ಅದ್ವೈತವೆಂದು ಉಚ್ಚರಿಸುವುದೆಂದರೆ, ನಮ್ಮ ಸ್ವಾರ್ಥದ ಮೇಲೆ ಕೆಂಡವಿಟ್ಟಂತೆ : ಸಾನೆ ಗುರೂಜಿ #2

Pandurang_Sadashiv_Saneಪ್ರಾಣವನ್ನೇ ಕಿತ್ತೊಗೆಯಲು ಸಿದ್ಧರಿದ್ದರೆ ಮಾತ್ರ ವೇದಾಂತದ ಮಾತನ್ನು ಆಡಬೇಕೆಂದು ಸಂತ ತುಕಾರಾಮರು ಹೇಳಿದ್ದಾರೆ. ಎರಡನೆಯವರಿಗೆ ನಮ್ಮ ಸರ್ವಸ್ವವನ್ನು ಕೊಡಲು ಉದ್ಯುಕ್ತರಾಗುವುದು ಎಂದರೆ ಅದ್ವೈತದ ದೀಕ್ಷೆಯನ್ನು ಹೊಂದಿದಂತೆ. ಆದರೆ,  ಬಾಯಿಯಿಂದ ಆಡಲಾದ ಈ ಅದ್ವೈತವು ಅಲ್ಪಸ್ವಲ್ಪವಾದರೂ ಕೃತಿಗೆ ಇಳಿದಿದ್ದರೆ ನಮ್ಮ ಸಮಾಜವು ಅಧೋಗತಿಯನ್ನು ತಲುಪುತ್ತಿರಲಿಲ್ಲ ~ ಸಾನೆ ಗುರೂಜಿ

ದ್ವೈತದ ಉನ್ನತ ಆದರ್ಶವನ್ನು ಸಾರಿದ ಋಷಿಗಳು ಸಹಜೀವಿಗಾಗಿ ಎಲ್ಲ ಬಗೆಯ ಸುಖ ಸವಲತ್ತುಗಳನ್ನೂ ಬೇಡಿದರು. ಸಮರ್ಥ ರಾಮದಾಸರು ಇದೇ ರೀತಿಯಲ್ಲಿ ವಿದ್ಯೆ, ಗಾಯನ, ಸಂಗೀತ, ಎಲ್ಲ ಹೃದ್ಯ ಮತ್ತು ಮಂಗಲ ವಸ್ತುಗಳ “ಪಾವನ ಭಿಕ್ಷೆ”ಯನ್ನು ಮಾನವ ಪ್ರಪಂಚಕ್ಕೆ ನೀಡುವಂತೆ ಭಗವಂತನಲ್ಲಿ ಬೇಡಿದ್ದಾರೆ.

ರುದ್ರಸೂಕ್ತವನ್ನು ರಚಿಸಿದ ಕವಿಯು ಸಮಾಜದ ಜೀವನಕ್ಕೆ ಅವಶ್ಯವಿದ್ದ ವಸ್ತುಗಳನ್ನು ಕೋರಿದ್ದಾನೆ. ಮತ್ತು ಅವುಗಳನ್ನು ಪೂರೈಸುವವರಿಗೆ ತನ್ನ ವಂದನೆಗಳನ್ನು ಸಲ್ಲಿಸಿದ್ದಾನೆ.

ಚರ್ಮಕಾರೇಭ್ಯೋ ನಮಃ ರಥಾಕಾರೇಭ್ಯೋ ನಮಃ ಕುಲಾಲೇಭ್ಯೋ ನಮಃ ಎಂದು ಚಮ್ಮಾರರಿಗೆ, ರಥಾಕಾರರಿಗೆ (ಬಡಗಿಗಳಿಗೆ), ಕುಂಬಾರರಿಗೆ ನಮಸ್ಕರಿಸಿದ್ದಾನೆ.

ಇವರೆಲ್ಲರೂ ತಮ್ಮ ಕೆಲಸಗಳಿಂದ ಸಮಾಜಕ್ಕೆ ಅಗತ್ಯವಸ್ತುಗಳನ್ನು ಪೂರೈಸುವವರು. ಸಮಾಜಕ್ಕೆ ಜ್ಞಾನವನ್ನು ನಿಡುವ ಮಹನೀಯನಷ್ಟೇ ಸಮಾಜಕ್ಕೆ ಗಡಿಗೆಗಳನ್ನು ಸಿದ್ಧಪಡಿಸಿ ಪೂರೈಸುವ ಕುಂಬಾರನೂ ಕೂಡಾ ಋಷಿಗೆ ಶ್ರೇಷ್ಠನು.

