ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ ಎರಡನೆ ಕಂತು ಇಲ್ಲಿದೆ…
ಮೊದಲನೆ ಕಂತು ಇಲ್ಲಿ ನೋಡಿ : https://aralimara.com/2024/05/26/boq-2/
** ಭಾಗ 2 **
ಕರೀಚೀಲದ ತುಂಬ ಕಂಬನಿ ಹೊತ್ತು
ಈ ಸಿಡಿಲ ಮೋಡ ಎಲ್ಲಿಂದ ಬರುತ್ತಾವೆ?
*
ಅಕ್ಕಿರಾಶಿ- ಅಷ್ಟೊಂದು ಬಿಳಿಯ ಹಲ್ಲು
ಯಾರನ್ನು ನೋಡಿ ನಗು ಬೀರುತಿದೆ?
*
ಕಿತ್ತಳೆಯ ಮರದ ಎಲ್ಲಾ ಹಣ್ಣು
ಎಳೆಬಿಸಿಲ ಹೊನ್ನು ಹೇಗೆ ಒಂದೇ ಸಮ ಹಂಚಿಕೊಳ್ಳುತ್ತವೆ?

ಕಂಬನಿ ಅಂದರೆ
ದುಃಖದ ಕಡಲು ಸೇರಲು ಹೊರಟ ಅದೃಶ್ಯ ಹೊಳೆಯಾ?
*
ಗುರುವಾರ ಅನ್ನೋದು ಯಾಕೆ ಒಂದು ಸಲವಾದರೂ
ಶುಕ್ರವಾರ ಆದಮೇಲೆ ಬರಲ್ಲ?
*
ವಸಂತ ಯಾಕೆ ಮತ್ತೆ
ಹಸಿರು ಡ್ರೆಸ್ ಹಾಕ್ಕೊಂಡು ಬಂದಿದೆ?

ಗೋಧಿ ಹೊಲದಲ್ಲಿರೋ ಚಿನ್ನಾನೆಲ್ಲ ಯಾರಾದರೂ ಎಣಿಸಿದ್ದಾರಾ?
ಹಕ್ಕಿಯಿಂದ ಹಕ್ಕಿಗೆ ಹಾರುವ ಹೂವನ್ನ ಏನಂತ ಕರೀತಾರೆ?
*
ಸಕ್ಕರೆ ಉಪ್ಪು ಎರಡೂ ಸೇರಿ
ಬಿಳೀ ಗೋಪುರ ಕಟ್ಟಬಹುದು, ಅಲ್ಲವಾ?
*
ಎಲೆ ಉದುರೋ ಕಾಲ ಹಳದೀ ಹಸು ಥರಾ ಇರತ್ತೆ,
ನೋಡಿದ್ದೀರಾ?

ಎಲೆ ಉದುರೋ ಕಾಲ
ಬರೀ ಅಸ್ಥಿಪಂಜರ ಇರೋ ಪ್ರಾಣಿ ಥರಾ,
ಅಲ್ಲವಾ?
*
ನರಕ ಇಲ್ಲದೇ ಬದುಕೋದು ಕೆಟ್ಟದ್ದಾ?
ನರಕ ನಾವೇ ಕಟ್ಟಿಕೋ ಬಹುದು, ಅಲ್ಲವಾ?
*
ಈ ಗೊಂಚಲಲ್ಲೇ ಹಣ್ಣುಗಳ ಪಾರ್ಟಿ ನಡೀತಿದೆ
ಅಂತ ಒಂದೊಂದು ದ್ರಾಕ್ಷಿಗೂ ಹೇಗೆ ಗೊತ್ತಾಗತ್ತೆ?

ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್ ಆಫ್ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸಲಿದೆ.
(Illustrations: Chetana Thirthahalli)


[…] 2ನೇ ಕಂತು ಇಲ್ಲಿ ನೋಡಿ : https://aralimara.com/2024/06/01/neruda/ […]
LikeLike