ಖಲೀಲ್ ಗಿಬ್ರಾನನ ಕತೆಗಳು #9 : ಉಡುಗೊರೆ

ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ

ಬೇಚಾರ್ ನಗರದ ರಾಜನನ್ನು ಕಂಡರೆ ಪ್ರಜೆಗಳಿಗೆಲ್ಲ ಪ್ರೀತಿ ಇತ್ತು, ಗೌರವ ಇತ್ತು.
ಅತೀ ಬಡವನೊಬ್ಬ ಮಾತ್ರ ರಾಜನ ಬಗ್ಗೆ ಕಹಿಯಾದ ಮಾತು ಆಡುತಿದ್ದ. ರಾಜನನ್ನು ಬಾಯಿಗೆ ಬಂದ ಹಾಗೆ ಬೈಯುತಿದ್ದ.
ಆ ವಿಷಯ ರಾಜನಿಗೆ ಗೊತ್ತಿತ್ತು, ಸಹನೆಯಿಂದ ಸುಮ್ಮನೆ ಇದ್ದ.

ಚಳಿಗಾಲದಲ್ಲೊಂದು ಇರುಳಿನಲ್ಲಿ ರಾಜನ ಸೇವಕ ಅತೀ ಬಡವನ ಮನೆಗೆ ಬಂದ. ಒಂದು ಚೀಲ ಹಿಟ್ಟು, ಒಂದು ಚೀಲ ಸಕ್ಕರೆ, ಒಂದು ಚೀಲ ಸಾಬೂನು ತಂದಿದ್ದ-ನಮ್ಮ ರಾಜರು ಇವನ್ನೆಲ್ಲ ತಮಗೆ ನೆನಪಿನ ಕಾಣಿಕೆಯಾಗಿ ಕಳಿಸಿದಾರೆ-ಅಂದ.

ಬಡವ ಉಬ್ಬಿಹೋದ. ರಾಜ ನನಗೆ ಗೌರವ ತೋರುವುದಕ್ಕೆ ಕಾಣಿಕೆ ಕಳಿಸಿದಾನೆ ಅನ್ನಿಸಿ ಹೆಮ್ಮೆ ಪಟ್ಟ. ಬಿಷಪ್‍ನ ಹತ್ತಿರ ಹೋಗಿ ನಡೆದದ್ದನ್ನೆಲ್ಲಾ ಹೇಳಿದ-ನೋಡಿದಿರಾ, ನಾನು ಅವನ ಬಗ್ಗೆ ಪ್ರೀತಿ ತೋರಬೇಕು ಅನ್ನುವುದು ರಾಜನ ಆಸೆ.ಷ ನನ್ನ ಪ್ರೀತಿ ಗೌರವ ಬಯಸಿ ಈ ಕಾಣಿಕೆ ಕಳಿಸಿದಾನೆ-ಅಂದ.

ಬಿಷಪ್ ಆ ಮಾತು ಕೇಳಿ-ಅಯ್ಯಾ, ರಾಜಕುಮಾರ ಎಷ್ಟು ವಿವೇಕಿ! ನಿನಗೆ ಏನೂ ಅರ್ಥವಾಗಿಲ್ಲ. ರಾಜ ಸಂಕೇತಗಳನ್ನು ಬಳಸಿ ನಿನಗೆ ಸಂದೇಶ ಕಳಿಸಿದಾನೆ. ನಿನ್ನ ಹಸಿದ ಹೊಟ್ಟೆಗೆ ಹಿಟ್ಟು, ನಿನ್ನ ಕೊಳಕು ಮೈ ತೊಳಕೊಳ್ಳಲು ಸೋಪು, ಕಹಿ ಮಾತು ಆಡುವ ನಿನ್ನ ನಾಲಗೆಗೆ ಸಕ್ಕರೆ ಕಳಿಸಿದಾನೆ-ಅಂದ.

ಅವತ್ತಿನಿಂದ ಆ ಮನುಷ್ಯ ತನ್ನ ಬಗ್ಗೆಯೇ ಲಜ್ಜೆ ಅನುಭವಿಸುತಿದ್ದ. ರಾಜನ ಬಗ್ಗೆ ಇದ್ದ ದ್ವೇಷ ಹೆಚ್ಚಾಯಿತು. ರಾಜನ ಮನಸು ತಿಳಿಸಿ ಹೇಳಿದ ಬಿಷಪ್‍ನ ಮೇಲೆ ಇನ್ನೂ ಮಿಗಿಲಾದ ದ್ವೇಷ ಹುಟ್ಟಿತು.
ಅವತ್ತಿನಿಂದ ಮೌನವಾಗಿಬಿಟ್ಟ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.