“There is nothing great or small in the eyes of God” ಎನ್ನುವ ಮಾತಿದೆ. ದೇವರಿಗೆ ಯಾರೂ ದೊಡ್ಡವರಲ್ಲ, ಸಣ್ಣವರೂ ಅಲ್ಲ. ಅವನ ದೃಷ್ಟಿಯಲ್ಲಿ ಸೇವೆ ಸಲ್ಲಿಸುವವರೆಲ್ಲರೂ ಪವಿತ್ರರು.

ಅಹಂಕಾರದ ಸಾವಿಲ್ಲದೆ ಸ್ವರ್ಗವಿಲ್ಲ. ಆದ್ದರಿಂದ ನಿಮ್ಮ ನಿಮ್ಮ ಅಹಂಕಾರವನ್ನು ಕುಗ್ಗಿಸಿರಿ. ಆತ್ಮಪ್ರಶಂಸೆಯನ್ನು ಬಿಡಿರಿ. ಅಹಂಕಾರವು ಕಿರಿದಾಗುತ್ತ ಹೋದಂತೆ ಪರಬ್ರಹ್ಮವು ಹಿರಿದಾಗಿ ಗೋಚರಿಸುತ್ತ ಹೋಗುವುದು.  ಬುದ್ಧನು ಅಹಂಕಾರವನ್ನು ಬಿಟ್ಟನು. ಅದರಿಂದಲೇ ಅವನು ನಿರ್ವಾಣವನ್ನು ಪಡೆದನು. ಹಾಗೆಯೇ ಅವನಿಗೆ ಇಡೀ ಸೃಷ್ಟಿಯನ್ನು ಸಮಗ್ರವಾಗಿ ಪ್ರೀತಿಸಲು ಸಾಧ್ಯವಾಯಿತು.

ಅದ್ವೈತವೆಂದು ಉಚ್ಚರಿಸುವುದೆಂದರೆ, ನಮ್ಮ ಸ್ವಾರ್ಥದ ಮೇಲೆ ಕೆಂಡವಿಟ್ಟಂತೆ. ಪ್ರಾಣವನ್ನೇ ಕಿತ್ತೊಗೆಯಲು ಸಿದ್ಧರಿದ್ದರೆ ಮಾತ್ರ ವೇದಾಂತದ ಮಾತನ್ನು ಆಡಬೇಕೆಂದು ಸಂತ ತುಕಾರಾಮರು ಹೇಳಿದ್ದಾರೆ. ಎರಡನೆಯವರಿಗೆ ನಮ್ಮ ಸರ್ವಸ್ವವನ್ನು ಕೊಡಲು ಉದ್ಯುಕ್ತರಾಗುವುದು ಎಂದರೆ ಅದ್ವೈತದ ದೀಕ್ಷೆಯನ್ನು ಹೊಂದಿದಂತೆ.

ಶಂಕರಾಚಾರ್ಯರು ಅದ್ವೈತವನ್ನು ಬೋಧಿಸಿದರು, ಅವರ ಅದ್ವೈತ ಘರ್ಜನೆಯ ಎದುರು ದ್ವೈತವಾದಿಗಳೆಲ್ಲ ಓಡಿಹೋದರು. ಆದರೆ, ನಮ್ಮ ಸಮಾಜದೊಳಗಿನ ದ್ವೈತವು ಹೋಗಲಿಲ್ಲ. ಸಮಾಜದಲ್ಲಿ ನೆಲೆಗೊಂಡ ಅಜ್ಞಾನ, ಢಂಭಾಚಾರ, ಸಾಂಪ್ರದಾಯಿಕತೆ, ಮೇಲು ಕೀಳು ಭಾವನೆ, ಅಸ್ಪೃಶ್ಯತೆ, ವೈಷಮ್ಯ, ಬಡತನ, ದಾಸ್ಯ, ದೈನ್ಯ, ದುರ್ಬಲತೆ, ಹೇಡಿತನ ಇವೆಲ್ಲವೂ ಒಂದಿಂಚೂ ಕದಲಲಿಲ್ಲ. ಇವೆಲ್ಲವೂ ದ್ವೈತದ ಸಂತಾನಗಳೇ. ಸಮಾಜದಲ್ಲಿ ಒಡಕು ಇದ್ದರೆ ಇಂಥಾ ಭೀಷಣ ಚಿತ್ರಣ ನಮಗೆ ತೋರುತ್ತದೆ. ಬಾಯಿಯಿಂದ ಆಡಲಾದ ಅದ್ವೈತವು ಅಲ್ಪಸ್ವಲ್ಪವಾದರೂ ಕೃತಿಗೆ ಇಳಿದಿದ್ದರೆ ನಮ್ಮ ಸಮಾಜವು ಅಧೋಗತಿಯನ್ನು ತಲುಪುತ್ತಿರಲಿಲ್ಲ.

