ಖಲೀಲ್ ಗಿಬ್ರಾನನ ಕತೆಗಳು #10 : ಶಾಂತಿ-ಯುದ್ಧ

ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ

ಮೂರು ನಾಯಿ ಮಾತಾಡುತ್ತಾ ಬಿಸಿಲು ಕಾಯಿಸಿಕೊಂಡು ಕೂತಿದ್ದವು.

ಮೊದಲ ನಾಯಿ ಹೇಳಿತು-ಶ್ವಾನಸಾಮ್ರಾಜ್ಯದಲ್ಲಿ ನಾವು ಬದುಕಿದೇವೆ ಅನ್ನುವುದೇ ದೊಡ್ಡ ಬೆರಗು. ನಾವೆಲ್ಲ ಎಷ್ಟು ಆರಾಮವಾಗಿ ಕಡಲಮೇಲೆ, ಭೂಮಿ ಮೇಲೆ, ಆಕಾಶದಲ್ಲಿ ಕೂಡ ವಿಹಾರ ಮಾಡಬಹುದು ಅಲ್ಲವಾ! ನಮ್ಮ ಸುಖದ ಬದುಕಿಗೆ, ನಮ್ಮ ಕಣ್ಣು, ಮೂಗಿನ ಸುಖಕ್ಕೂ ಎಷ್ಟೊಂದು ಸಂಶೋಧನೆ ನಡೆದಿವೆ-ಅಂದಿತು.

ಎರಡನೆಯ ನಾಯಿ-ನಮ್ಮ ಕಲೆಗಳೂ ಅಭಿವೃದ್ಧಿಯಾಗಿವೆ. ಆಕಾಶದ ಚಂದ್ರನನ್ನು ನೋಡಿದರೆ ನಮ್ಮ ಹಿರೀಕರಿಗಿಂತ ಇನ್ನೂ ಲಯಬದ್ಧವಾಗಿ ಊಳಿಡುವುದನ್ನು ಕಲಿತಿದ್ದೇವೆ. ನೀರಲ್ಲಿ ನಮ್ಮ ಮುಖ ನೋಡಿದರೆ ನಿನ್ನೆಗಿಂತ ಇವತ್ತು ನಮ್ಮ ಎಲ್ಲಾ ಲಕ್ಷಣ ನಿಚ್ಚಳವಾಗಿ ಕಾಣತ್ತೆ-ಅಂದಿತು.

ಮೂರನೆಯ ನಾಯಿ ಹೇಳಿತು-ನನಗೆ ಕುತೂಹಲ ಹುಟ್ಟಿಸುವ ವಿಚಾರ, ನನಗೆ ಅರ್ಥವಾಗದ ವಿಚಾರ ಏನಪ್ಪಾ ಅಂದರೆ ಶ್ವಾನ ಸಾಮ್ರಾಜ್ಯದ ಎಲ್ಲಾ ನಾಯಿ ನಡುವೆ ಎಷ್ಟೊಂದು ಶಾಂತಿ ನೆಲೆಸಿದೆ, ಒಂದೊಂದು ನಾಯಿ ರಾಜ್ಯವೂ ಇನ್ನೊಂದು ನಾಯಿ ರಾಜ್ಯವನ್ನು ಅರ್ಥಮಾಡಿಕೊಂಡು ಬದುಕತಾ ಇದೆ-ಅಂದಿತು.

ಆ ಅದೇ ಕ್ಷಣದಲ್ಲಿ ನಾಯಿ ಹಿಡಿಯುವವರು ಬರತಾ ಇರುವುದು ಕಂಡಿತು.
ಮೂರೂ ನಾಯಿ ತಟ್ಟನೆದ್ದು ದಿಕ್ಕಾಪಾಲಾಗಿ ಓಡಿದವು.

ಓಡಿ, ಓಡಿ, ನಾಗರಿಕತೆ ನಮ್ಮ ಬೆನ್ನು ಹತ್ತಿ ಬರುತಿದೆ, ಓಡಿ ಓಡಿ! ಎಂದು ಕೂಗುತ್ತ ಬೀದಿ ಬೀದಿಯಲ್ಲಿ ಓಡಿತು ಮೂರನೆಯ ನಾಯಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.