ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ|
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||
ಅರ್ಥ: ಪ್ರಿಯವಾದ ಮಾತಿನಿಂದ ಎಲ್ಲಾ ಪ್ರಾಣಿಗಳೂ ಸಂತೋಷಪಡುತ್ತವೆ. ಆದ್ದರಿಂದ ಸದಾ ಪ್ರಿಯವಾದ ಮಾತುಗಳನ್ನೇ ಆಡಬೇಕು. ಪ್ರಿಯವಾದ ಮಾತಿಗೆ ಬಡತನವುಂಟೆ?
ತಾತ್ಪರ್ಯ : ಭಗವಂತನು ಕರುಣಿಸಿರುವ ಅದ್ಭುತ ಸಂಪತ್ತೆಂದರೆ ಮಾತು. ಮನುಷ್ಯನನ್ನು ಸಂತೋಷಗೊಳಿಸಲು ಎಲ್ಲಕ್ಕಿಂತಲೂ ಉತ್ತಮಮಾರ್ಗವೆಂದರೆ ಮಾತು. ಯಾವುದರಿಂದಲೂ ಸಮಾಧಾನಪಡಿಸಲಾಗದ್ದು ಒಳ್ಳೆಯ ಮಾತಿನಿಂದ ಸಾಧ್ಯವಾಗುತ್ತದೆ. ಮಾತೇಮುತ್ತು. ಮಾತೇ ಮೃತ್ಯು. ಒಳ್ಳೆಯ ಮಾತನ್ನಾಡಿ ಸಮಾಜದಲ್ಲಿ ಒಳ್ಳೆಯವರೆನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮಾತಿನಿಂದಲೇಮತ್ತೊಬ್ಬರಿಗೆ ತಲೆನೋವು ತರುವ ಜನರೂ ಇದ್ದಾರೆ. ಕೆಲವರಿಗೆ ಮಾತು ಒಂದು ಚಟ. ಆದರೆ ನಿರ್ಮಲ ಹೃದಯದಿಂದಮತ್ತೊಬ್ಬರಿಗೆ ಕಿರಿಕಿರಿಯಾಗದಂತೆ ಮಾತನಾಡುವುದು ಒಂದು ಕಲೆಯೂ ಹೌದು, ಗುಣವೂ ಹೌದು. ಪ್ರಿಯವಾದ ಮಾತಿಗೆ ಬಡತನವಿಲ್ಲ. ಪ್ರಿಯವಾದ ಮಾತನ್ನೇ ಆಡೋಣ.