಸುಲ್ತಾನ ಆಶ್ಚರ್ಯಚಕಿತನಾದ.
“ಆ ರುಮಾಲು ಮಾರುವವನಿಗೆ ನಾನೂ ಹಾಗೇ ಹೇಳಿದೆ ಸುಲ್ತಾನರೆ! ಆದರೆ ಅವ, ನಿಮ್ಮ ಸುಲ್ತಾನರನ್ನು ಹೋಗಿ ಕೇಳು, ಅವರಿಗೆ ಮಾತ್ರ ಈ ರುಮಾಲಿನ ವಿಶೇಷತೆ ಮತ್ತು ಸರಿಯಾದ ಬೆಲೆ ಗೊತ್ತು. ಸುಲ್ತಾನರಾಗಿದ್ದರೆ 2000 ಬಂಗಾರದ ದಿನಾರು ಕೊಡುತ್ತಿದರು ಎಂದ”
ಮುಲ್ಲಾ ಸಮಜಾಯಿಶಿ ಕೊಟ್ಟ.
ಸುಲ್ತಾನ ಕೂಡಲೆ ತನ್ನ ಖಜಾನೆಯವರಿಗೆ ಹೇಳಿ ಮುಲ್ಲಾನಿಗೆ 2000 ಬಂಗಾರದ ದಿನಾರು ಕೊಟ್ಟು ಆ ರುಮಾಲು ಖರೀದಿಸಿದ.
ಸಭೆ ಮುಗಿದ ಮೇಲೆ ನಸ್ರುದ್ದೀನ ಹೊರಗೆ ಬಂದು ರಾಜಸಭೆಯಲ್ಲಿದ್ದ ಜನರಿಗೆ ಹೇಳಿದ.
“ನನಗೆ ರುಮಾಲಿನ ಬೆಲೆ ಕಟ್ಟುವುದು ಗೊತ್ತಿಲ್ಲದಿರಬಹುದು ಆದರೆ ಸುಲ್ತಾನನ ಸ್ವಾಭಿಮಾನಕ್ಕೆ ಬೆಲೆ ಕಟ್ಟುವುದು ಚೆನ್ನಾಗಿ ಗೊತ್ತು”
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)