ನಿಜವಾದ ಪೇಂಟರ್ ತನ್ನ ಪೇಂಟಿಂಗ್ ನಲ್ಲಿ ಮತ್ತು ನಿಜವಾದ ಕವಿ ತನ್ನ ಕವಿತೆಯಲ್ಲಿ ಕರಗಿಹೋಗಿ ಬಿಡುತ್ತಾನೆ. ಇಂಥ ಸೃಜನಶೀಲತೆ ಒಬ್ಬ ಅನುಭಾವಿಗೆ ಮಾತ್ರ ಸಾಧ್ಯವಾಗುವಂಥದು.~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಬ್ಬ ಜಪಾನೀ ಚಕ್ರವರ್ತಿ ತನ್ನ ದೇಶದ ಮತ್ತು ತನ್ನ ಸುತ್ತಮುತ್ತಲಿನ ದೇಶಗಳ ಪೇಂಟರ್ ಗಳಿಗೆ ನಿಜಕ್ಕೆ ಅತ್ಯಂತ ಹತ್ತಿರವಾದ ಪೇಂಟಿಂಗ್ ಮಾಡಿಕೊಡುವಂತೆ ಮನವಿ ಮಾಡಿಕೊಂಡ. ಉದಾಹರಣೆಗೆ, ಅದು ಒಂದು ಬಾಗಿಲಿನ ಚಿತ್ರವಾದರೆ ಅದು ಪೇಂಟಿಂಗ್ ತರ ಕಾಣಬಾರದು, ಜನ ಅದು ನಿಜವಾದ ಬಾಗಿಲು ಎಂದು ತಿಳಿದು ಅದನ್ನು ನೂಕಿಕೊಂಡು ಒಳಗೆ ಪ್ರವೇಶಮಾಡಲು ಪ್ರಯತ್ನಿಸುವಂತಿರಬೇಕು. ಪೇಂಟಿಂಗ್ ಸತ್ಯಕ್ಕೆ ಇಷ್ಟು ಹತ್ತಿರವಾಗಿರಬೇಕು, ಇಲ್ಲದೇ ಹೋದರೆ ಅದನ್ನು ತಾನು ಪರಿಗಣಿಸುವುದಿಲ್ಲವೆಂದೂ, ಅಂಥದೊಂದು ಪೇಟಿಂಗ್ ಗಾಗಿ ತಾನು ಏನು ಬೇಕಾದರೂ ಬಹುಮಾನ ಕೊಡಲು ಸಿದ್ಧ ಎಂದು ಚಕ್ರವರ್ತಿ ಘೋಷಿಸಿದ.
ಸಾವಿರಾರು ಜನ ಪೇಂಟರ್ ಗಳು ಅರಮನೆಗೆ ಬಂದು ದೊರೆ ಹೇಳಿದಂತೆ ಪೇಂಟ್ ಮಾಡಲು ಪ್ರಯತ್ನಿಸಿ ವಿಫಲರಾದರು. ಸತ್ಯಕ್ಕೆ ಅಷ್ಟು ಹತ್ತಿರವಾದ ಪೇಂಟಿಂಗ್ ಮಾಡುವುದು ಯಾರಿಗೆ ತಾನೇ ಸಾಧ್ಯ?
ಒಂದು ದಿನ ಒಬ್ಬ ಪೇಂಟರ್ ಅರಮನೆಗೆ ಬಂದು ತಾನು ಅಂಥದೊಂದು ಪೇಂಟಿಂಗ್ ಮಾಡುತ್ತೇನೆಂದೂ ಮತ್ತು ತಾನು ಪೇಂಟ್ ಮಾಡುವಾಗ ಯಾರೂ ತನ್ನನ್ನು ಡಿಸ್ಟರ್ಬ್ ಮಾಡಬಾರದೆಂದೂ, ಮತ್ತು ಪೇಂಟಿಂಗ್ ಮಾಡಲು ತನಗೆ ಯಾವ ಸಮಯದ ನಿರ್ಬಂಧ ಇರಬಾರದೆಂದೂ ಹಾಗು ತಾನು ಪೇಂಟಿಂಗ್ ನ ಅರಮನೆಯ ವಿಶಾಲ ಗೋಡೆಯ ಮಾಡುತ್ತೇನೆ ಎಂದು ಹೇಳಿದ. ಪೇಂಟಿಂಗ್ ಮುಗಿಯುವವರೆಗೆ ಯಾರೂ ಒಳಗೆ ಬರಬಾರದೆಂದೂ, ಪೇಂಟಿಂಗ್ ಮುಗಿದ ಮೇಲೆ ಚಕ್ರವರ್ತಿ ಮೊಟ್ಟ ಮೊದಲು ಪೇಂಟಿಂಗ್ ನೋಡಬೇಕು ಎಂದು ಆ ಪೇಂಟರ್ ಕರಾರು ಹಾಕಿದ.