ಹಾಗೆಂದೇ ಸ್ವಾಮಿ ವಿವೇಕಾನಂದರು ವ್ಯಸನಪಟ್ಟು ಹೇಳಿದ್ದು, “ಹಿಂದೂ ಧರ್ಮದಷ್ಟು ಉದಾತ್ತ ತತ್ತ್ವಗಳನ್ನು ಹೇಳುವ ಇನ್ನೊಂದು ಧರ್ಮವಿಲ್ಲ. ಹಾಗೆಯೇ, ಪ್ರತ್ಯಕ್ಷ ಆಚರಣೆಯಲ್ಲಿ ಹಿಂದುಗಳಷ್ಟು ಉದಾರಹೀನ ಜನಾಂಗ ಇನ್ನೊಂದಿಲ್ಲ” ಎಂದು.

ನೂರಾರು ವರ್ಷಗಳಿಂದ ಅದ್ವೈತದ ನಾದ ಕೇಳಿಬರುತ್ತಲೇ ಇದೆ. ಆದರೆ ನಾವು ನಮ್ಮ ಮಠಗಳನ್ನು ಬಿಟ್ಟು ಇತರರ ಹತ್ತಿರವೂ ಸುಳಿಯಲಿಲ್ಲ. ಬಿಲ್ಲರು, ಗೊಲ್ಲರು, ತೋಡರು, ತಳಸಮುದಾಯಗಳವರು – ಹೀಗೆ ನೂರಾರು ಜಾತಿಗಳಿವೆ. ಆದರೆ ನಾವು ನಮ್ಮ ಅಹಂಕಾರದಿಂದ ಅವೆಲ್ಲದರಿಂದ ದೂರ ಉಳಿದಿದ್ದೇವೆ. ಅದ್ವೈತದ ಮೇಲೆ ಟೀಕೆಯನ್ನು ಬರೆಯುವವರು, ಅದನ್ನು ಓದುವವರು, ದಿನನಿತ್ಯದ ವ್ಯವಹಾರದಲ್ಲಿ ಅದ್ವೈತಶೂನ್ಯರಾಗಿಯೇ ಇದ್ದಾರೆ.

ಅದ್ವೈತವು ಭಾರತೀಯ ಸಂಸ್ಕೃತಿಯ ಆತ್ಮ. ಈ ತತ್ತ್ವವನ್ನು ಜೀವನದಲ್ಲಿ ಕ್ರಮೇಣ ಬೆಳೆಸುವುದರಿಂದ ಮಾತ್ರ ಭಾರತೀಯ ಸಂಸ್ಕೃತಿಯನ್ನು ಬೆಳೆಸಿದಂತೆ ಆಗುತ್ತದೆ. ಅದ್ವೈತವನ್ನು ನಮ್ಮ ಎಲ್ಲ ವಿಚಾರಗಳಲ್ಲಿ, ಮಾತು – ಕೃತಿಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮಗೆ ಭಾರತೀಯ ಸಂಸ್ಕೃತಿಯ ಜೀವಾಳದ ತಿರುಳು ತಿಳಿದಿದೆ ಎನ್ನಬಹುದು. ಅದಿಲ್ಲದೆ ಈ ಸಂಸ್ಕೃತಿಯ ಹೆಸರನ್ನು ಉಚ್ಚರಿಸಿದರೆ, ಅದು ನಮ್ಮ ಪ್ರಾಚೀನ ಋಷಿಗಳಿಗೆ, ಸಾಧು ಸಂತರಿಗೆ ಮಾಡುವ ಅವಮಾನವೇ ಸರಿ!

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/07/16/sane1/

ಪಾಂಡುರಂಗ ಸದಾಶಿವ ಸಾನೆ, ಮಹಾರಾಷ್ಟ್ರದಲ್ಲಿ ಆಗಿಹೋದ (1899 – 1950) ಚಿಂತಕ, ಲೇಖಕ, ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ. ಇವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು.  ಮರಾಠಿ ಭಾಷೆಯಲ್ಲಿ ಇವರು ಹಲವು ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಶ್ಯಾಮಾ ಚಿ ಆಯಿ ಮತ್ತು ಭಾರತೀಯ ಸಂಸ್ಕೃತಿ ಮುಖ್ಯವಾದವು. ಈ ಲೇಖನವನ್ನು ‘ಭಾರತೀಯ ಸಂಸ್ಕೃತಿ’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. 

1 Comment

Leave a Reply