ಇಂದಿನ ಸುಭಾಷಿತ, ಸೂಕ್ತಿಮುಕ್ತಾವಳಿಯಿಂದ…
ದಾತೃತ್ವಂ ಪ್ರಿಯವಕ್ತೃತ್ವಂ ಧೀರತ್ವಮುಚಿತಜ್ಞತಾ| ಅಭ್ಯಾಸೇನ ನ ಲಭ್ಯೇಯಃ ಚತ್ವಾರಃ ಸಹಜಾ ಗುಣಾಃ |
ಉದಾರವಾಗಿ ದಾನಮಾಡುವುದು, ಪ್ರಿಯವಾದ ಮಾತನ್ನಾಡುವುದು, ಧೈರ್ಯ, ಯೋಗ್ಯಾಯೋಗ್ಯತೆಯನ್ನು ನಿಶ್ಚಯಿಸುವ ಬುದ್ಧಿ ಈ ನಾಲ್ಕು ಗುಣಗಳು ಅಭ್ಯಾಸದಿಂದ ವೃದ್ಧಿಸಿಕೊಳ್ಳತಕ್ಕವಲ್ಲ; ಇವು ಹುಟ್ಟಿನಿಂದಲೇ ಬರುವ ಗುಣಗಳು. ಇವೇನೂ ವಿಶೇಷವಲ್ಲ. ಈ ಗುಣಗಳು ಯಾರಲ್ಲಾದರೂ ಕಂಡರೆ ಅದು ವಿಶೇಷವೂ ಅಲ್ಲ. ಮನುಷ್ಯ ಇರಬೇಕಾದುದೇ ಹೀಗೆ.
ಆದರೆ ನಾವು ಬೆಳೆಯುತ್ತಾ ಹೋದಂತೆಲ್ಲ ಆತ್ಮ ವಿಸ್ಮೃತಿಗೆ ಒಳಗಾಗಿ ಈ ಜನ್ಮಜಾತ ಗುಣಗಳನ್ನು ಮರೆತುಬಿಡುತ್ತೇವೆ. ಸ್ವಾರ್ಥಿಗಳಾಗುತ್ತೇವೆ. ಅವಿವೇಕಿಗಳಾಗುತ್ತೇವೆ. ಹೀಗಾಗದಂತೆ ಎಚ್ಚರವಹಿಸಿ ಮೂಲಗುಣಗಳನ್ನು ಉಳಿಸಿಕೊಂಡು ಬಾಳಿದರೆ, ಅದೇ ನಮ್ಮ ಪಾಲಿನ ಸಾಧನೆ ಅನಿಸುತ್ತದೆ.
(ಸುಭಾಷಿತ ಮತ್ತು ಅರ್ಥ : ವಿ.ಎಂ.ಉಪಾಧ್ಯಾಯ ಅವರ ಸಂಗ್ರಹದಿಂದ…)