ಆ ಪೇಂಟರ್ ನ ಎಲ್ಲ ಕರಾರುಗಳಿಗೆ ಒಪ್ಪಿಗೆ ಸೂಚಿಸಲಾಯಿತು. ಆರು ವರ್ಷವಾದರೂ ಪೇಂಟಿಂಗ್ ಇನ್ನೂ ಮುಗಿದಿರಲೇ ಇಲ್ಲ. ಚಕ್ರವರ್ತಿಗೆ ವಯಸ್ಸಾಗುತ್ತಿತ್ತು ಅವನ ಆರೋಗ್ಯ ಹದಗೆಡುತ್ತಿತ್ತು. ಆದರೂ ರಾಜ ತಾನು ಕೊಟ್ಟ ಮಾತಿನಂತೆ ನಡೆದುಕೊಂಡ. ಆರು ವರ್ಷಗಳ ನಂತರ ಪೇಂಟರ್ ಹೊರಬಂದು ಪೇಂಟಿಂಗ್ ಮುಗಿದಿದೆ , ದೊರೆ ಈಗ ಈ ಪೇಂಟಿಂಗ್ ನ ನೋಡಬಹುದು ಎಂದು ತಿಳಿಸಿದ.
ಪೇಂಟರ್, ಚಕ್ರವರ್ತಿಯನ್ನ ತಾನು ಪೇಂಟಿಂಗ್ ಮಾಡಿದ ರೂಮಿನೊಳಗೆ ಕರೆದುಕೊಂಡು ಹೋದ. ಚಕ್ರವರ್ತಿಗೆ ತನ್ನ ಕಣ್ಣುಗಳನ್ನು ನಂಬಲು ಸಾಧ್ಯವಾಗಲಿಲ್ಲ. ಪೇಂಟಿಂಗ್ ಸತ್ಯದ ಪ್ರತಿರೂಪದಂತೆ ಕಾಣುತ್ತಿತ್ತು. ಅಲ್ಲಿ ಎತ್ತರದ ಮರಗಳಿದ್ದವು, ಸಣ್ಣದೊಂದು ನದಿ ಹರಿಯುತ್ತಿತ್ತು, ನದಿಯ ಪಕ್ಕ ಒಂದು ಕಾಲುದಾರಿಯಿತ್ತು. ಚಕ್ರವರ್ತಿ ಪೇಂಟರ್ ನ ಪ್ರಶ್ನೆ ಮಾಡಿದ, “ಈ ದಾರಿ ಎಲ್ಲಿಗೆ ಹೋಗುತ್ತದೆ?”
“ಆ ದಾರಿಯಲ್ಲಿ ನೀವೇ ಪ್ರಯಾಣ ಮಾಡಿ ನೋಡಿ” ಪೇಂಟರ್ ಉತ್ತರಿಸಿದ.
ನಿಮಗೆ ನಂಬಲು ಸಾಧ್ಯವಾಗದಿರಬಹುದು, ಪೇಂಟರ್ ಚಕ್ರವರ್ತಿಯ ಕೈ ಹಿಡಿದುಕೊಂಡು ಆ ಕಾಲುದಾರಿಯ ಹೊರಟವನು ವಾಪಸ್ ಬರಲೇ ಇಲ್ಲ.
ಇದು ನಿಜವೋ ಸುಳ್ಳೋ ಎಂದು ನೀವು ತರ್ಕ ಮಾಡಿದರೆ ಒಂದು ಮುಖ್ಯ ಅಂಶವನ್ನು ಮಿಸ್ ಮಾಡಿಕೊಳ್ಳುತ್ತೀರಿ. ಇದು ಒಂದು ದೃಷ್ಟಾಂತ ಕಥೆ. ವಾಸ್ತವ ಅಲ್ಲ ಆದರೆ ಖಂಡಿತವಾಗಿಯೂ ಸತ್ಯ.
ನಿಜವಾದ ಪೇಂಟರ್ ತನ್ನ ಪೇಂಟಿಂಗ್ ನಲ್ಲಿ ಮತ್ತು ನಿಜವಾದ ಕವಿ ತನ್ನ ಕವಿತೆಯಲ್ಲಿ ಕರಗಿಹೋಗಿ ಬಿಡುತ್ತಾನೆ. ಇಂಥ ಸೃಜನಶೀಲತೆ ಒಬ್ಬ ಅನುಭಾವಿಗೆ ಮಾತ್ರ ಸಾಧ್ಯವಾಗುವಂಥದು. ಅನುಭಾವಿ ತನ್ನ ಸೃಷ್ಟಿಯಲ್ಲಿ ಕರಗಿಹೋಗಿಬಿಡುತ್ತಾನಾದ್ದರಿಂದ ಆ ಪೇಂಟಿಂಗ್ ಮೇಲೆ, ಆ ಕವಿತೆಯ ಮೇಲೆ ಸಹಿ ಮಾಡುವುದನ್ನು ಮರೆತುಬಿಡುತ್ತಾನೆ. ಕವಿಗೆ ಇದು ಸಾಧ್ಯ. ಅವನ ಸೃಜನಶೀಲತೆಯ ಉತ್ತುಂಗದಲ್ಲಿ ಕಿಟಕಿ ಕೆರೆದುಕೊಳ್ಳುತ್ತದೆ ಮತ್ತು ಕವಿ ಕಿಟಕಿಯಾಚಿಗಿನದ್ದನ್ನು ಕಾಣುತ್ತಾನೆ ಮತ್ತು ನಂತರ ಕಿಟಕಿ ಮುಚ್ಚಿಕೊಂಡು ಬಿಡುತ್ತದೆ.

