ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ ಮೊದಲನೆ ಕಂತು ಇಲ್ಲಿದೆ…
ಬೇರಿನ ಐಭೋಗವನ್ನ
ಮರಗಳು ಬಚ್ಚಿಡುವುದು ಯಾಕೆ?
*
ಶಾಂತಿ ಅಂದರೆ ಪಾರಿವಾಳದ ಶಾಂತಿ ಮಾತ್ರಾನಾ,
ಚಿರತೆ ಯುದ್ಧ ಡಿಕ್ಲೇರ್ ಮಾಡತ್ತಾ?
*
ರಾತ್ರಿಯ ಹ್ಯಾಟಿಗೆ
ಅಷ್ಟೊಂದು ತೂತು ಯಾಕೆ?
*

*
ಸ್ವರ್ಗದಲ್ಲಿ
ಎಷ್ಟು ದೇವಸ್ಥಾನ ಇವೆ?
*
ಹಳದೀ ಅನಿಸಿದರೆ
ಎಲೆಗಳು ಆತ್ಮಹತ್ಯೆ ಮಾಡಿಕೊಳ್ತವೆ, ಯಾಕೆ?
*
ಬೆಂಕಿ ಹತ್ತಿರ ಬಂದ ಹಳೆ ಬೂದಿ
ಏನಂತ ಹೇಳತ್ತೆ?
*

*
ದೊಡ್ಡೋರೆಲ್ಲ
ಸಾವಿನ ಭೂಗೋಳದ ಪಾಠ ಮಾಡತಾರಲ್ಲ,
ಯಾಕೆ?
*
ಆಕಾಶದ ತುಂಬ
ಕಣ್ಣಿಗೆ ಕಾಣದೆ ಮಾಯವಾಗಿರೋ ಅಕ್ಷರಗಳು
ಇರುತ್ತವಾ?
*
ಕಿಸ್ಟೊಫರ್ ಕೊಲಂಬಸ್
ಸ್ಪೇನ್ ದೇಶ ಯಾಕೆ ಕಂಡು ಹಿಡೀಲಿಲ್ಲ?
*

*
ಉದುರದಿರುವ ಕಂಬನಿ
ಹೊಂಡದಲ್ಲಿ ಕಾಯುತ್ತಾ ಇರುತ್ತವಾ?
*
ಮೋಡ ಯಾಕೆ
ಅಷ್ಟೊಂದು ಅಳತ್ತೆ?
*
ಇವತ್ತಿನ ಸೂರ್ಯ ನಿನ್ನೆಯ ಸೂರ್ಯಾನೇನಾ?
ಇವತ್ತಿನ ಬೆಂಕಿ ನೆನ್ನೆಯ ಬೆಂಕಿ ಒಂದೇನಾ?
ಇಷ್ಟೊಂದು ಸಮೃದ್ಧಿ ಹೊತ್ತು ತೇಲಿ ಬರುವ ಮೋಡ ರಾಶಿಗೆ
ಥ್ಯಾಂಕ್ಯೂ ಹೇಳೋದು ಹೇಗೆ?

ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್ ಆಫ್ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸಲಿದೆ.
(Illustrations: Chetana Thirthahalli)


[…] ಮೊದಲನೆ ಕಂತು ಇಲ್ಲಿ ನೋಡಿ : https://aralimara.com/2024/05/26/boq-2/ […]
LikeLike