ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ರಾಜ ರಾಣಿಗೆ ಹೇಳಿದ-‘ನೀನು ನಿಜವಾದ ರಾಣಿಯಲ್ಲ. ಕೀಳು ಹೆಂಗಸು. ನನ್ನ ಹೆಂಡತಿ ಆಗುವುದಕ್ಕೆ ಇರಬೇಕಾದ ಗಂಭೀರ ನಿನ್ನಲ್ಲಿಲ್ಲ’
ರಾಣಿ ಅಂದಳು- ನೀನು ರಾಜ ಅಂದುಕೊಂಡಿದೀಯ, ಕೀಚಲು ದನಿಯ ಭಿಕಾರಿ ನೀನು ಅಷ್ಟೇ.
ರಾಜನಿಗೆ ಸಿಟ್ಟು ಬಂತು
ಬಂಗಾರದ ರಾಜದಂಡವನ್ನೆತ್ತಿ ರಾಣಿಯ ಹಣೆಗೆ ಮೊಟಕಿದ
ಆ ಕ್ಷಣದಲ್ಲಿ ಅಲ್ಲಿಗೆ ಬಂದ ಮಹಾ ಮಂತ್ರಿ ಕಣ್ಣೆದುರು ನಡೆದದ್ದು ಕಂಡು ಹೀಗಂದ
ಮಹಾ ಪ್ರಭೂ,
ಆ ರಾಜದಂಡವನ್ನು ಮಾಡಿದವನು ನಮ್ಮ ನಾಡಿನ ಮಹಾನ್ ಶಿಲ್ಪಿ
ನಿಮ್ಮ ಕಾಲವಾದಮೇಲೆ ಜನ ನಿಮ್ಮನ್ನೂ ಮಹಾರಾಣಿಯವರನ್ನೂ ಮರೆಯುತಾರೆ
ಈ ರಾಜದಂಡ ಮಾತ್ರ ಅಪೂರ್ವ ಕಲಾಕೃತಿಯಾಗಿ ಹಲವು ತಲೆಮಾರು ಉಳಿದೇ ಇರುವುದು
ನೀವೀಗ ಮಹಾರಾಣಿಯವರನ್ನು ರಾಜದಂಡದಿಂದ ಹೊಡದಿದ್ದೀರಿ
ಈ ಕ್ಷಣದಿಂದ ರಾಜದಂಡಕ್ಕೆ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ

