ಧ್ಯಾನ, ಮರಣ ಇತ್ಯಾದಿ ಕುರಿತು ಶ್ರೀ ರಮಣರ ಚಿಂತನೆ

RAMANAಕಾಕಿನಾಡದಿಂದ ಬಂದ ಅನುಯಾಯಿಯೊಬ್ಬರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರ ಇಲ್ಲಿದೆ:

ಪ್ರಶ್ನೆ : ನನ್ನ ಮನಸ್ಸು ಮೂರು ನಾಲ್ಕು ದಿನ ಉಲ್ಲಸಿತವಾಗಿರುತ್ತದೆ. ಆಮೇಲೆ ಒಂದಷ್ಟು ದಿನ ಮಂಕಾಗಿಬಿಡುತ್ತದೆ. ಯಾಕೆ ಹೀಗೆ?
ರಮಣ ಮಹರ್ಷಿ: ಅದು ಸ್ವಾಭಾವಿಕ. ಸತ್ವ ಗುಣದ ಆಟ; ರಜ – ತಮೋಗುಣಗಳ ವಿಲಾಸ. ನೀವು ತಮೋಗುಣದ ಬಗ್ಗೆ ಚಿಂತಿಸಲು ಹೋಗಬೇಡಿ. ಆದರೆ, ಸತ್ವಗುಣ ಪ್ರಬಲವಾಗಿದ್ದಾಗ ಅದನ್ನು ಬಲವಾಗಿ ಹಿಡಿದಿಟ್ಟುಕೊಳ್ಳಿ. ಅದು ಬಲವಾಗಿದ್ದರೆ ಉಳಿದ ಗುಣಗಳದ್ದೇನೂ ನಡೆಯುವುದಿಲ್ಲ.

ಪ್ರಶ್ನೆ : ಹೃದಯ ಎಂದರೇನು?
ರಮಣ ಮಹರ್ಷಿ: ಹೃದಯವನ್ನು ಆತ್ಮದ ಪೀಠ ಅನ್ನಬಹುದು.

ಪ್ರಶ್ನೆ : ದೈಹಿಕ ಹೃದಯದ ಬಗ್ಗೆ ಹೇಳುತ್ತಿದ್ದೀರೇ?
ರಮಣ ಮಹರ್ಷಿ: ಅಲ್ಲ. ನಾನು ಹೇಳಿದ್ದು ‘ನಾನು’ ಎಂಬ ಸ್ಫುರಣೆ ಹೊಮ್ಮುವ ಕೇಂದ್ರದ ಬಗ್ಗೆ.

ಪ್ರಶ್ನೆ : ಮರಣದ ನಂತರ ಜೀವನಿಗೆ ಏನಾಗುತ್ತದೆ?
ರಮಣ ಮಹರ್ಷಿ: ಮರಣದ ನಂತರ ಏನಾಗುತ್ತದೆ ಎನ್ನುವ ಪ್ರಶ್ನೆಯು, ಈಗ ಅದನ್ನು ಕೇಳುತ್ತಿರುವ ಜೀವನಿಗೆ ಸಂಬಂಧಪಟ್ಟಿಲ್ಲ. ದೇಹವಿಲ್ಲದ ಜೀವ ಈ ಪ್ರಶ್ನೆಯನ್ನು ಕೇಳಿದರೆ, ಆಗ ಉತ್ತರ ಹೇಳುತ್ತೇನೆ. ಅಲ್ಲಿಯವರೆಗೆ ದೇಹದಲ್ಲಿ ಅಡಗಿದ ಈ ಜೀವ ತನ್ನ ಪ್ರಕೃತ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಿ. ತಾನು ಯಾರು ಎಂಬುದನ್ನು ತಿಳಿಯಲಿ. ಆಗ ಇಂತಹ ಸಂದೇಹಗಳೆಲ್ಲ ಮಾಯವಾಗುತ್ತದೆ.

ಪ್ರಶ್ನೆ : ಧ್ಯಾನ ಎಂದರೇನು?
ರಮಣ ಮಹರ್ಷಿ: ಸಾಮಾನ್ಯವಾಗಿ, ಯಾವುದಾದರೂ ವಸ್ತುವನ್ನು ಕುರಿತ ಏಕಾಗ್ರತೆಯನ್ನು ಧ್ಯಾನ ಎನ್ನಲಾಗುತ್ತದೆ. ಆದರೆ ಆತ್ಮ ಚಿಂತನೆಗೆ ನಿದಿಧ್ಯಾಸನ ಎಂಬುದು ಸರಿಯಾದ ಹೆಸರು.

ಪ್ರಶ್ನೆ : ಧ್ಯಾನವನ್ನು ಅಭ್ಯಾಸ ಮಾಡುವುದು ಹೇಗೆ?
ರಮಣ ಮಹರ್ಷಿ: ಮನಸ್ಸಿನ ಏಕಾಗ್ರತೆಗೆ ಧ್ಯಾನ ಸಹಾಯಕ. ಮುಖ್ಯವಾದ ಭಾವವು ಉಳಿದೆಲ್ಲ ಅಂಶಗಳನ್ನೂ ಅತ್ತ ತಳ್ಳುತ್ತದೆ. ಸಾಧಕನಿಂದ ಸಾಧಕನಿಗೆ ಈ ಧ್ಯಾನದ ಸ್ವರೂಪ ಬದಲಾಗುತ್ತದೆ. ಅದು ಭಗವಂತನ ಸ್ವರೂಪವನ್ನು ಕುರಿತು ಇರಬಹುದು, ಮಂತ್ರ ಜಪವಾಗಿರಬಹುದು, ಆತ್ಮ ಕೇಂದ್ರಿತವೂ ಆಗಿರಬಹುದು… ಹೀಗೇ…

Leave a Reply