ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 13ನೇ ಕಂತು ಇಲ್ಲಿದೆ…
ಹಿಟ್ಲರನಿಗೆ ಯಾವ ಕಠಿಣ ಶಿಕ್ಷೆ
ಕೊಡುತ್ತಾರೆ ನರಕದಲ್ಲಿ?
ಗೋಡೆಗಳಿಗೆ ಬಣ್ಣ ಬಳಿಯುತ್ತಾನೋ
ಕೊಳೆತ ಕಳೇಬರಗಳಿಗೋ?
ಸುಡುತಿರುವ ಹೆಣದಿಂದ ಏಳುವ ಹೊಗೆಯನ್ನು ಉಸಿರಾಡಿಸುತ್ತಾರೋ
ಸುಟ್ಟ ಅಷ್ಟೊಂದು ಮಕ್ಕಳ ಬೂದಿಯನ್ನು ಮುಕ್ಕಿಸುತ್ತಾರೋ?
ಅಥವಾ ಅವನು ಸತ್ತಾಗಿನಿಂದ
ರಕ್ತವನ್ನು ಲಾಳಿಕೆಯಲ್ಲಿ ಕುಡಿಸುತಿದ್ದಾರೋ?
ಶವಗಳ ಬಾಯಿಂದ ಕಿತ್ತ ಚಿನ್ನದ ಹಲ್ಲುಗಳನ್ನು
ಅವನ ಬಾಯಿಗೆ ಕೂರಿಸಲು ಸುತ್ತಿಗೆಯಲ್ಲಿ ಹೊಡೆಯುತ್ತಾರೋ?

ಅಥವಾ ಅವನನ್ನು ಮಲಗಿಸುತ್ತಾರೋ
ಮುಳ್ಳು ತಂತಿಯ ಸುರುಳಿಯ ಮೇಲೆ?
ನರಕದ ದೀಪಗಳ ಚಿತ್ತಾರ
ಅವನ ಚರ್ಮದ ಮೇಲೆ ಹಚ್ಚೆ ಹುಯ್ಯುತ್ತಾರೋ?
ಜ್ವಾಲೆಗಳೆಂಬ ಕಪ್ಪು ನಾಯಿಗಳ ಗುಂಪು
ಅವನನ್ನು ನಿಷ್ಕರುಣೆಯಿಂದ ಕಚ್ಚುತ್ತಲೇ ಇರುತ್ತವೋ?
ಅಥವಾ ಅವನು ವಿಶ್ರಾಂತಿಯೇ ಇರದೆ
ಹಗಲೂ ಇರುಳೂ ಅವನ ಬಂದಿಗಳ ಜೊತೆ ನಡೆಯುತ್ತಲೇ ಇರಬೇಕೋ?
ಅಥವಾ ವಿಷಾನಿಲಕ್ಕೆ ಮೈಯೊಡ್ಡಿ
ಸಾಯದೆಯೇ ಸಾಯುತ್ತಾ ಸದಾ ಕಾಲ ಇರಬೇಕೋ?

ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್ ಆಫ್ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸುತ್ತಿದೆ.
(Illustrations: Chetana Thirthahalli)


[…] ಹಿಂದಿನ ಕಂತು ಇಲ್ಲಿ ನೋಡಿ: https://aralimara.com/2024/07/07/neruda-12/ […]
LikeLike